LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
State News

ತಾಯಿ ಚಾಮುಂಡಿ ಶಕ್ತಿ, ಧೈರ್ಯ, ಮಮತೆ ಹಾಗೂ ರಕ್ಷಕತ್ವದ ಸಂಕೇತ: ಬಾನು ಮುಷ್ತಾಕ್

ಮೈಸೂರು: ಮೈಸೂರು ದಸರಾ, ನಾಡಿನ ನಾಡಿ, ಸಂಸ್ಕೃತಿಯ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳವಾಗಿದೆ ಎಂದು ಸಾಹಿತಿ ಹಾಗೂ 2025ರ ಅಂತರಾಷ್ಟ್ರೀಯ ಬೂಕರ್ ಬಹುಮಾನ ವಿಜೇತರಾದ ಶ್ರೀಮತಿ ಬಾನು ಮುಷ್ತಾಕ್ ಅವರು ತಿಳಿಸಿದರು.
ಅವರು ಇಂದು ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ಪ್ರಾರಂಭವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರು ದಸರಾದ ಪವಿತ್ರದ ಕ್ಷಣದಲ್ಲಿ ಚಾಮುಂಡಿ ತಾಯಯ ಕೃಪೆಯ ನೆರಳಿನಲ್ಲಿ, ಈ ವೇದಿಕೆಯಿಂದ ನಿಮ್ಮೆದುರು ನಿಲ್ಲುವ ಅವಕಾಶ ದೊರೆತಿರುವುದು ನನ್ನ ಜೀವನದ ಅತ್ಯಂತ ಗೌರವದ ಘಳಿಕೆ.  ದಸರಾ ಎಂದರೆ ಕೇವಲಹಬ್ಬವಲ್ಲ, ಇದು ನಾಡಿನ ನಾಡಿ, ಸಂಸ್ಕೃತಿಯ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಂದು ಜೀವಕ್ಕೂ ಈ ಮಣ್ಣಿನ ಬಾರಿಸುದಾರಿಕೆ, ಸ್ಪಂದನೆ ಮತ್ತು ನೆನಪುಗಳಿವೆ ಎಂದರು.
ಸರ್ವ ಜನಾಂಗದ ಶಾಂತಿಯ ತೋಟ’-ಈ ನೆಲದ ಸಂಸ್ಕೃತಿ
ಮೈಸೂರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು,ಕನ್ನಡ ಭಾಷೆಯ ಅಂತರಾಳದ ಹೃದಯಸ್ಪಂದನದವರೆಗೆ ಈ ಹಬ್ಬವು ನಮಗೆ ಸ್ಮರಿಸುತ್ತದೆ. ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ. ವಿಭಿನ್ನತೆಯಲ್ಲೇ ಏಕತೆಯ ಸುಗಂಧ. ಮಹಾರಾಜರು ಜಯಚಾಮರಾಜೇಂದ್ರ ಒಡೆಯರು ಮುಸ್ಲಿಂರ ನಂಬಿ, ಅವರನ್ನು ಅನುಮಾನಿಸದೇ, ಅಂಗರಕ್ಷಕರ ಪಡೆಯ ಸದಸ್ಯರಾಗಿದ್ದರು, ಇದು ನಮಗೆ ಬಹಳ ಹೆಮ್ಮೆಯ ಮತ್ತು ಅಪ್ಯಾಯಮಾನವಾದ ವಿಷಯ. ಸಂಸ್ಕೃತಿ ಎಂದರೆ ಹೃದಯದಗಲವನ್ನು ಹುಟ್ಟಿಸುವ  ನನ್ನ ಧಾರ್ಮಿಕ ನಂಬಿಕೆ, ಯಾವಗಾಗಲೂ  ಜೀವ ಪರ ಮಾನವೀಯಪರ. ಈ ನೆಲದ ಸಂಸ್ಕೃತಿಯ ಮೂಲ- ಎಲ್ಲರನ್ನೊಳಗೊಳ್ಳುವ ಎಲ್ಲರ ಬದುಕನ್ನು ಗೌರವಿಸುವ , ನಮ್ಮೆಲ್ಲರ ಸರ್ವ ಜನಾಂಗದ ಶಾಂತಿಯ ತೋಟ ಎಂದರು.
ದಸರಾ- ಶಾಂತಿಯ ಹಬ್ಬ, ಸೌಹಾರ್ದದ ಮೇಳ
ಮೈಸೂರು ದಸರಾ ಘೋಷಣೆಯ ನಮ್ಮೆಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ. ಇದು ಶಾಂತಿಯ ಹಬ್ಬ, ಸೌಹಾರ್ದದ ಮೇಳ, ಇದು ಸರ್ವಜನಾಂಗದ ಶಾಂತಿಯ ತೋಟ. ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಿ, ಪರಸ್ಪರರ ನಂಬಿಕೆಗಳನ್ನು, ಸಂಸ್ಕೃತಿಗಳನ್ನು ಗೌರವಿಸುವುದರ ಮೂಲಕ ನಮ್ಮ ಬದುಕನ್ನು ಶ್ರೀಮಂತಗೊಳಿಸಬೇಕಿದೆ. ಈ ನೆಲದ ಸುಗಂಧವನ್ನು ಐಕ್ಯತೆಯಾಗಲಿ,  ನೆಲದ ಬಿಸಿಲು ಕೂಡ ಸಾಹಾರ್ದತೆಯಿಂದ ಕೂಡಿದೆ. ಈ ನೆಲದ ಬಿಸಿಲು ಕೂಡ ಮಾನವೀಯ ಪ್ರೀತಿಯ ಪ್ರತೀಕವಾಗಿದೆ. ಈ ಸಂದರ್ಭದಲ್ಲಿ ಚಾಮುಂಡಿ ತಾಯಿಯ ಮಹಿಮೆ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಕವಾಗಿರಲಿ. ತಾಯಿ ಚಾಮುಂಡಿಯ ಸತ್ಯ, ಧೈರ್ಯ ಹಾಗೂ ರಕ್ಷಕತ್ವದ ಸಂಕೇತ. ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಗಳನ್ನು ನಾಶವಾಗಲೆಂದು  ಬಯಸುತ್ತೇನೆ. ಈ ದಸರಾ ಹಬ್ಬ ಕೇವಲ ಮೈಸೂರು ನಗರಕ್ಕೆ ಸೀಮಿತವಾಗದೇ, ನಮ್ಮ ನಾಡಿಗೆ ಮಾತ್ರ , ದೇಶಕ್ಕೆ ಮಾತ್ರ ಸೀಮಿತವಾಗದೇ  , ಇಡೀ ಜಗಗತ್ತಿನಾದ್ಯಂತ ಮಾನವ ಕುಲಕ್ಕೆ ಶಾಂತಿ ಸಹಾನುಭೂತಿ, ಪ್ರೀತಿ ಮತ್ತು ನ್ಯಾಯದ ದೀಪವನ್ನು ಬೆಳೆಗಿಸಲೆಂದು ಹಾರೈಸುತ್ತೇನೆ. ಇಂದು ಬೆಳೆಗಿಸಿದ ದೀಪ ಈ ಸಂದೇಶದೊಂದಿಗೆ ಇಡೀ ಪ್ರಪಂಚದಾದ್ಯಂತ ತನ್ನ ನೆಲೆಯನ್ನು ಕಂಡುಕೊಳ್ಳಲಿ ಎಂದು ಆಶಿಸುತ್ತೇನೆ ಎಂದರು.
ವ್ಯಕ್ತಿಯಿಂದ ಸಮಷ್ಠಿಯೆಡೆಗೆ ಸಾಗುವುದೇ ಬದುಕಿನ ನಿಜವಾದ ದಾರಿ
ನನ್ನ ಬದುಕು ನನಗೆ ಅನೇಕ ಪಾಠಗಳನ್ನು ಕಲಿಸಿದೆ. ಅದರಲ್ಲಿ ಮುಖ್ಯಪಾಠವೆಂದರೆ, ವ್ಯಕ್ತಿಯಿಂದ ಸಮಷ್ಠಿಯೆಡೆಗೆ ಸಾಗುವ ದಾರಿ ಮಾತ್ರ ನಿಜವಾದ ದಾರಿ. ನನ್ನ ಧಾರ್ಮಿಕ ನಂಬಿಕೆಗಳು, ನನ್ನ ಜೀವನ ದರ್ಶನ ಎಂದಿಗೂ ಜೀವಪರ. ಅವು ಮರದ ನೆರಳಿನಂತೆ,ತಂಪಾದ ನದಿಯಂತೆ,  ಇಂದಿನ ಜಗತ್ತು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ. ಇಂದು ಮನುಕುಲವು ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗಿರುವಾಗ, ದಸರಾ ಘೋಷಣೆಯು  ಎಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ , ಇದು ಶಾಂತಿಯ ಹಬ್ಬ, ಸೌಹಾರ್ದದ ಮೇಳ. ಇದು ಸರ್ವಜನಾಂಗದ ಶಾಂತಿಯ ತೋಟ. ನನ್ನ ಜೀವನದ ದರ್ಶನ ಯಾವತ್ತಿಗೂ ಜೀವಪರ. ಅಸ್ತ್ರಗಳಿಂದಲ್ಲ, ಅಕ್ಷರದಿಂದ ಬದುಕನ್ನು ಗೆಲ್ಲಬಹುದು. ಹಗೆಗಳಿಂದಲ್ಲ, ಪ್ರೀತಿಯಿಂದ ಬದುಕನ್ನು ಅರಳಿಸಬಹುದು  ಎಂದರು.
ಪ್ರತಿಯೊಬ್ಬರ ಧ್ವನಿಯನ್ನು ಗೌರವಿಸುವ ಮನೋಭಾವ
ಈ ನೆಲದ ಪರಂಪರೆಯೇ ಸರ್ವಜನಾಂಗದ ಶಾಂತಿಯ ತೋಟ ವಾಗಿದೆ. ಈ ತೋಟದಲ್ಲಿ ಪ್ರತಿ ಹೂವು ತನ್ನ ಬಣ್ಣದಲ್ಲೇ ಅರಳಲಿ, ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ, ಆದರೆ ಒಟ್ಟಿಗೆ ಸೇರಿದಾಗ ಅದು ಸೌಹಾರ್ದ ಸಿಂಫನಿಯಾಗಲಿ. ಪ್ರಜಾಪ್ರಭುತ್ವವು ಕೇವಲ ವ್ಯವಸ್ಥೆಯಲ್ಲ, ಅದು ಮೌಲ್ಯ. ಅದು ಪ್ರತಿಯೊಬ್ಬರ ಧ್ವನಿಯನ್ನು ಗೌರವಿಸುವ ಮನೋಭಾವ. ಅದು ಬೇರೆಯವರ ಬದುಕಿನಲ್ಲಿ ಅರ್ಥಪೂರ್ಣವಾಗಿ ನಡೆದುಕೊಳ್ಳುವ ಜವಾಬ್ದಾರಿ. ಅದನ್ನು ಗೌರವಿಸುವು ನಮ್ಮೆಲ್ಲರ ಕರ್ತವ್ಯ ಎಂದರು.
ನಾವೆಲ್ಲಾ ಒಂದೇ ಗಗನದಡಿಯ ಪಯಣಿಗರು
ನಾವು ಎಲ್ಲರೂ ಒಂದೇ ಗಗನದಡಿಯ ಪಯಣಿಗರು. ಆಕಾಶವು ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನೂ ತಳ್ಳುವುದಿಲ್ಲ. ಮನುಷ್ಯನು ಮಾತ್ರ ಗಡಿ ಹಾಕುತ್ತಾನೆ. ಆ ಗಡಿಗಳನ್ನು ನಾವೇ ಅಳಿಸಬೇಕು. ಇಂದು ಈ ಹಬ್ಬ ಮೈಸೂರಿನ ಬೀದಿಗಳಲ್ಲಿ ಮಾತ್ರವತ್ತ. ಇಡೀ ಜಗತ್ತಿನ ಹೃದಯಗಳಲ್ಲಿ ಬೆಳಗಲಿ ಎಂದರು.
ಸಂಪತ್ತನ್ನು ಹಂಚಿದಾದ ಮಾತ್ರ ಅದು ಬೆಳೆಯುತ್ತದೆ
ಇತಿಹಾಸದತ್ತ ನೋಡಿದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದೆಂದಿಗೂ ಪ್ರಸ್ತುತವಾಗುತ್ತಾರೆ. ಅವರು ಹಂಚಿಕೊಳ್ಳುವ ಮನದ ಅರಸ. ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯದ ಔದಾರ್ಯದ ದೊರೆಯಾಗಿದ್ದರು. ಭೇದ ಭಾವಕ್ಕಿಂತ ವಿಶಾಲ ಮನಸ್ಸಿಗೆ ಗೌರವವಿತ್ತು. ಅವರು ನೀಡಿದ ಸಂದೇಶ ಸಂಪತ್ತನ್ನು ಹಂಚಿದಾದ ಮಾತ್ರ ಅದು ಬೆಳೆಯುತ್ತದೆ. ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕತ್ತದೆ ಎಂದರು.
ಸಂಸ್ಕೃತಿ ನಮ್ಮ ಬೇರು ಸೌಹಾರ್ದ ನಮ್ಮ ಶಕ್ತಿ
ಸಂಸ್ಕೃತಿ ನಮ್ಮ ಬೇರು. ಸೌಹಾರ್ದ ನಮ್ಮ ಶಕ್ತಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ , ಪ್ರೀತಿಯ ಹೊಸ ಸುಧಾರಿತ ಸಮಾಜವನ್ನು ಕಟ್ಟೋಣ.
ತಾನೊಬ್ಬ ಕವಿಯತ್ರಿಯಾಗಿದ್ದು, ಕವಿತೆಯ ಮೂಲಕ ನನ್ನ ಸಂದೇಶವನ್ನು ತಿಳಿಸಲು ಬಯಸಿದ್ದು, ಮುಸ್ಲಿಂ ಹೆಣ್ಣುಮಗಳು ಬಾಗಿನವನ್ನು ಪಡೆದಾಗಿನ ತನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವ ಕವಿತೆಯನ್ನು ಓದಿದರು.
***
ಬಾಗಿನ   
  ಮೊರ ಅಂದರೆ ಗೊತ್ತಲ್ಲಾ. . .. 
ಕೇರುತ್ತೆ ಅದು ,ಅಲ್ಲಿ
  ಇಲ್ಲಿ ಮತ್ತು ಎಲ್ಲೆಲ್ಲೂ
ಆ ದಿನ. . . . 
ಸೇವಂತಿಗೆ  ಹೂವು ಚಳ್ಳನೆ ನಗು 
ಚಿಮುಕಿಸುತ್ತಿತು.ದಿನ ತುಂಬಿದ್ದ 
ಮೋಡ  ಎರಡೂ ಕೈಯಲಿ ಸೊಂಟ 
ಹಿಡಿದು ಬೆವರಿನಿಂದ ತೊಯ್ದು
ಉಸ್ಸೆಂದಾಗ
ಆಕಾಶ ಭೂಮಿ ಮತ್ತು ಸಮಸ್ತವೂ ಗಲಗಲ
ಅಂತ ಚಿಮ್ಮುತ್ತಿದ್ದವ್ತು.ಅಸೂಯೆಯಿಂದ ಸೂರ್ಯ 
ಕೆಂಪಾಗಿದ್ದ , ನನಗಿಲ್ಲದ ವಾತ್ಸಲ್ಯದಲ್ಲಿ ಇವಳು 
ಹೇಗೆ ಮಿನುಗುತ್ತಾಳೆ  ಅಂತ 
ಅದೇನೂ ಎಂದಿನ ದಿನವಾಗಿರಲಿಲ್ಲ 
ಸಂಭ್ರಮಕೇ ದೊಡ್ಡ ಮುಳ್ಳು ಚಿಕ್ಕ ಮುಳ್ಳು
ಅಂಟಿ ಜೂಟಾಟವಾಡುತ್ತಿದ್ದವಲ್ಲಾ
ಅಚ್ಚ ಕೃಷಿಕ ಬಸವರಾಜಣ್ಣನ ಎಡ 
ಹೆಗಲಿನ ವಲ್ಲಿಯೊಡನೆ ಮಣ್ಣಿನ 
ಗುಣ ಹೀರಿದ್ದ ನಾನು ಬಾನು
ವಿನಿಂದ ಜಯಾ ಅಗಿದ್ದು ಹೀಗೆ 
ಯಾವುದೇ ಗೋಡೆಗಳಿರಲಿಲ್ಲ ಬಿಡಿ 
ಪ್ರೀತಿಯ ಒಳ ಒರತೆಗಳು 
ಜಿನುಗುವುದು ಹೀಗೆ ನೋಡಿ
ಸಾಬರ ಮಗಳು ಸಾಬರ ಸೊಸೆಗೆ 
ಜೀವದುಂಬಿದ ಹಸಿ ಮಣ್ಣಿನ ಬಾಗಿನ 
"ಜಯಾ. . . .ನಡಿಯವ್ವ ಹಬ್ಬಕೆ '
ಅರಿಶಿನದ ಎಲೆ  ಕಡುಬು
ಗಂಡನ ಮನೆಯ ಕಸೂತಿ ನೆರಿಗೆಗಳ
ಸದಾ ಚಿಮ್ಮುತ್ತಿದ್ದರೂಎದೆಯಾಳದಲಿ
ಪಿಸುಗುಟ್ಟಿದ್ದು ಆ ಎಲೆ ಹಸಿರು
ವಾತ್ಸಲ್ಯವ ನೆಯ್ದ ಸಾದಾ ಸೀರೆ
ಮಡಿಲಲಿ ತುಂಬಿಸಿ ಕವುಚಿದ ಮೊರವ
ಮರಳುವ ದಾರಿಯಲಿ ನಿಂತು
ಅರಳಿಮರವ ಕೇಳಿದ್ದೆ 
ಹೇಗೆ ಕೊಂಡೊಯ್ಯಲಿ ಇದನು 
ನನ್ನತ್ತೆ ಮನೆಗೆ ಅರಿಶಿನ ಕುಂಕುಮದೊಡನೆ  
ಹೇಗೆ ಬಿಡಿಸಲಿ ಬಾಂಧವ್ಯದ ಎಳೆಗಳ 
ರಂಗೋಲಿಯನು ಸಾಬರ ಮನೆ ಬಾಗಿಲಲಿ
ಕೊಡಲೇ ಯಾರಿಗಾದರೂ ದಾರಿಹೋಕರಿಗೆ?
ಕೊಡಬಹುದೇ ಆದನು ಯಾರಿಗಾದರೂ 
ಆ  ಒಲವನು ಬಲವನು
ಪಿತೃ ವಾತ್ಸಲ್ಯದ ಮಾತೃತ್ವವನು
ನೆನೆಸಿಕೊಂಡಾಗ ಈಗಲೂ 
ಕಣ್ಣಂಚಿನಲಿ ತೇವ 
ಮೊರದ ತುಂಬಾ ಬದುಕಿನ ಪಸೆಯ
ಹಸೆಯ ಬರೆದ ಬೇಸಿಗೆ ಹಕ್ಕಿಯ ವಿದಾಯ
ಬಸವರಾಜಣ್ಣ. . . .
  ನೀವು ಕೊಟ್ಟ ಮೊರಹೇಳುತ್ತೆ
ಮಿಡಿಯುತ್ತೆ ಸಹಸ್ರ  ಆರೋಪಗಳೆದುರು 
ಒಂಟಿಯಾಗಿ ನಿಲ್ಲುತ್ತೆ ,ದ್ವೇಷದ ಎಲ್ಲಾ 
  ಭಾಷೆಗಳ ಕವುಚಿ ಹಾಕುತ್ತೆ  ಮುಂಜಾವಿನ 
  ಹೊಂಬೆಳಕಿನೊAದಿಗೆ  ಪ್ರೀತಿಯ ನಿರ್ಮಲ
ಅಲೆಗಳು ಮೊರದ ತುಂಬಾ 
ತೂರುತ್ತಿರುತ್ತವೆ

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ