ತುಮಕೂರು: ಅಯೋಧ್ಯೆಯಲ್ಲಿ ಸೋಮವಾರ ನಡೆದ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ತುಮಕೂರು ಗ್ರಾಮಾಂತರದ ಬೆಳ್ಳಾವಿ ಹೋಬಳಿ ಬುಗುಡನಹಳ್ಳಿ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ದೇವರ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಸಮುದಾಯ ಭವನ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಶ್ರೀರಾಮ ಮತ್ತು ಶ್ರೀ ವೀರಾಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸಮುದಾಯ ಭವನಕ್ಕೆ ಚಾಲನೆ ನೀಡಿದರು.
![](https://kannadanadunews.in/wp-content/uploads/2024/01/WhatsApp-Image-2024-01-22-at-6.57.49-PM-1-1024x684.jpeg)
ಈ ವೇಳೆ ಮಾತನಾಡಿದ ಅವರು, ತುಮಕೂರು ನಗರ ಹಾಗೂ ಗ್ರಾಮಾಂತರದ ಸಹಸ್ರಾರು ಮಂದಿ ಶುಭ ಕಾರ್ಯಗಳನ್ನು ಮಾಡಿಕೊಳ್ಳಲು ಅನುಕೂಲವಾಗುವಂತೆ ಶ್ರೀ ವೀರಾಂಜನೇಯ ಸ್ವಾಮಿ ಸನ್ನಿಧಾನದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷರಾದ ನರಸಿಂಹಯ್ಯನವರ ನೇತೃತ್ವದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ಅಭಿವೃದ್ಧಿಯ ಹರಿಕಾರರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಹಿಂದೆ ಇದೇ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದ ಅವರು, ಬುಗುಡನಹಳ್ಳಿ ತುಮಕೂರಿಗೆ ಪುಣ್ಯಕ್ಷೇತ್ರ ಇದ್ದಂತೆ ತುಮಕೂರು ನಗರಕ್ಕೆ ಬುಗುಡನಹಳ್ಳಿ ಜೀವಾಳ, ನೀರಿಗೆ ಆಧಾರಸ್ಥಳ. ಇಂತಹ ಪವಿತ್ರ ಶ್ರೀ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಶ್ರೀರಾಮರ ಪೂಜೆ ಹಾಗೂ ಸಮುದಾಯಭವನ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಈ ಸಮುದಾಯ ಭವನ ತುಮಕೂರಿನ ಎಲ್ಲಾ ಜನತೆಗೂ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.
ಕೆಪಿಸಿಸಿ ಒಬಿಸಿ ಘಟಕದ ಉಪಾಧ್ಯಕ್ಷ ರೇವಣ್ಣ ಸಿದ್ದಯ್ಯ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರಮೂರ್ತಿಯ ಶಿಲಾನ್ಯಾಸ ಮತ್ತು ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಬುಗುಡನಹಳ್ಳಿಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಬಸವಣ್ಣ ದೇವಸ್ಥಾನದಲ್ಲಿ ವಿಶೇಷವಾದ ಪೂಜೆಯನ್ನು ನರಸಿಂಹಯ್ಯನವರ ನೇತೃತ್ವದಲ್ಲಿ ವ್ಯವಸ್ಥಿತವಾಗಿ ನೆರವೇರಿಸಿದ್ದಾರೆ ಎಂದರು.
![](https://kannadanadunews.in/wp-content/uploads/2024/01/WhatsApp-Image-2024-01-22-at-6.57.48-PM-1024x684.jpeg)
ಇಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೆಸರಿನಲ್ಲಿ ಸಮುದಾಯಭವನವನ್ನು ನಿರ್ಮಾಣ ಮಾಡಿ ಇಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು.
ಕೆಪಿಸಿಸಿ ವಕ್ತಾರರಾದ ಮುರಳೀಧರ ಹಾಲಪ್ಪ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಬೇಕು ಎಂದು ಮಾರುತಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ದೇವರ ಆಶೀರ್ವಾದ ಇವರ ಮೇಲಿರಲಿ ಎಂದು ಶುಭ ಕೋರಿದರು.
ತುಮಕೂರು ಜಿಲ್ಲೆಗೆ ಎಲ್ಲರೊಂದಿಗೆ ಚಿರಪರಿಚಿತರೂ ಹಾಗೂ ಯುವಕರ ಆಶಾಕಿರಣವಾಗಿರುವ ಮುರಳೀಧರ ಹಾಲಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಲೋಕಸಭಾ ಚುನಾವಣೆಗೆ ಟಿಕೇಟ್ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಶ್ರೀನಿವಾಸ್ ಮಾತನಾಡಿ, ಇಂದು ವಿಶೇಷ ದಿನ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾ ನಡೆಯುತ್ತಿದೆ. ಇದೇ ದಿನ ರಾಮನ ಭಕ್ತ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ರಾಮನ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿದ್ದಾರೆ. ೫೦೦ ವರ್ಷಗಳಿಂದಲೂ ರಾಮಜನ್ಮಭೂಮಿ ಇತಿಹಾಸ ನಡೆಯುತ್ತಿತ್ತು. ಅದು ಇಂದು ತಾರ್ಕಿಕ ಅಂತ್ಯಕ್ಕೆ ಬಂದು ರಾಮಲಲ್ಲಾ ಪ್ರತಿಷ್ಠಾಪನೆಯಾಗುತ್ತಿರುವ ದಿನವೇ ಇಲ್ಲಿ ಸಮುದಾಯ ಭವನ ಉದ್ಘಾಟನೆ ಮಾಡಿರುವುದು ಸಂತೋಷ ತಂದಿದೆ. ಈ ಸಮುದಾಯ ಭವನ ಉನ್ನತೀಕರಣ ಆಗಲಿ ಎಂದು ಹಾರೈಸಿದರು.
![](https://kannadanadunews.in/wp-content/uploads/2024/01/WhatsApp-Image-2024-01-22-at-6.57.49-PM-1-1024x684.jpeg)
ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷರು ಹಾಗೂ ದೇವಸ್ಥಾನದ ಮುಖ್ಯ ಸೇವಾಕರ್ತರಾದ ಸಿ.ಬಿ.ನರಸಿಂಹಯ್ಯ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಮುಖ್ಯವೋ, ತುಮಕೂರು ಜಿಲ್ಲೆಗೆ ಮುರಳೀಧರ ಹಾಲಪ್ಪ ಅವರು ಅಷ್ಟೇ ಮುಖ್ಯ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುರಳೀಧರ ಹಾಲಪ್ಪ ಅವರಿಗೇ ಟಿಕೇಟ್ ನೀಡಬೇಕೆಂದು ವರಿಷ್ಠರಲ್ಲಿ ಒತ್ತಾಯಿಸಿದರು.
ಸಮಾರಂಭದಲ್ಲಿ ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಾಜಿ, ತುಮಕೂರು ಗ್ರಾಮಾಂತರ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದಯಾನಂದ್, ಗ್ರಾಪಂ ಅಧ್ಯಕ್ಷೆ ರೇಖಾಶಿವರಾಜು, ಗ್ರಾಪಂ ಸದಸ್ಯ ಪರಮೇಶ್, ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಗ್ರಾಪಂ ಮಾಜಿ ಸದಸ್ಯ ಲಕ್ಷಿö್ಮÃನಾರಾಯಣ, ಮುಖಂಡರಾದ ನರಸೀಯಪ್ಪ, ಸಿ.ಬಿ.ಬಾಬು ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.