ರಾಜ್ಯ ಸರ್ಕಾರದಿಂದ ರೂ 628 ಕೋಟಿ ಅನುದಾನ ರೈತರ ಖಾತೆಗೆ ಬಿಡುಗಡೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು :  ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಪರಿಹಾರ ಕ್ರಮವಾಗಿ ರೂ 2000 ಕೋಟಿ ಅನುದಾನವನ್ನು ನಿಗದಿ ಪಡಿಸಿದ್ದು, ಈಗಾಗಲೇ ರೂ 628 ಕೋಟಿ ಹಣವನ್ನು ನೇರವಾಗಿ 33 ಲಕ್ಷ ರೈತರ ಖಾತೆಗೆ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. 

  ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಡನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, 1.6 ಲಕ್ಷ ರೈತರ ಬ್ಯಾಂಕ್ ಖಾತೆಯ ಮಾರ್ಪಾಡು ಪ್ರಕ್ರಿಯೆ  ನಡೆಯುತ್ತಿದ್ದು, ಇದು ಸರಿಯಾದ ಕೂಡಲೇ ಅವರ ಖಾತೆಗಳಿಗೂ ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು ಎಂದರು.

 

  ಅರ್ಹ ರೈತರಿಗೆ ಬರ ಪರಿಹಾರ ತಲುಪಿಸುವ ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬರ ಪರಿಹಾರ ಬಿಡುಗಡೆ ಮಾಡಿರುವ ರೈತ ಪಟ್ಟಿಯನ್ನು ಪ್ರಕಟ ಮಾಡಬೇಕು ಎಂದು ಸೂಚನೆ ನೀಡಿರುವ ಹಿನ್ನೆಲೆ, ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ರೈತರ ಹೆಸರು ಪ್ರಕಟಿಣೆ ಮಾಡಲಾಗಿದೆ. ಆ ಪಟ್ಟಿಯಲ್ಲಿ  ರೈತರ ಹೆಸರು ಬಿಟ್ಟು ಹೋಗಿದ್ದಲ್ಲಿ, ಅಂತಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸ್ಥಳೀಯ ಕಂದಾಯ ಇಲಾಖೆ ಕಚೇರಿಗೆ ಭೇಟಿ ನೀಡಿ, ಹೆಸರು ಸೇರ್ಪಡಿಕೊಳ್ಳಬೇಕು ಎಂದು ಸಚಿವರು ರೈತರಲ್ಲಿ ಕೋರಿದರು. 

  ರಾಜ್ಯ ಸರ್ಕಾರವು ರಾಜ್ಯದ 223 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳು ಎಂದು ಘೋಷಿಸಿದ್ದು, ಕುಡಿಯುವ ನೀರು, ಮೇವು ಹಾಗೂ ಇತರೆ ಮೂಲಭೂತ ಸಮಸ್ಯೆಗಳ ನಿವಾರಣೆಗೆ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಳ ಖಾತೆಗಳಿಗೆ ರೂ 870 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಹಾರದ ಹಣವನ್ನು ಸಮರ್ಪಕವಾಗಿ ಬಳಸಲು, ಶಾಸಕರ  ಅಧ್ಯಕ್ಷತೆಯಲ್ಲಿ 223 ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದ್ದು, ರಾಜ್ಯಾದ್ಯಂತ ಇಲ್ಲಿಯವರೆಗೆ, 431 ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಲಾಗಿದೆ ಎಂದ ಕಂದಾಯ ಸಚಿವರು, ಜಿಲ್ಲಾ ಮಟ್ಟದಲ್ಲಿ 236 ಟಾಸ್ಕ್ ಫೋರ್ಸ್ ಸಮಿತಿಯ ಸಭೆಗಳು ನಡೆದಿದೆ ಎಂದು ಹೇಳಿದರು.

  ರಾಜ್ಯದ 156 ಹಳ್ಳಿಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದಮೇಲೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಅಲ್ಲದೇ 46 ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದಲ್ಲಿನ 46 ವಾರ್ಡ್ ಗಳಲ್ಲಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

 

     ಕಳೆದ ಐದು ವರ್ಷದ ಅಂಕಿಅಂಶಗಳ ಆಧಾರದಮೇಲೆ, ಮುಂಜಾಗ್ರತಾ ಕ್ರಮವಾಗಿ, ಮುಂಬರುವ ದಿನಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ 782 ಗ್ರಾಮಗಳು ಹಾಗೂ 1193 ವಾರ್ಡ್ ಗಳನ್ನು ಗುರುತಿಸಲಾಗಿದ್ದು, ಅಂತಹ ಪ್ರದೇಶಗಳಲ್ಲಿ ಸಹ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮವನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆಯ ನಿರ್ವಹಣೆಗೆ ಹೊಸ ಕೊಳವೆ ಬಾವಿಗಳ ಕೊರೆಯುವ ಅವಶ್ಯಕತೆ ಇದ್ದಲ್ಲಿ, ಕೊಳವೆ ಬಾವಿಗಳನ್ನು ಕೊರೆಯಲು ಕ್ರಮವಹಿಸುವಂತೆ ಮುಖ್ಯಮಂತ್ರಿಯವರು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

   ಮೇವಿನ ಸಮಸ್ಯೆ ನೀಗಿಸಲು 2023ರ ನವೆಂಬರ್ ತಿಂಗಳಲ್ಲಿ ಮೊದಲ ಹಂತದ ಕ್ರಮವಾಗಿ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ಗಳನ್ನು ರೈತರಿಗೆ ನೀಡಲಾಗಿದ್ದು, ಎರಡನೇ ಹಂತವಾಗಿ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ಗಳನ್ನು ರೈತರಿಗೆ ವಿತರಿಸಲು ಪಶುಸಂಗೋಪನೆ ಇಲಾಖೆಗೆ ಹಣವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದ ವಿವಿಧೆಡೆ 3 ಗೂಶಾಲೆಗಳನ್ನು‌ ಸ್ಥಾಪಿಸಲಾಗಿದ್ದು, ಇದರ ಜೊತೆಗೆ ಮೇವಿನ ದಾಸ್ತಾನಿಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ  ಕೈಗೊಂಡಿದೆ ಎಂದು ಹೇಳಿದರು.

 

   ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ರೂ 18,178 ಕೋಟಿ ಬರ ಪರಿಹಾರ ಅನುದಾನವನ್ನು ಬಿಡುಗಡೆ ಮಾಡಲು ಮನವಿಯನ್ನು ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಯವರು ಸಹ ಪ್ರಧಾನಮಂತ್ರಿಯವರನ್ನು ಖುದ್ದು ಭೇಟಿಯಾಗಿ ಬರ ಪರಿಹಾರದ ಅನುದಾನ ಬಿಡುಗಡೆಗೆ ಮಾಡಲು ಮನವಿ ಮಾಡಿದ್ದಾರೆ. ಕೇಂದ್ರ ಗೃಹ ಸಚಿವರನ್ನು ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯ ಸರ್ಕಾರದ ಹಲವು ಸಚಿವರು ಖುದ್ದು ಭೇಟಿ ಮಾಡಿ, ಬರ ಪರಿಹಾರ ನೀಡಲು ಮನವಿಯನ್ನು ಮಾಡಿದ್ದಾರೆ. ಈಗಾಗಲೇ ಬರ ಪರಿಹಾರಕ್ಕೆ ಮನವಿಯನ್ನು ಸಲ್ಲಿಸಿ ನಾಲ್ಕು ತಿಂಗಳು ಕಳೆದಿದ್ದು, ಕೇಂದ್ರ ಗೃಹ ಸಚಿವರು ರಾಜ್ಯ ಪ್ರವಾಸದಲ್ಲಿರುವ, ಈ ಸಂದರ್ಭದಲ್ಲಿ, ಬರ ಪರಿಹಾರ ಘೋಷಿಸಿದರೆ ರಾಜ್ಯದ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top