ಬೆಂಗಳೂರು: ಸಾರಿಗೆ ಸಂಪರ್ಕ ಉತ್ಪಾದಕ ಚಟುವಟಿಕೆ, ಸ್ವಾವಲಂಬನೆ ವೃದ್ಧಿಸಬಲ್ಲವು ಎಂಬ ಉದಾಹರಣೆಗಳು ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಕರುನಾಡಿನ ಮಹಿಳೆಯರನ್ನು ಈ ನಿಟ್ಟಿನಲ್ಲಿ ಮುನ್ನಡೆಸುವ ಹಾದಿಯಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಆರುವರೆ ಕೋಟಿ ಮಹಿಳೆಯರ ಪೈಕಿ ಶೇ 50 ರಷ್ಟು ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮುಂಭಾಗದಲ್ಲಿ ಇಂದು ಕರ್ನಾಟಕ ರಾಜ್ಯದಾದ್ಯಂತ ಮಹಿಳೆಯರು ಸರ್ಕಾರದ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸುವ “ಶಕ್ತಿ” ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ರಾಜ್ಯದ ಇತಿಹಾಸದಲ್ಲಿಯೇ ಮಹತ್ವದ ಘಟ್ಟವೊಂದನ್ನು ದಾಖಲಿಸಿದರು. ಚುನಾವಣೆ ಸಂದರ್ಭದಲ್ಲಿ ತಾವು ಘೋಷಿಸಿದ್ದ ಗ್ಯಾರಂಟಿಗಳನ್ನು ಜಾರಿಗೊಳಿಸಲು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಕ್ಕೇರಿದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ತಾತ್ವಿಕ ಒಪ್ಪಿಗೆ ಪಡೆದು ಘೋಷಣೆ ಮಾಡಿದ್ದ ಮುಖ್ಯಮಂತ್ರಿಯವರು ,ಇದೀಗ ಘೋಷಣೆಯಾದ 21 ದಿನಗಳ ಅಲ್ಪಾವಧಿಯಲ್ಲಿಯೇ ಅನುಷ್ಠಾನ ಮಾಡಿರುವುದು. ಉಚಿತ ಪ್ರಯಾಣದ ತಮ್ಮ ಪ್ರಮಾಣವನ್ಮು ಸಾಕಾರಗೊಳಿಸಿದ್ದಾರೆ.
![](https://kannadanadunews.in/wp-content/uploads/2023/06/FyVMJQhWwAEmiPy-1024x683.jpeg)
ಪ್ರಗತಿಯ ಚಲನೆಗೆ ಸ್ತ್ರೀ ಶಕ್ತಿಯ ಆಯಾಮವನ್ನು ಇನ್ನಷ್ಟು ಗಟ್ಟಿಯಾಗಿ ಜೋಡಿಸುವ ಕನಸು ಇದಾಗಿದೆ. ಪುರುಷರಷ್ಟೇ ಸಮಾನವಾಗಿ ಮಹಿಳೆಯರೂ ಕೂಡ ನಾಡಿನ ಸರ್ವಾಂಗೀಣ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷೆ. ಮಹಿಳೆಯರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೊಳಿಸಿರುವುದು.ರಾಷ್ಟ್ರದ ಚರಿತ್ರೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.ಅಶಕ್ತರನ್ನು ಶಕ್ತರಾಗಿಸಿದರೆ ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಹ ಶಕ್ತಿ ಯೋಜನೆಗೆ ಚಾಲನೆ ನೀಡಿದರು.
ಈ ಯೋಜನೆ ಜಾರಿಗೊಳಿಸುವುದರ ಮೂಲಕ ಮಹಿಳಾ ಸಬಲೀಕರಣದತ್ತ ಸರಕಾರ ದಿಟ್ಟ ಹೆಜ್ಜೆ ಇರಿಸಿದೆ. ಸಾಮಾಜಿಕ,ಆರ್ಥಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶತಶತಮಾನಗಳಿಂದ ಅವಕಾಶವಂಚಿತರಾಗಿದ್ದ ಮಹಿಳೆಯರಿಗೆ ಈ ಮೂಲಕ ಶಕ್ತಿ ತುಂಬುವ ಮತ್ತು ಅವರ ಕನಸುಗಳಿಗೆ ಪ್ರೋತ್ಸಾಹಿಸುವ ಕೆಲಸವನ್ನು ಸರಕಾರ ಮಾಡಿದೆ.
ವಿನೂತನ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಕ್ತಿ ಇಲ್ಲದ ಅಶಕ್ತ ಜನರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ಮ ಸರಕಾರದ ಧ್ಯೇಯ; ಶತಶತಮಾನಗಳಿಂದ ಮಹಿಳೆಯರು ಅವಕಾಶವಂಚಿತರಾಗಿದ್ದಾರೆ. ಯಾವುದೇ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಪುರುಷರಷ್ಟೇ ಮಹಿಳೆಯರು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸರಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದರ ಮೂಲಕ ‘ಶಕ್ತಿ’ ತುಂಬುವ ಕೆಲಸವನ್ನು ಮಾಡುತ್ತಿದೆ ಎಂದರು.
ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ಗಳನ್ನು 3 ತಿಂಗಳೊಳಗೆ ಉಚಿತವಾಗಿ ಒದಗಿಸಲಾಗುವುದು; ಅಲ್ಲಿವರೆಗೆ ಸರಕಾರದ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣಿಸಬಹುದಾಗಿದೆ. ಚುನಾವಣೆ ಸಂದರ್ಭದಲ್ಲಿ ನಾವು ಘೋಷಿಸಿದ 5 ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳು ಮಹಿಳೆಯರಿಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದವುಗಳಾಗಿವೆ. ಈ ಒಟ್ಟು 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಒಟ್ಟು 59 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು, ಎಷ್ಟೇ ಕಷ್ಟ ಬರಲಿ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಈ ಯೋಜನೆಗಳಲ್ಲಿ ಯಾವ ಮಧ್ಯವರ್ತಿಗಳಿಲ್ಲ ಎಂದರು.
ಭಾರತದಲ್ಲಿ ಶೇ.24ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ: 2022ರ ವಿಶ್ವಬ್ಯಾಂಕ್ನ ಅಂಕಿ ಅಂಶಗಳಂತೆ ಅಮೆರಿಕಾದಲ್ಲಿ ಶೇ.57ರಷ್ಟು,ಚೀನಾದಲ್ಲಿ ಶೇ.54ರಷ್ಟು, ಆಸ್ಟೇಲಿಯಾದಲ್ಲಿ ಶೇ.65,ಇಂಡೋನೇಷಿಯಾದಲ್ಲಿ ಶೇ.53ರಷ್ಟು ಹಾಗೂ ನಮ್ಮ ದೇಶದ ಪಕ್ಕದ ಬಾಂಗ್ಲಾದೇಶದಲ್ಲಿ ಶೇ.38ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿಯಾಗುತ್ತಿದ್ದು, ಭಾರತದಲ್ಲಿ ಶೇ.24ರಷ್ಟು ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ ಅವರು ಈ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
![](https://kannadanadunews.in/wp-content/uploads/2023/06/FyU91-4WcAELb-L-1024x620.jpeg)
ಎಷ್ಟು ಹಣ ಖರ್ಚು ಮಾಡುತ್ತಾ ಇದ್ದೀವಿ ಎನ್ನುವುದು ಮುಖ್ಯವಲ್ಲ; ಯಾರಿಗೆ ಕೊಡ್ತಾ ಇದ್ದೇವೆ ಎನ್ನುವುದು ಮುಖ್ಯ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು ಗೃಹಜ್ಯೋತಿ ಯೋಜನೆ,ಅನ್ನಭಾಗ್ಯ ಯೋಜನೆ ಜುಲೈ 1ರಿಂದ ಜಾರಿಗೊಳಿಸಲಾಗುತ್ತದೆ. ಗೃಹಲಕ್ಷ್ಮೀ ಯೋಜನೆ ಆಗಸ್ಟ್ 16ರಂದು ಜಾರಿಗೊಳಿಸಲಾಗುತ್ತದೆ ಮತ್ತು ಯುವನಿಧಿಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂದರು.
10 ಕೆ.ಜಿ ಆಹಾರಧಾನ್ಯವನ್ನು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ನೀಡುತ್ತೇವೆ; ಇದಕ್ಕೆ ರಾಜ್ಯದಲ್ಲಿ 10100 ಕೋಟಿ ರೂ. ಖರ್ಚಾಗಲಿದೆ. ಯಾರು ಕೂಡ ಹಸಿವಿನಿಂದ ಬಳಲಬಾರದು;ಹಸಿವು ಮುಕ್ತ ರಾಜ್ಯ ನಮ್ಮದಾಗಬೇಕು ಎಂಬ ಸದಾಶಯ ಇದರ ಹಿಂದಿದೆ ಎಂದರು.
![](https://kannadanadunews.in/wp-content/uploads/2023/06/SHAKTHI-YOJANE-4-1024x682.jpg)
ಗೇಲಿ,ಕುಹಕ ಮಾಡುವವರು ಮಾಡಲಿ; ಡೊಂಟ್ ಕೇರ್: ರೈತರ ಸಾಲಮನ್ನಾ ಮಾಡದೇ ಬಂಡವಾಳಶಾಹಿಗಳ ಸಾಲಮನ್ನಾ ಮಾಡುವವರು ಸರಕಾರ ಯಾವ ರೀತಿ ಕಾರ್ಯನಿರ್ವಹಿಸುತ್ತದೇ ಎಂಬುದರ ಕುರಿತು ಪರಿಜ್ಞಾನವಿಲ್ಲದೇ ತರ್ಕರಹಿತವಾಗಿ ಎಡಬಿಡಂಗಿತನದ ರೂಪದಲ್ಲಿ ವಿರೋಧಪಕ್ಷಗಳು ಮಾತನಾಡುತ್ತಿದ್ದು, ಅವುಗಳಿಗೆ ಸೊಪ್ಪು ಹಾಕದೇ ಮತ್ತು ವಿಚಲಿತರಾಗದೇ ಎಲ್ಲ ಜಾತಿಯಲ್ಲಿರುವ, ಎಲ್ಲ ಧರ್ಮದಲ್ಲಿರುವ ಬಡವರಿಗೆ,ಸಾಮಾಜಿಕವಾಗಿ,ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.
ಯೋಜನೆಯ ಲಾಭ ಪಡೆದುಕೊಳ್ಳಿ: ಹೆಣ್ಮಕ್ಕಳು ಇಂದು ಒಂದುಗಂಟೆಯಿಂದ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು.ಎಲ್ಲ ಮಹಿಳೆಯರಿಗೂ ಸ್ಮಾರ್ಟ್ ಕಾರ್ಡ್ಗಳನ್ನು ನೀಡಲಾಗುವುದು. ಈ ಯೋಜನೆ ವಿದ್ಯಾರ್ಥಿನಿಯರಿಗೆ ಅನ್ವಯವಾಗುತ್ತದೆ. ಈ ಯೋಜನೆಯಲ್ಲಿ ಮಧ್ಯವರ್ತಿಗಳಲ್ಲಿ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತದೆ ಎಂದರು.
![](https://kannadanadunews.in/wp-content/uploads/2023/06/FyVX6JQXoAQHr1M-1024x682.jpeg)
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎನ್ನುವ ಧ್ಯೇಯದೊಂದಿಗೆ ಟೀಕೆಗಳಿಗೆ ಯಾವುದೇ ರೀತಿಯ ಉತ್ತರ ನೀಡದೇ ರಾಜ್ಯದ ಜನರಿಗೆ ನಾವು ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದರು.
ಒಂದು ದೇಶ,ರಾಜ್ಯದ ಸ್ಥಿತಿಗತಿ ಹೇಗಿದೆ ಎಂಬುದರ ಅಧ್ಯಯನ ಮಾಡಬೇಕಿದ್ದರೇ ಅಲ್ಲಿನ ಮಹಿಳೆಯರ ಸ್ಥಿತಿಗತಿ ಅರಿತುಕೊಳ್ಳುವುದು ಅವಶ್ಯ ಎಂದು ಹೇಳಿದ ಡಿಸಿಎಂ ಡಿಕೆಶಿ ಅವರು ಈ ಯೋಜನೆಯ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಮಹಿಳಾ ಪ್ರಯಾಣಿಕರ ಲೆಕ್ಕದ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್ಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸಾರಿಗೆ,ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಮಾತನಾಡಿದರು. ಇದೇ ವೇಳೆ ಗುಲಾಬಿ ಬಣ್ಣದ ಸ್ಮಾರ್ಟ್ ಕಾರ್ಡ್,ಶಕ್ತಿ ಯೋಜನೆಯ ಲಾಂಛನವನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಸುಮಿತ್ರಾ,ರಾಧಿಕಾ,ಪ್ರೇಮಾ, ಕಲಾವತಿ,ಪವಿತ್ರಾ ಅವರಿಗೆ ಮುಖ್ಯಮಂತ್ರಿಗಳು ಸ್ಮಾರ್ಟ್ ಕಾರ್ಡ್ಗಳನ್ನು ನೀಡಿದರು.
![](https://kannadanadunews.in/wp-content/uploads/2023/06/SHAKTHI-YOJANE-3-1024x682.jpg)
ಈ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ,ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ , ಶಾಸಕರು, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳು ಮತ್ತಿತರರು ಇದ್ದರು.
ನಂತರ ಬಿಎಂಟಿಸಿ ಬಸ್ ಸಂಖ್ಯೆ: ಕೆ.ಎ 57 ಎಫ್ 5324 ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ವಿಧಾನಸೌಧದಿಂದ ಹೋಟಲ್ ಕ್ಯಾಪಿಟಲ್, ರಾಜಭವನ ರಸ್ತೆ, ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಕೆ.ಜಿ ರೋಡ್ ಮೂಲಕ ಕೆಂಪೇಗೌಡ (ಮೆಜೆಸ್ಟಿಕ್) ಬಸ್ನಿಲ್ದಾಣಕ್ಕೆ ತಲುಪಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶೂನ್ಯ ಟಿಕೆಟ್ ನೀಡಿದರು.
“ಶಕ್ತಿ” ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮುಂಭಾಗದಲ್ಲಿ ಚಾಲನೆ ನೀಡಿ, ನಂತರ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿ ಕೆಎಸ್ಆರ್ಟಿಸಿಯ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸಿದರು.
![](https://kannadanadunews.in/wp-content/uploads/2023/06/FyVMIn0WAAEaI2r-1024x683.jpeg)
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಧರ್ಮಸ್ಥಳ ಮಾರ್ಗದ ಸಂಚರಿಸುವ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಹೂಗುಚ್ಛ ಹಾಗೂ ಸಿಹಿ ವಿತರಿಸಿ ಪ್ರಯಾಣ ಸುಖಕರವಾಗಿರಲೆಂದು ಹಾರೈಸಿದರು.
ತದನಂತರ ಬಣ್ಣದ ಪಂಜನ್ನು ಪ್ರದರ್ಶಿಸುವ ಮೂಲಕ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಅಧಿಕೃತ ಚಾಲನೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಈ ಮಹತ್ತರ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.