ಬೆಂಗಳೂರು: ಪ್ರಸಿದ್ಧ ರಿಯಲ್ ಎಸ್ಟೇಟ್ ಸಂಸ್ಥೆ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ತನಿಖೆ ಆರಂಭಿಸಿದೆ. ಜನವರಿ 30ರಂದು ಬೆಂಗಳೂರು ನಗರದ ಅಶೋಕನಗರ ವ್ಯಾಪ್ತಿಯಲ್ಲಿರುವ ಕಚೇರಿಯಲ್ಲಿ ರಾಯ್ ಅವರು ಗುಂಡಿನ ಗಾಯಗಳೊಂದಿಗೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಘಟನೆ ನಡೆದ ವೇಳೆ ಅವರ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ಶೋಧ ಕಾರ್ಯ ನಡೆಯುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಪ್ರಕರಣವು ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸಿ.ಜೆ. ರಾಯ್ ಸಾವು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯದ ಗೃಹ ಸಚಿವ ಡಾ||.ಜಿ. ಪರಮೇಶ್ವರ್ ಅವರು, ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ಅವರ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ. ತನಿಖೆ ಈಗಾಗಲೇ ಆರಂಭವಾಗಿದೆ. ವರದಿ ಬಂದ ಬಳಿಕವೇ ಸ್ಪಷ್ಟ ಚಿತ್ರಣ ದೊರೆಯಲಿದೆ. ತನಿಖೆ ಮುಗಿಯುವವರೆಗೆ ಯಾವುದೇ ಊಹಾಪೋಹಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಸಿ.ಜೆ. ರಾಯ್ ಅವರ ಅಂತ್ಯಕ್ರಿಯೆ ಭಾನುವಾರ ಬನ್ನೇರುಘಟ್ಟ ಸಮೀಪದ ಕಾನ್ಫಿಡೆಂಟ್ ಕ್ಯಾಸ್ಕೆಡ್ನಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿತು. ಅಂತ್ಯಕ್ರಿಯೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಯ್ ಅವರ ಸಹೋದರ ಸಿ.ಜೆ. ಬಾಬು, “ಜನವರಿ 30ರ ಬೆಳಗ್ಗೆ 10.40ರ ವೇಳೆಗೆ ನಾನು ಥೈಲ್ಯಾಂಡ್ನಲ್ಲಿ ಇದ್ದಾಗ ರಾಯ್ ನನಗೆ ಕರೆ ಮಾಡಿದ್ದರು. ನಾನು ಯಾವಾಗ ವಾಪಸ್ ಬರುತ್ತೇನೆ ಎಂದು ಮಾತ್ರ ಕೇಳಿದರು. ಆ ವೇಳೆ ಯಾವುದೇ ಆದಾಯ ತೆರಿಗೆ ದಾಳಿ ಅಥವಾ ಒತ್ತಡದ ಬಗ್ಗೆ ಅವರು ಹೇಳಿರಲಿಲ್ಲ ಎಂದು ಹೇಳಿದರು.
“ರಾಯ್ ಜನವರಿ 27ರಂದು ಬೆಂಗಳೂರಿಗೆ ಬಂದಿದ್ದು, ಹೋಟೆಲ್ನಲ್ಲಿ ತಂಗಿದ್ದರು. ನಾನು ಜನವರಿ 28ರಂದು ಮದುವೆಗೆ ಹೊರಟಿದ್ದೆ. ಎಸ್ಐಟಿ ತನಿಖೆಯಿಂದ ಏನು ಹೊರಬರುತ್ತದೆ ಎಂಬುದನ್ನು ಕಾದು ನೋಡೋಣ ಎಂದು ತಿಳಿಸಿದರು.
ರಾಯ್ ಅವರ ಪುತ್ರ ರೋಹಿತ್ ರಾಯ್ ಮಾತನಾಡಿ, ನನ್ನ ತಂದೆ ದೊಡ್ಡ ಉದ್ಯಮಿ. ಏನಾಗಿದೆ ಎಂಬುದನ್ನು ಇನ್ನೂ ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ಇಂದು ಅಂತ್ಯಕ್ರಿಯೆಗೆ ಬಂದ ಎಲ್ಲರಿಗೂ ಧನ್ಯವಾದ. ಈಗ ಮಾತನಾಡಲು ನನಗೆ ಶಕ್ತಿ ಇಲ್ಲ. ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ಈ ನಡುವೆ, ರಾಯ್ ಅವರ ಸಾವಿಗೆ ಆದಾಯ ತೆರಿಗೆ ಇಲಾಖೆಯ ತನಿಖೆಯ ಒತ್ತಡ ಕಾರಣವಾಗಿರಬಹುದು ಎಂಬ ಆರೋಪಗಳು ಕೇಳಿಬಂದಿವೆ. ಸಹೋದರ ಬಾಬು ಕೂಡ ಐಟಿ ತನಿಖೆಯಿಂದ ರಾಯ್ ಮಾನಸಿಕ ಒತ್ತಡದಲ್ಲಿದ್ದರು ಎಂದು ಹೇಳಿದ್ದರು.
ಈ ಪ್ರಕರಣಕ್ಕೆ ಸಂಬAಧಿಸಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ವರದಿ ದಾಖಲಿಸಲಾಗಿದೆ. ಪ್ರಾಥಮಿಕವಾಗಿ ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣವೆಂದು ಪರಿಗಣಿಸಿದ್ದು, ಎಸ್ಐಟಿ ತನಿಖೆಯ ಬಳಿಕವೇ ಅಂತಿಮ ಸತ್ಯ ಹೊರಬರಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿ, ಸರ್ಕಾರ ತ್ವರಿತವಾಗಿ ಎಸ್ಐಟಿ ರಚಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಈ ಸರ್ಕಾರ ತನಗೆ ಅನುಕೂಲವಾಗುವ ಸಂದರ್ಭಗಳಲ್ಲಿ ಎಸ್ಐಟಿ ರಚಿಸುತ್ತದೆ. ವಾಲ್ಮೀಕಿ ನಿಗಮ ಹಗರಣ, ಚಿನ್ನಸ್ವಾಮಿ ಕ್ರೀಡಾಂಗಣ ದುರಂತ ಸೇರಿದಂತೆ ಹಲವು ಪ್ರಕರಣಗಳಲ್ಲಿ ಇದೇ ರೀತಿ ನಡೆದಿದೆ. ಮುಂದೇನು ನಡೆಯುತ್ತದೆ ನೋಡೋಣ ಎಂದು ಹೇಳಿದರು.
ಇನ್ನೊಂದೆಡೆ, ಕೆಲ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ಸಂಸ್ಥೆಗಳ ದುರುಪಯೋಗ ಮಾಡುತ್ತಿದೆ ಎಂಬ ಆರೋಪಗಳನ್ನು ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ, ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.