ಬೆಂಗಳೂರು: ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಕಾನೂನನ್ನು ಜಾರಿ ಮಾಡಲು ಮುಂದಾಗಿದೆ.
ಈ ಹಿಂದೆಯೇ ಖಾಸಗಿ ವಲಯದಲ್ಲಿ ಕನ್ನಡಗರಿಗೆ ಉದ್ಯೋಗ ನೀಡುವ ವಿಧೇಯಕವನ್ನು ಸಿದ್ಧಪಡಿಸಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದ ಅದನ್ನು ತಡೆಹಿಡಿಯಲಾಗಿತ್ತು. ಈಗ ಮತ್ತೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಬೇಡಿಕೆ, ಒತ್ತಾಯಗಳಿಗೆ ಮಣಿದಿರುವ ರಾಜ್ಯ ಸರ್ಕಾರ, ಈ ಹಿಂದೆ ತಡೆ ಹಿಡಿಯಲಾಗಿದ್ದ ಕರ್ನಾಟಕ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ವಿಧೇಯಕವನ್ನು ಜಾರಿಗೆ ತರಲು ಮುಂದಾಗಿದೆ.
ಕಳೆದ ವರ್ಷವೇ ಖಾಸಗಿ ವಲಯದಲ್ಲಿ ಉದ್ಯೋಗ ನೀಡುವ ವಿಧೇಯಕವನ್ನು ಸಿದ್ಧಪಡಿಸಲಾಗಿತ್ತು. ಕೆಲವು ಆಕ್ಷೇಪಣೆ, ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ಈ ವಿಧೇಯಕವನ್ನು ರಾಜ್ಯ ಸರ್ಕಾರ ಜಾರಿ ಮಾಡಲು ಆಗಿರಲಿಲ್ಲ. ಈಗ ಈ ವಿಧೇಯಕ ಜಾರಿ ಮಾಡಲು ಸರ್ಕಾರ ದೃಢ ಹೆಜ್ಜೆಗಳನ್ನು ಇಟ್ಟಿದ್ದು ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಧೇಯಕದ ಬಗ್ಗೆ ಚರ್ಚಿಸಿ ಒಪ್ಪುಗೆ ನೀಡವ ಸಾಧ್ಯತೆ ಇದೆ.
ನಾಳಿನ ಸಚಿವ ಸಂಪುಟದಲ್ಲಿ ಈ ವಿಧೇಯಕಕ್ಕೆ ಒಪ್ಪಿಗೆ ಸಿಗಲಿದ್ದು, ಮುಂದಿನ ವಿಧಾನಮಂಡಲದ ಅಧಿವೇಶದಲ್ಲಿ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ಮಂಡಿಸುವ ಸಾಧ್ಯತೆಗಳು ಇವೆ.
ಈ ವಿಧೇಯಕದಲ್ಲಿ ಖಾಸಗಿ ವಲಯದಲ್ಲಿ ಕನ್ನಡಗಿರಿಗೆ ಶೇ. 75 ಉದ್ಯೋಗ ಮೀಸಲಾತಿ ನೀಡುವ ಅಂಶಗಳಿದ್ದು, ಆಡಳಿತಾತ್ಮಕ ಹುದ್ದೆ ಇದರಲ್ಲಿ ಶೇ. 50 ಅಂದರೆ ತಾಂತ್ರಿಕ, ಕೌಶಲ್ಯ ಮತ್ತಿತರ ಉಗ್ಯೋದಗಳಲ್ಲಿ ಶೇ. 50 ರಷ್ಟು ಕನ್ನಡಿಗರಿಗೆ ಮೀಸಲಿರಬೇಕು. ಅದೇ ರೀತಿ ಆಡಳಿತೇತರ ಹುದ್ದೆ ಸಿ. ಗ್ರೂಪ್, ಡಿ ಗ್ರೂಪ್ ಅಂದರೆ ಗುಮಾಸ್ತ ಕೌಶಲ್ಯ ರಹಿತ ಶೇ. 75 ರಷ್ಟು ಕನ್ನಡಿಗರಿಗೆ ಮೀಸಲಿರಬೇಕು ಎಂಬ ಅಂಶಗಳಿವೆ.
ಈ ವಿಧೇಯಕ ಜಾರಿಯಾದ ನಂತರ ಖಾಸಗಿ ವಲಯದಲ್ಲಿ ಕನ್ನಡಗರಿಗೆ ಉದ್ಯೋಗ ಮೀಸಲಾತಿ ನೀಡದ ಸಂಸ್ಥೆಗಳು, ಉದ್ಯಮಗಳ ವಿರುದ್ಧ ಕಾನೂನು ಕ್ರಮಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಮೀಸಲಾತಿ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.
ಕರ್ನಾಟಕದಲ್ಲಿ ಹುಟ್ಟಿರುವವರು ಅಥವಾ ಕರ್ನಾಟಕದಲ್ಲಿ 15 ವರ್ಷ ವಾಸ ಇರುವವರು ಕನ್ನಡ ಓದಲು, ಬರೆಯಲು ಮಾತನಾಡಲು ಬರುವವರನ್ನು ಕನ್ನಡಿಗರು ಎಂದು ಪರಿಗಣಿಸಿ ಅವರಿಗೆ ಖಾಸಗಿ ವಲಯದಲ್ಲೂ ಮೀಸಲಾತಿ ನೀಡುವ ವಿಧೇಯಕವನ್ನು ಸಿದ್ಧಪಡಿಸಲಾಗಿದೆ.
ಒಂದು ವೇಳೆ ಕರ್ನಾಟಕದಲ್ಲಿ 15 ವರ್ಷ ವಾಸವಿದ್ದು ಕನ್ನಡ ಓದಲು , ಬರೆಯಲು ಬರದಿದ್ದರೆ ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಈ ಕಾಯ್ದೆಯಲ್ಲಿ ಕಡ್ಡಾಯ ಮಾಡಲಾಗಿದೆ.
ಕಳೆದ ಜುಲೈನಲ್ಲೇ ಈ ಕಾಯ್ದೆ ಜಾರಿಗೆ ಸರ್ಕಾರ ಸಿದ್ಧವಿತ್ತಾದರೂ ತಾಂತ್ರಿಕ ಕಾರಣದಿಂದ ವಿಧೇಯಕವನ್ನು ತಡೆಹಿಡಿಯಲಾಗಿತ್ತು. ಈಗ ತಾಂತ್ರಿಕ ಕಾರಣ, ಮುಂದೆ ಎದುರಾಗುವ ಕಾನೂನು ತೊಡಕು ಎಲ್ಲವನ್ನೂ ಸರಿಪಡಿಸಿಕೊಂಡು ವಿಧೇಯಕ ಸಿದ್ಧಗೊಂಡಿದೆ.
ನಾಳಿನ ಸಚಿವ ಸಂಪುಟದಲ್ಲಿ ಈ ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದ್ದು, ಸಂಪುಟದ ಒಪ್ಪಿಗೆ ಪಡೆದ ನಂತರ ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಿ ಒಪ್ಪಿಗೆ ಪಡೆಯಲು ಸರ್ಕಾರ ತಯಾರಿ ನಡೆಸಿದೆ.
ಈ ವಿಧೇಯಕ ಜಾರಿಯಾದರೆ ರಾಜ್ಯದಲ್ಲಿ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗವಕಾಶದ ಲಭ್ಯತೆ ಜತೆಗೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ದೂರುಗಳು ಕಡಿಮೆಯಾಗಲಿದೆ.



