ಶೂ ಧರಿಸಿ ರಾಹುಲ್ ಗಾಂಧಿ ಇಂದಿರಾಗಾಂಧಿ ಪ್ರತಿಮೆಗೆ ಪುಷ್ಪ ನಮನ ; ಸಂಸ್ಕೃತಿಹೀನ ಎಂದ ಬಿಜೆಪಿ!
ಭೋಪಾಲ್: ಮಧ್ಯಪ್ರದೇಶದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ “ಸಂಘಟನ್ ಸೃಜನ್ ಅಭಿಯಾನ್”ಗೆ ಚಾಲನೆ ನೀಡಿರುವ ಕಾಂಗ್ರೆಸ್ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಪ್ರಮುಖ ಸಭೆಗಳ ಸರಣಿಗಾಗಿ ಮಧ್ಯಪ್ರದೇಶ ಕಾಂಗ್ರೆಸ್ ಪ್ರಧಾನ ಕಚೇರಿಗೆ ಪ್ರವೇಶಿಸುವ ಮೊದಲು, ರಾಹುಲ್ ಗಾಂಧಿ ಅವರು ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಆದರೆ ಪುಷ್ಪ ನಮನದ ವೇಳೆ ಅವರು ತಮ್ಮ ಪಾದರಕ್ಷೆಗಳನ್ನು ತೆಗೆಯದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಇತ್ತೀಚಿಗೆ ಗೋಡ್ಸೆ ಮತ್ತು ಸಾವರ್ಕರ್ ರಕ್ತ ಸಂಬಂಧಿಗಳು ಎಂದು ಅಫಿಡವಿಟ್ ಸಲ್ಲಿಸಿ ವಿವಾದ ಸೃಷ್ಟಿಸಿದ್ದರು.
ಹೌದು, ರಾಹುಲ್ ಗಾಂಧಿ ಅವರು ಇಂದಿರಾ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ, ತಮ್ಮ ಶೂಗಳನ್ನು ತೆಗೆಯದಿರುವುದು ಬಿಜೆಪಿಗೆ ಹೊಸ ಅಸ್ತ್ರವನ್ನು ಒದಗಿಸಿದೆ. “ರಾಹುಲ್ ಗಾಂಧಿ ಅವರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲ: ಎಂದು ಬಿಜೆಪಿ ಹರಿಹಾಯ್ದಿದೆ. ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲೂ ಟ್ರೋಲ್ಗೆ ತುತ್ತಾಗಿದ್ದಾರೆ.
ಭೋಪಾಲ್ನಲ್ಲಿ ಪಕ್ಷದ ಆಂತರಿಕ ಕಾರ್ಯತಂತ್ರ ಸಭೆಗಳಲ್ಲಿ ಭಾಗವಹಿಸಿರುವ ರಾಹುಲ್ ಗಾಂಧಿ, ಆ ಬಳಿಕ ಇಲ್ಲಿನ ರವೀಂದ್ರ ಭವನದಲ್ಲಿ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರ ಸಾಂಸ್ಥಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
“ರಾಹುಲ್ ಗಾಂಧಿ ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರಿಗೆ ಗೌರವ ಸಲ್ಲಿಸುವಾಗ ತಮ್ಮ ಶೂಗಳನ್ನು ತೆಗೆಯಲಿಲ್ಲ. ಅವರ ನಡೆ ನಮ್ಮ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಅವರು ಅಂತಹ ವಿಷಯಗಳ ಬಗ್ಗೆ ಸ್ವಲ್ಪ ಹೆಚ್ಚು ಜಾಗರೂಕರಾಗಿರಬೇಕು” ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅಸಮಾಧಾನ ಹೊರಹಾಕಿದ್ದಾರೆ.
ಇದೇ ವಿಚಾರವಾಗಿ ಮಾತನಾಡುರುವ ಬಿಜೆಪಿ ನಾಯಕ ಹಿತೇಶ್ ವಾಜಪೇಯಿ, “ತಮ್ಮ ಅಜ್ಜಿಗೆ ಪುಷ್ಪ ನಮನ ಸಲ್ಲಿಸುವಾಗ ಶೂಗಳನ್ನು ತೆಗೆಯದ ವ್ಯಕ್ತಿ, ಭಾರತ ಮಾತೆಯ ಗೌರವವನ್ನು ಹೇಗೆ ಎತ್ತಿ ಹಿಡಿಯಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, “ರಾಹುಲ್ ಗಾಂಧಿ ಅವರಂತಹ ಸಂಸ್ಕೃತಿಹೀನ ನಾಯಕನ್ನು ಹೊಂದಿರುವ ಕಾಂಗ್ರೆಸ್, ಈ ದೇಶದಲ್ಲಿ ಪುನಶ್ಚೇತನಗೊಳ್ಳುವ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ. ಸ್ವಯಂ ವಿನಾಶದ ಹಾದಿಯಲ್ಲಿರುವ ಯಾರಾದರೂ ರಾಷ್ಟ್ರವನ್ನು ಪುನರ್ನಿರ್ಮಿಸಲು ಹೇಗೆ ಸಾಧ್ಯ?” ಎಂದು ಹಿತೇಶ್ ವಾಜಪೇಯಿ ಕಟುವಾಗಿ ಟೀಕಿಸಿದ್ದಾರೆ. 2021ರಲ್ಲಿ ರಾಹುಲ್ ಗಾಂಧಿ ಅವರು ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿ ನಿರ್ಧಾರ ತಪ್ಪು ಎಂದು ಹೇಳಿದ್ದರು.