ಸಂಸತ್ತಿನಲ್ಲಿ ಸಂಸದರ ಅಮಾನತು ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ

ಪ್ರತಾಪ್ ಸಿಂಹ ಬಂಧಿಸುವವರೆಗೆ ನಮ್ಮ ಹೋರಾಟ ನಿಲ್ಲದು – ಎಂ.ಎಸ್. ರಕ್ಷಾ ರಾಮಯ್ಯ

ಚಿಕ್ಕಬಳ್ಳಾಪುರ :  ದೇಶ ಸ್ವಾತಂತ್ರ್ಯ ಪಡೆದ ನಂತರ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಂಸತ್ತಿನಲ್ಲಿ ಪ್ರತಿಪಕ್ಷ ಸದಸ್ಯರನ್ನು ಅಮಾನತು ಮಾಡಿದ್ದು, ಇದು ರೈತ ಸಮುದಾಯ ಮತ್ತು ಜನ ಸಾಮಾನ್ಯರಿಗೆ ಮಾಡಿದ ಅಪಮಾನ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಆಪಾದಿಸಿದ್ದಾರೆ.

ಸಂಸತ್ತಿನಲ್ಲಿ ಭದ್ರತಾ ಲೋಪಕ್ಕೆ ಕಾರಣವಾದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿ ವಿಚಾರಣೆ ನಡೆಸುವವರೆಗೆ ಹೋರಾಟ ನಿಲ್ಲುವುದಿಲ್ಲ ಎಚ್ಚರಿಕೆ ನೀಡಿದ್ದಾರೆ.

 

ಚಿಕ್ಕಬಳ್ಳಾಪುರ ಬಿ.ಬಿ.ರಸ್ತೆಯ ಒಕ್ಕಲಿಗರ ಕಲ್ಯಾಣ ಮಂಟಪ ಮುಂಭಾಗದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ಬಾರಿ ಸಂಸತ್ ಅಧಿವೇಶನದಲ್ಲಿ 146 ಸಂಸತ್ ಸದಸ್ಯರನ್ನು ಅಮಾನತು ಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೇಂದ್ರ ಸರ್ಕಾರ ಕಗ್ಗೊಲೆ ಮಾಡಿದೆ. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಗೆ ಇದು ಕಪ್ಪು ಚುಕ್ಕೆ ಎಂದರು.

ರೈತರು, ಅದಾನಿ ಬಗ್ಗೆ ಸದನದಲ್ಲಿ ಮಾತನಾಡಿದರೆ ಅಮಾನತುಗೊಳಿಸುತ್ತಿದ್ದಾರೆ. ಚೀನಾ ದೇಶ ನಮ್ಮ ಭಾರತದೊಳಗೆ ನುಸುಳಿರುವ ಕುರಿತಂತೆ ಚಕಾರ ಎತ್ತಿದ್ದರೂ ಅಮಾನತು ಶಿಕ್ಷೆ ನೀಡುತ್ತಿದ್ದಾರೆ. ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರಸ್ತಾಪಿಸಿದರೆ ಕ್ರಮ ತೆಗೆದುಕೊಳ್ಳುತ್ತಾರೆ. ವಾಸ್ತವಿಕವಾಗಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಅಮಾನತುಗೊಳಿಸಬೇಕು. ವಿಚಿತ್ರವೆಂದರೆ ವಿಪಕ್ಷ ಸದಸ್ಯರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ದೂರಿದರು.

ಕೇಂದ್ರದಲ್ಲಿರುವುದು ತೊಘಲಕ್ ಆಡಳಿತ. ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಹೋರಾಟದಲ್ಲಿ ತೊಡಗುತ್ತೇನೆ. ನಮ್ಮೊಂದಿಗೆ ಎಲ್ಲರೂ  ಕೈಜೋಡಿಸಬೇಕು ಎಂದು ಎಂ.ಎಸ್. ರಕ್ಷಾ ರಾಮಯ್ಯ ಹೇಳಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top