ಗುಬ್ಬಿ : ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೊಬ್ಬರಿ ಶೆಡ್ಡು, ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದರಿಂದ ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್.ರಾಂಪುರದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ರೈತ ಮಹಿಳೆ ಶಿವಗಂಗಮ್ಮನವರು ಕುಟುಂಬ ಸಮೇತ ತೋಟದಲ್ಲಿ ವಾಸವಿದ್ದು, ಮನೆಯ ಸಮೀಪದಲ್ಲಿಯೇ ಕಾಯಿ ತುಂಬಲು ಶೆಡ್ಡು ನಿರ್ಮಿಸಿಕೊಂಡಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದ್ದು ಅಷ್ಟರೊಳಗೆ ಭಾಗಶಃ ಸುಟ್ಟು ಹೋಗಿದೆ.
ಶೆಡ್ಡು ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಶೆಡ್ಡಿನಲ್ಲಿದ್ದ ಸುಮಾರು ೩೦ಸಾವಿರ ಕೊಬ್ಬರಿ, ಟ್ರ್ಯಾಕ್ಟರ್, ಬೈಕು ಹಾಗೂ ಕೃಷಿ ಪರಿಕರಗಳು ಸುಟ್ಟುಹೋಗಿ ಅಪಾರ ನಷ್ಟ ಉಂಟಾಗಿದೆ.
ಕೊಳವೆಬಾವಿ ಕೊರೆಸಲು ಇಟ್ಟುಕೊಂಡಿದ್ದ ಕೊಬ್ಬರಿಯು ಸುಟ್ಟು ಹೋಗಿದ್ದು, ಕುಟುಂಬ ಸಂಕಷ್ಟವನ್ನು ಎದುರಿಸುವಂತೆ ಆಗಿದೆ. ಬರದ ನಡುವೆ ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಿದ್ದ ನಮಗೆ ಈ ಅವಘಡ ತುಂಬ ಸಂಕಷ್ಟವನ್ನು ತಂದೊಡ್ಡಿದೆ. ಸರ್ಕಾರ ಸಾಧ್ಯವಿರುವಷ್ಟು ಪರಿಹಾರ ಒದಗಿಸಿದಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳಬಹುದು. ಇಲ್ಲವಾದಲ್ಲಿ ಏನು ಮಾಡುವುದು ತೋಚುತ್ತಿಲ್ಲ ಎಂದು ರೈತ ಮಹಿಳೆ ಶಿವಗಂಗಮ್ಮ ಅಳಲು ತೋಡಿಕೊಂಡರು.