ಶಿಗ್ಗಾಂವಿ ಅಭಿವೃದ್ಧಿಗೆ 20 ಕೋಟಿ ರೂ.ಗಳ ವಿಶೇಷ ಅನುದಾನ

ಶಿಗ್ಗಾವಿ,13 : ಶಿಗ್ಗಾಂವಿ ನಗರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ 20 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅನುದಾನ ಈ ಕ್ಷೇತ್ರಕ್ಕೆ ನೀಡಿರುವುದು ಇದೇ ಮೊದಲು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಭವಿಷ್ಯ ಬರೆಯುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ, ಫೆಬ್ರವರಿ 13 ಭವಿಷ್ಯ ಬರೆಯುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿಗ್ಗಾಂವಿ ತಾಲ್ಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಿರುವ ಮನೆಗಳಿಗೆ 750 ಕೆವಿ ವಿದ್ಯುತ್ ಕೇಂದ್ರ ಹಾಗೂ ಕುರುಬ ಸಮುದಾಯದ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.

ಶಿಗ್ಗಾಂವಿಯ ಸಮಗ್ರ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಶಿಗ್ಗಾಂವಿಯ ವಿದ್ಯುಚ್ಛಕ್ತಿ ಸ್ಥಿರೀಕರಣ ಹಾಗೂ ಔದ್ಯೋಗೀಕರಣಕ್ಕೆ ಬಹಳ ದೊಡ್ಡ ಸಹಾಯ ಇದರಿಂದ ಆಗಲಿದೆ. ವಿದ್ಯುಚ್ಛಕ್ತಿ ವಿತರಣೆಗೆ ಈ ಉಪಕೇಂದ್ರಗಳ ಅವಶ್ಯಕತೆ ಇದ್ದು. ಇಡೀ ತಾಲ್ಲೂಕಿನ ಅಭಿವೃದ್ಧಿಗೆ ಇದು ಪೂರಕವಾಗಿದೆ. 750 ಮತ್ತು 110 ಕೆವಿ ಉಪಕೇಂದ್ರಗಳನ್ನು ಇಲ್ಲಿ ಮಂಜೂರು ಮಾಡಲಾಗಿದೆ. ಕುರುಬ ಸಮುದಾಯದ ವಿದ್ಯಾರ್ಥಿನಿಲಯ ಹಾಗೂ ಸಮುದಾಯ ಭವನವನ್ನು 3.00 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಇಂದು ಶಿಲಾನ್ಯಾಸ ನೆರವೇರಿಸಲಾಗಿದೆ. ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರ ನೀಡಿಗಂದ ಗಂಜಿಗಟ್ಟಿ ಗ್ರಾಮದವರಿಗೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ಅರ್ಪಿಸಿದರು. ಹಿಂದುಳಿದ ವರ್ಗದ ಜನ ಇತರರಂತೆ ಶಿಕ್ಷಣದಲ್ಲಿ ಮುಂದುವರೆಯಬೇಕು. ಯಾವ ಸಮುದಾಯ ವಿದ್ಯೆಯಲ್ಲಿ, ಜ್ಞಾನದಲ್ಲಿ ಮುಂದುವರೆಯುತ್ತದೆಯೋ ಅವರು ಇಡೀ ಜಗತ್ತನ್ನು ಆಳುತ್ತಾರೆ. ಆದ್ದರಿಂದ ಮೂರು ಇ-ಗಳನ್ನು ಅಂದರೆ education ( ಶಿಕ್ಷಣ,) employment ( ಉದ್ಯೋಗ ) ಮತ್ತು empowerment ( ಸಬಲೀಕರಣ) ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡುತ್ತಿರುವುದು ಔಚಿತ್ಯಪೂರ್ಣವಾಗಿದೆ. ವಾಲ್ಮೀಕಿ ಸಮುದಾಯದವರಿಗೂ ಸೇರಿದಂತೆ ಎಸ್.ಸಿ/ಎಸ್.ಟಿ /ಹಿಂದುಳಿದವರ ವಿದ್ಯಾರ್ಥಿನಿಲಯಗಳ ಪ್ರಾರಂಭಕ್ಕೆ ಮಂಜೂರಾತಿಯನ್ನು ಶಿಗ್ಗಾಂವಿ ತಾಲ್ಲೂಕಿಗೆ ನೀಡಲಾಗಿದೆ.

ಆಧ್ಯಾತ್ಮ, ಸಮಾನತೆಯ ನಾಡು: ಕನಕದಾಸರು, ಸಂತ ಶಿಶುನಾಳ ಶರೀಫರ ನಾಡಿನಲ್ಲಿ ಆಧ್ಯಾತ್ಮಿಕತೆ ಸಮಾನತೆಯ ಗುಣ ಇದೆ. ಒಗ್ಗಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ. ಕನಕದಾಸರು ಹೇಳಿದ ಕುಲಕುಲಕುಲವೆಂದು ಬಡಿದಾಡದಿರು, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬ ನುಡಿಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಮಾತಿನ ಅರ್ಥವನ್ನು ಗ್ರಹಿಸಿ ಬದುಕು ನಡೆಸುವ ಅವಶ್ಯಕತೆ ಇದೆ.

ಪರೋಪಕಾರಿ ಬದುಕಿನ ಸಂದೇಶ : ಶಿಗ್ಗಾಂವಿ ಹಾಗೂ ಸವಣೂರು ಅಭಿವೃದ್ಧಿಯೇ ನನ್ನ ಧ್ಯೇಯ. ಇದಕ್ಕೆ ಸದಾ ಕಂಕಣ ಬದ್ಧವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆಯಿತ್ತರು. ಕುರುಬ ಸಮುದಾಯ ಕರಿಕಂಬಳಿ ಅವರ ಶ್ರಮ ಹಾಗೂ ಪ್ರಾಮಾಣಿಕತೆಯ ಚಿನ್ಹೆ. ಅದು ನನಗೆ ಕವಚವಿದ್ದಂತೆ. ಅವರು ಪ್ರೀತಿಯಿಂದ ಕಾಣಿಕೆ ನೀಡಿರುವ ಆರೋಗ್ಯವಂತ ಕುರಿ ಜೀವಂತಿಕೆಯ ಸಂಕೇತ. ತನ್ನ ಉಣ್ಣೆಯನ್ನು ನೀಡಿ ಜನರನ್ನು ಚಳಿಗಾಲದಲ್ಲಿ ರಕ್ಷಿಸುತ್ತದೆ. ಪರೋಪಕಾರಿಯಾಗಿ ಬದುಕಬೇಕೆನ್ನುವ ಸಂದೇಶವನ್ನು ಅದು ಸಾರುತ್ತದೆ. ಗಂಜಿಗಟ್ಟಿ ಗ್ರಾಮದ ಜನರ ತ್ಯಾಗ ವ್ಯರ್ಥವಾಗುವುದಿಲ್ಲ. ಊರಿನ ಸಮಗ್ರ ಅಭಿವೃದ್ಧಿ ಮಾಡಿ, ಸಮಸ್ಯೆಗಳನ್ನು ನಿವಾರಿಸಿ, ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಕೆಲಸವನ್ನು ಮಾಡಲಾಗುವುದೆಂಬ ಭರವಸೆಯಿತ್ತರು.

Leave a Comment

Your email address will not be published. Required fields are marked *

Translate »
Scroll to Top