ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ಕದ್ದು ಪ್ರಧಾನಿ ಮೋದಿ ಚುನಾವಣೆ ಎದುರಿಸುತ್ತಿದ್ದಾರೆ

ಬೆಂಗಳೂರು: “ಪ್ರಧಾನಿ ಮೋದಿಯವರು ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಕದ್ದು ಪಂಚರಾಜ್ಯಗಳ ಚುನಾವಣೆ ಎದುರಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಲೇವಡಿ ಮಾಡಿದರು.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಸಭಾಂಗಣದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನಾಚರಣೆ ಮತ್ತು ಬೆಂಗಳೂರು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿಅವರು ಹೇಳಿದ್ದಿಷ್ಟು;

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ದಳಕ್ಕೆ ಮತ ಹಾಕಿದರೆ ಅವರು ಗ್ಯಾರಂಟಿ ಯೋಜನೆಗಳನ್ನು ವಾಪಸ್‌ ತೆಗದುಕೊಳ್ಳುವಂತಹ ಕಾನೂನು ತರುತ್ತಾರೆ. ಈ ವಿಚಾರಗಳನ್ನು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಯಕರು ಜನರಿಗೆ ಮನವರಿಕೆ ಮಾಡಿಕೊಡಬೇಕು.

 

ಬಿಜೆಪಿ ಮತ್ತು ದಳದವರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರು. ಅವರ ಈ ಜನವಿರೋಧಿ ಬುದ್ದಿಯನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲುಸುವುದಾಗಲಿ, ಕಡಿಮೆ ಮಾಡುವುದಾಗಲಿ ಯಾವುದನ್ನೂ ಸಹ ಕಾಂಗ್ರೆಸ್‌ ಸರ್ಕಾರ ಮಾಡುವುದಿಲ್ಲ.

ಬಿಜೆಪಿಯವರು ಅಧ್ಯಕ್ಷರನ್ನಾಗಿ, ವಿರೋಧ ಪಕ್ಷದ ನಾಯಕರನ್ನಾಗಿ ಯಾರನ್ನಾದರೂ ಮಾಡಿಕೊಳ್ಳಲಿ. ಎಷ್ಟು ಜನರನ್ನು ಬೇಕಾದರೂ ಒಗ್ಗೂಡಿಸಲಿ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ನಮಗೂ ಅದಕ್ಕೂ ಸಂಬಂಧವಿಲ್ಲ. 

ಬ್ಲಾಕ್‌, ಜಿಲ್ಲಾ ತಾಲ್ಲೂಕು ಮಟ್ಟದ ಅಧ್ಯಕ್ಷರು, ಕಾರ್ಯಕರ್ತರು ಮತ್ತು ನಾಯಕರು ಬೂತ್‌ ಮಟ್ಟದಿಂದ ಗ್ಯಾರಂಟಿ ಯೋಜನೆಗಳ ಸಾಧಕ- ಭಾದಕಗಳನ್ನು ಕಡ್ಡಾಯವಾಗಿ ತಿಳಿದುಕೊಂಡು, ಜನರಿಗೆ ಆಗುತ್ತಿರುವ ಅನಾನುಕೂಲ ಮತ್ತು ಅನುಕೂಲ ಎರಡನ್ನೂ ಸರ್ಕಾರದ ಗಮನಕ್ಕೆ ತರಬೇಕು.

ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೇ ಇಲ್ಲವೇ ಎಂದು ಖುದ್ದಾಗಿ ತಿಳಿಯಲು ಮಂತ್ರಿಗಳಿಗೆ ಸೂಚನೆ ನೀಡಲಾಗಿದೆ.

 

ನ. 28 ರಂದು ಕಾಂಗ್ರೆಸ್‌ ಸಂಸ್ಥಾಪಕರ ದಿನ.  ಈ ದಿನದಂದೇ ಪಕ್ಷದ ವತಿಯಿಂದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೇ ಎಂದು ಸಮೀಕ್ಷೆ ಮಾಡಲು ಸಮಿತಿ ರಚನೆ ಮಾಡಲಾಗುವುದು.

ಮುಂದಿನ ನಾಲ್ಕು ವರ್ಷಗಳಲ್ಲಿ ಯಾರು ಇರುತ್ತಾರೆ ಎನ್ನುವುದೇ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬವೂ ತಿಂಗಳಿಗೆ 5 ಸಾವಿರಕ್ಕೂ ಹೆಚ್ಚು ಹಣವನ್ನು ಉಳಿತಾಯ ಮಾಡುತ್ತಿದೆ. ಇಂತಹ ಚಿನ್ನದ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಜನರಿಗೆ ಕಾರ್ಯಕರ್ತರು ಮನವರಿಕೆ ಮಾಡಬೇಕು.

ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೋದ ವೇಳೆ ಅವರು ʼಡಿ.ಕೆ ಈ ವರ್ಷ ಎರಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತನ್ನಿ, ಸಾಕು ಎಂದಿದ್ದರುʼ. ನಾನು ಆಯಿತು ಸಾರ್‌ ಎಂದು ನಕ್ಕು ಹೊರಬಂದಿದ್ದೆ. ಆದರೆ ಮೊದಲನೇ ಕ್ಯಾಬಿನೆಟ್‌ ಸಭೆಯಲ್ಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. ಡಿಸೆಂಬರ್‌ ತಿಂಗಳಿನಲ್ಲಿ ಐದನೇ ಗ್ಯಾರಂಟಿ ಯುವನಿಧಿ ಜಾರಿಗೆ ತರಲಾಗುವುದು.

ದೇಶಕ್ಕೆ ಗ್ಯಾರಂಟಿ ಯೋಜನೆಗಳನ್ನು ಮೊದಲು ನೀಡಿದ ಪ್ರಧಾನಿ ಇಂದಿರಾ ಗಾಂಧಿ

ಈ ದೇಶಕ್ಕೆ ಗ್ಯಾರಂಟಿ ಯೋಜನೆಗಳನ್ನು ಮೊದಲು ಕೊಟ್ಟವರು ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷ. ಬ್ಯಾಂಕ್‌ಗಳ ರಾಷ್ಟ್ರೀಕರಣವಾದ ಮೇಲೆ ಜನರ ಮನೆ ಬಾಗಿಲಿಗೆ ಬಂದು ಸಾಲ ಕೊಡುವ ವ್ಯವಸ್ಥೆ ಬಂದಿದ್ದೇ ಇಂದಿರಾ ಗಾಂಧಿ ಅವರ ಕ್ರಾಂತಿಕಾರಕ ನಿರ್ಧಾರದಿಂದ. ಅಂಗನವಾಡಿಯಲ್ಲಿ ಬಿಸಿಯೂಟ ಸೇರಿದಂತೆ ಸಾವಿರಾರು ಜನಪರ ಯೋಜನೆಗಳು ಜಾರಿಗೆ ಬಂದಿದ್ದೇ ಇಂದಿರಾಗಾಂಧಿ ಅವರ ಕಾಲದಲ್ಲಿ.

 

ನಾನು ಮೊದಲ ಬಾರಿಗೆ ಬೈಕ್‌ ತೆಗದುಕೊಳ್ಳಲು ಲಾಲ್‌ಬಾಗ್‌ ಬಳಿ ಇರುವ ಲೇವಾದೇವಿಗಾರರ ಬಳಿ 3 ಸಾವಿರ ಸಾಲ ಪಡೆದು ತಿಂಗಳಿಗೆ 500 ರೂಪಾಯಿ ಕಟ್ಟುತ್ತಿದ್ದೆ. ಆಗ ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರಿಗೆ ಸಾಲ ಕೊಡುವ ವ್ಯವಸ್ಥೆ ಇರಲಿಲ್ಲ. ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದ ಲಕ್ಷಾಂತರ ಜನರ ಬದುಕಿನಲ್ಲಿ ಬದಲಾವಣೆ ಉಂಟಾಯಿತು.

ಆಸ್ತಿ, ಪ್ರಾಣ, ಅಧಿಕಾರ ಸೇರಿದಂತೆ ತಮ್ಮ ಜೀವನವನ್ನೆ ನೆಹರು ಕುಟುಂಬದವರ ಈ ದೇಶಕ್ಕೆ ಸಮರ್ಪಿಸಿದ್ದಾರೆ. ಇಡೀ ಪ್ರಪಂಚದಲ್ಲಿಯೇ ನೆಹರು ಕುಟುಂಬದಂತೆ ಯಾರೂ ಪಕ್ಷ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಾಧ್ಯವಿಲ್ಲ.

ಪ್ರಪಂಚದ ಭೂಪಟದಲ್ಲಿ ಹೊಸ ದೇಶ ಸೃಷ್ಟಿ ಮಾಡಿದ ದುರ್ಗೆ ಇಂದಿರಾ ಗಾಂಧಿ. ಪಾಕಿಸ್ತಾನ ಈಗಿನ ಬಾಂಗ್ಲಾದೇಶದ ಮೇಲೆ ಯುದ್ಧ ಸಾರಿದಾಗ, ಪಕ್ಕದ ದೇಶದ ಜೊತೆಗೆ ನಿಂತು ಬಾಂಗ್ಲಾದೇಶದ ರಚನೆ ಮತ್ತು ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದವರು.

ಭಾರತ್‌ ಜೋಡೋ ಯಾತ್ರೆಯ ವೇಳೆ ಮೊಣಕಾಲ್ಮೂರಿನ ಬಳಿ ಅಜ್ಜಿಯೊಂದು ಸೌತೆಕಾಯಿಯನ್ನು ರಾಹುಲ್‌ ಗಾಂಧಿ ಅವರಿಗೆ ನೀಡಿ ʼನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೆಕಾಯಿʼ ಎಂದು ಕಣ್ಣೀರು ಹಾಕಿದ್ದರು.

 

ಇಂದಿರಾಗಾಂಧಿ ಅವರ ಬಗ್ಗೆ ಸೋನಿಯಾ ಗಾಂಧಿ ಅವರು ಬರೆದಿರುವ ಪುಸ್ತಕವನ್ನು ಶೀಘ್ರದಲ್ಲೇ ಕನ್ನಡದಲ್ಲಿ ಪ್ರಕಟಿಸಲಾಗುವುದು. ಈ ಪುಸ್ತಕದಲ್ಲಿ ಇಂದಿರಾಗಾಂಧಿ ಅವರು ಕಾಂಗ್ರೆಸ್‌ ಪಕ್ಷದ ಬಗ್ಗೆ ಹೇಳಿದ ಮಾತುಗಳನ್ನು ಉಲ್ಲೇಖಿಸಲಾಗಿದೆ. “ನಮ್ಮ ಕಾಂಗ್ರೆಸ್‌ ವಿಶಿಷ್ಟವಾದ ಸಂಸ್ಥೆ. ಹೀಗೆ ಹೇಳಲು ಕಾರಣ ಏನೆಂದು ಕೇಳಿದರೆ, ಕಾಂಗ್ರೆಸ್‌ ಆರಂಭದಿಂದಲೂ ತನ್ನನ್ನ ಜನರ ಮೂಲಭೂತ ಸಮಸ್ಯೆಗಳ ಜೊತೆ ಗುರುತಿಸಿಕೊಳ್ಳುತ್ತಿದೆ ಎಂದು ಹೇಳಬಹುದು. ನಾವು ಯಾವಾಗಲೂ ಪ್ರಜಾಪ್ರಭುತ್ವ, ಜಾತ್ಯಾತೀತತೇ, ಸಾಮಾಜಿಕ ನ್ಯಾಯಗಳ ಪರ ನಿಂತಿದ್ದೇವೆ ಎಂದು.

ಶಕ್ತಿ ಯೋಜನೆಯ ಪರಿಣಾಮ ಮೈಸೂರು ದಸರಾಗೆ ಲಕ್ಷಾಂತರ ಹೆಣ್ಣುಮಕ್ಕಳು ಭಾಗವಹಿಸಿದ್ದರು. ಹಾಸನಾಂಭ ದೇವರ ದರ್ಶನದ ಟಿಕೆಟ್‌ ನಿಂದ 8 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಹಣದ ಚಲಾವಣೆ ಹೆಚ್ಚಾಗಿದ್ದು, ಹೋಟೆಲ್‌, ರೂಮು, ಜಾತ್ರೆಯ ವ್ಯಾಪಾರಿಗಳ ವಹಿವಾಟು ಹೆಚ್ಚಳವಾಗಿದೆ. ಶಕ್ತಿ ಯೋಜನೆಯ ಪರಿಣಾಮ 100 ಕೋಟಿ ಟ್ರಿಪ್‌ಗಳನ್ನು ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.

ನಾನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡಿದ್ದು ಕೊರೋನಾ ಸಂದರ್ಭದಲ್ಲಿ. ಆಗ  ಯಾರೊಬ್ಬರೂ ಕಚೇರಿಯ ಕಡೆ ತಲೆ ಹಾಕಿಯೂ ನೋಡುತ್ತಿರಲಿಲ್ಲ. ನಮ್ಮ ಹೆಣಗಳನ್ನು ಮನೆಗೆ ಕಳುಹಿಸಬೇಕು ಎಂದು ಕಾದಿದ್ದೀರಾ ಎಂದು ಒಂದಷ್ಟು ಜನ ಬೈಯುತ್ತಿದ್ದರು. ಈ ವೇಳೆ ಸೋತಂತಹ ಅಭ್ಯರ್ಥಿಗಳು ಸುಮಾರು 140 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ದೊರೆಯುಂತೆ ಮಾಡಿದರು.  ಇದಕ್ಕೆ ನಿರ್ಗಮಿತ ಜಿಲ್ಲಾ ಅಧ್ಯಕ್ಷರುಗಳು ಹೆಗಲು ಕೊಟ್ಟು ದುಡಿದರು. ಮುಂದೆ 10 ಜಿಲ್ಲೆಗಳ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುವುದು. ಯಾವ ಕಾರ್ಯಕರ್ತ, ನಾಯಕರನ್ನು ಪಕ್ಷ ಸುಲಭವಾಗಿ ಬಿಟ್ಟುಕೊಡುವುದಿಲ್ಲ, ಅವರ ದುಡಿಮೆ ಪಕ್ಷಕ್ಕೆ ಬೇಕು.

ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿಯೇ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಮೊದಲ ಬಾರಿಗೆ ಮಾಡಲಾಗುತ್ತಿದೆ. ನಮ್ಮ ಆಚಾರ, ವಿಚಾರಗಳನ್ನು ನಾವು ಜನರಿಗೆ ತಲುಪಿಸಬೇಕೆ ಹೊರತು, ಬೇರೆಯ ಸಂಗತಿಗಳನ್ನು ತಲುಪಿಸಲು ಅಧಿಕಾರಕ್ಕೆ ಬಂದಿಲ್ಲ.

 

ಕಾಂಗ್ರೆಸ್ ಪಕ್ಷ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಾ ಬೆಳೆಯುತ್ತಿದೆ. ಮಾಜಿ ಸಚಿವ ಕೃಷ್ಣಪ್ಪ ಅವರ ಮಗಳು ಪೂರ್ಣಿಮಾ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಿದಾಗಲೇ ಪಕ್ಷಕ್ಕೆ  ಬಂದಿದ್ದರೇ ಕೆ.ಆರ್‌.ಪುರಂ ಶಾಸಕರಾಗುತ್ತಿದ್ದರು. ಪದ್ಮನಾಭ ನಗರದ ದೊಡ್ಡ ತಂಡವೇ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಕೊಂಡಿದ್ದು, ದಾಸರಹಳ್ಳಿಯ ಮಂಜುನಾಥ್‌ ಅವರು ಕಾಂಗ್ರೆಸ್‌ ಪಕ್ಷ ಸೇರಿದ್ದು. ಅವರೇನು ದಡ್ಡರೇ?

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top