ಬಳ್ಳಾರಿ: ನಗರದ ಕೇಂದ್ರ ಕಾರಾಗೃಹದ ಮೇಲೆ ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಅಚ್ಚರಿ ದಾಳಿ ನಡೆಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಏಕಕಾಲಕ್ಕೆ ಜೈಲಿನ ಮೇಲೆರಗಿದ್ದು, ಕೈದಿಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು.
3 ಗಂಟೆಗಳ ಕಾಲ ಸುದೀರ್ಘ ಶೋಧ: ಬಳ್ಳಾರಿ ಎಸ್ಪಿ ಸುಮನ್ ಡಿ. ಪನ್ನೇಕರ್ ಹಾಗೂ ಹೆಚ್ಚುವರಿ ಎಸ್ಪಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಸುಮಾರು 3 ರಿಂದ 4 ಗಂಟೆಗಳ ಕಾಲ ಸತತವಾಗಿ ನಡೆಯಿತು. ಜೈಲಿನ ಪ್ರತಿಯೊಂದು ಬ್ಯಾರಕ್ಗಳು, ಶೌಚಾಲಯ ಹಾಗೂ ಕೈದಿಗಳು ಓಡಾಡುವ ಆವರಣವನ್ನು ಪೊಲೀಸರು ಸೂಕ್ಷ್ಮವಾಗಿ ತಪಾಸಣೆ ನಡೆಸಿದರು. ನೂರಾರು ಪೊಲೀಸರು ಜೈಲು ಆವರಣದಲ್ಲಿ ಜಮಾಯಿಸಿದ್ದರಿಂದ ಇಡೀ ಕಾರಾಗೃಹ ಪೊಲೀಸ್ ಮಯವಾಗಿತ್ತು.
ಅನುಮಾನಾಸ್ಪದ ವಸ್ತುಗಳು ವಶಕ್ಕೆ: ತಪಾಸಣೆ ವೇಳೆ ಯಾವುದೇ ಭಾರಿ ಪ್ರಮಾಣದ ಮಾರಕಾಸ್ತ್ರ ಅಥವಾ ಮಾದಕ ದ್ರವ್ಯಗಳು ಪತ್ತೆಯಾಗಿಲ್ಲ. ಆದರೆ, ಅಧಿಕಾರಿಗಳಿಗೆ ಕಂಡುಬಂದ ಎರಡು ಅನುಮಾನಾಸ್ಪದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಇಲಾಖೆಯ ವತಿಯಿಂದ ಸಾಕ್ಷ್ಯವಾಗಿ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ದಾಳಿಗೆ ಕಾರಣವೇನು? ಮೂಲಗಳ ಪ್ರಕಾರ, ನಿನ್ನೆ ಕಾರಾಗೃಹದೊಳಗೆ ಕೆಲವು ಕೈದಿಗಳ ಅಸಮರ್ಪಕ ವರ್ತನೆ ಹಾಗೂ ಅಶಿಸ್ತಿನ ಘಟನೆಗಳು ನಡೆದಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜೈಲಿನ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ಹಾಗೂ ಕೈದಿಗಳಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಈ ಕಾರ್ಯಾಚರಣೆ ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ.
ಇದು ಸಾಮಾನ್ಯ ತಪಾಸಣೆ ಎಂದ ಎಸ್ಪಿ: ದಾಳಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರು, "ಇದು ಯಾವುದೇ ನಿರ್ದಿಷ್ಟ ಉದ್ದೇಶದ ದಾಳಿಯಲ್ಲ. ಭದ್ರತಾ ದೃಷ್ಟಿಯಿಂದ ಜೈಲುಗಳಲ್ಲಿ ಕಾಲಕಾಲಕ್ಕೆ ನಡೆಸುವ ಸಾಮಾನ್ಯ ರೂಟೀನ್ ಚೆಕ್ (Routine Check) ಮಾತ್ರ," ಎಂದು ಸ್ಪಷ್ಟಪಡಿಸಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಒಟ್ಟಿನಲ್ಲಿ, ದರ್ಶನ್ ಸೇರಿದಂತೆ ಹೈಪ್ರೊಫೈಲ್ ಕೈದಿಗಳಿರುವ ಬೆನ್ನಲ್ಲೇ ಬಳ್ಳಾರಿ ಜೈಲಿನಲ್ಲಿ ನಡೆದ ಈ ಹಠಾತ್ ದಾಳಿ ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.