ಬಳ್ಳಾರಿ : ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ಏ.12ರಂದು ಬಳ್ಳಾರಿ ನಗರಕ್ಕೆ ಆಗಮಿಸಲಿದ್ದು, ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಏ.12ರಂದು ಶುಕ್ರವಾರ ಬೆಳಿಗ್ಗೆ 8.30ಕ್ಕೆ ಮೈಸೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಹೊರಟು, ಬಳ್ಳಾರಿಯ ಕೊಳಗಲ್ಲು ರಸ್ತೆಯಲ್ಲಿರುವ ಏರ್ಪೋರ್ಟ್ಗೆ 10.30ಕ್ಕೆ ಆಗಮಿಸಲಿದ್ದಾರೆ. ಶುಕ್ರವಾರ ಬೆಳಗ್ಗೆ 10.50ಕ್ಕೆ ಸ್ಥಳೀಯ ಗಾಂಧಿನಗರದಲ್ಲಿರುವ ಎಎಸ್ಎಂ ಮಹಿಳಾ ಕಾಲೇಜಿನ ಸಭಾಂಗಣಕ್ಕೆ ಭೇಟಿ ನೀಡಿ, ಸಮಾಜದ ಹಿರಿಯರು ಹಾಗೂ ಪ್ರಮುಖ ನಾಯಕರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. 11.30 ಗಂಟೆಗೆ ಸಿರುಗುಪ್ಪ ರಸ್ತೆಯಲ್ಲಿನ ಕ್ಲಾಸಿಕ್ ಫಂಕ್ಷನ್ ಹಾಲ್ಗೆ ತೆರಳಿ, ಬಿಜೆಪಿಯ ಮುಖ್ಯ ಧುರೀಣರುಗಳೊಂದಿಗೆ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.
![](https://kannadanadunews.in/wp-content/uploads/2024/04/vijayendra.gif)
ಪೂರ್ವಾಹ್ನ 11.50ಕ್ಕೆ ನಗರದ ಎಸ್ಪಿ ಸರ್ಕಲ್ ಬಳಿಯಲ್ಲಿ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದು, ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆಯಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಸೇರಿದಂತೆ ಬಿಜೆಪಿಯ ಇತರೆ ಪ್ರಮುಖ ನಾಯಕರುಗಳೊಂದಿಗೆ ಡಿಸಿ ಕಛೇರಿಗೆ ತೆರಳಲಿದ್ದಾರೆ.
ಬಿ.ಶ್ರೀರಾಮುಲು ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಜೊತೆಯಲ್ಲಿರುವ ಬಿ.ವೈ.ವಿಜಯೇಂದ್ರ ಅವರು, ಆನಂತರ ಮಧ್ಯಾಹ್ನ 1 ಗಂಟೆಗೆ ಪುನಃ ಕೊಳಗಲ್ಲು ರಸ್ತೆಯಲ್ಲಿರುವ ಹೆಲಿಪ್ಯಾಡ್ಗೆ ತೆರಳಿ, ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ ತೆರಳುತ್ತಾರೆ ಎಂದು ಬಿಜೆಪಿ ಧುರೀಣರು ವಿವರಿಸಿದ್ದಾರೆ.