ಕುರುಗೋಡು : ಪಟ್ಟಣದಲ್ಲಿ ಮೊದಲಬಾರಿಗೆ ಫೆ.15 ಮತ್ತು 16 ಎರಡು ದಿನ ನಡೆಯುತ್ತಿರುವ ಕುರುಗೋಡು ಉತ್ಸವದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಉತ್ಸಾಹ ದಿಂದ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಸಲಹೆ ನೀಡಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕುರು ಗೋಡು ಉತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕುಂತಳನಾಡಿನ ಗತವೈಭವದ ಐತಿಹಾಸಿಕ ಮರುಕಳಿಸುವ ಉತ್ಸವ ಆಚರಣೆಗೆ ತಯಾರಿಸಿ ದ ರೂಪುರೇಷೆಗಳ ಜವಾಬ್ದಾರಿ ವಹಿಸಿಕೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ರಾಜಿ ಮಾಡಿಕೊಳ್ಳದೆ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು ಎಂದು ಎಚ್ಚರಿಸಿದರು.
ನಗರದ ಸ್ವಚ್ಚತೆ, ತ್ಯಾಜ್ಯ ವಿಲೇವಾರಿ, ರಸ್ತೆ ಗುಂಡಿ ಮುಚ್ಚುವುದು ಸೇರಿ ಕುಡಿಯುವ ನೀರು, ಪ್ರಚಾರ ವಾಹನದ ವ್ಯವಸ್ಥೆ ನೋಡಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆಗೆ ತಿಳಿಸಿದರು.
ಕಲಾ ತಂಡಗಳ ಜನಪದ ವಾಹಿನಿ ಸಂಚರಿಸುವ ರಸ್ತೆಯುದ್ದಕ್ಕೂ ಆಕರ್ಷಕ ರಂಗವಲ್ಲಿ ಚಿತ್ತಾರ, ವಿದ್ಯುತ್ ದೀಪ ಮತ್ತು ತಳಿರುತೋರಣಗಳಿಂದ ಅಲಂಕರಿಸು ಕಾರ್ಯ ಅಚ್ಚುಕಟ್ಟಾಗಿ ನಡೆಯಬೇಕು, ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಬಡ್ಡಿ, ರಂಗೋಲಿ, ಕೇಶವಿನ್ಯಾಸ, ಮೇಹಂದಿ ಸ್ಪರ್ಧೆ ಆಯೋಜಿಸಿ ಜಯಗಳಿಸಿದ 16 ತಂಡಗಳಿಗೆ ಕುರುಗೋಡು ಪಟ್ಟಣದಲ್ಲಿ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡುವುದು.
ಉತ್ಸವದ ಅಂಗವಾಗಿ ಪಟ್ಟಣದ ಎಲ್ಲ ಪ್ರಮುಖ ದೇವಾಲಯಗಳಿಗೆ ಹೂವಿನ ಅಲಂಕಾರ ಮಾಡುವುದು, ಆನೆ ಅಂಬಾರಿ ಮೆರವಣಿಗೆ, ಫಲ-ಪುಷ್ಪ ಪ್ರದರ್ಶನ, ಪೌಷ್ಠಿಕ ಆಹಾರ ಪ್ರದರ್ಶನ ಮೇಳ, ಗಾಳಿಪಟ ಉತ್ಸವ, ಮ್ಯಾರಥಾನ್, ವಿವಿಧ ತಳಿಯ ಜಾನುವಾರು ಪ್ರದರ್ಶನ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಫೆ.15 ಮತ್ತು 16 ರಂದು ಎರಡು ದಿನ ಜರುಗುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ತಹಶೀಲ್ದಾರ್ ನೇತೃತ್ವದಲ್ಲಿ ಇಲಾಖೆವಾರು ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗುವುದು.
ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ನರಸಪ್ಪ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ ಕೆ.ವಿ. ನಿರ್ಮಲ,ಸಿಪಿಐ .ವಿಶ್ವನಾಥ ಹಿರೇಗೌಡರ್, ಪಿಎಸ್ಐ.ಸುಪ್ರಿತ್ ವಿರುಪಾಕ್ಷಿ, ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮತ್ತು ತಾಲ್ಲೂಕು ಮಟ್ಟಡ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಹಂಪಿ ಉತ್ಸವದ ಮಾದರಿಯಲ್ಲಿ ಪ್ರತಿವರ್ಷ ಕುರುಗೋಡು ಮತ್ತು ಕಂಪ್ಲಿ ಉತ್ಸವಕ್ಕೆ ಬಜೆಟ್ನಲ್ಲಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿಮಾಡಿಕೊಂಡಿದೆ.
- ಜೆ.ಎನ್.ಗಣೇಶ್, ಶಾಸಕ
ಪ್ರತಿ ವರ್ಷವೂ ನಡೆಯಲಿದೆ ಕುರುಗೋಡು ಉತ್ಸವ
ಕುರುಗೋಡು: ಮೂರು ತಿಂಗಳ ಪರಿಶ್ರಮದ ಫಲವಾಗಿ ಸರ್ಕಾರ ಉತ್ಸವಕ್ಕೆ ಒಪ್ಪಿಗೆ ನೀಡಿ ಒಂದು ಕೋಟಿ ರೂ ಅನುದಾನ ನೀಡಿದೆ ಎಂದು ಶಾಸಕ ಜೆ. ಎನ್ ಗಣೇಶ ಹೇಳಿದರು.
ಪಟ್ಟಣದ ರೈತ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ಶನಿವಾರ ಆಯೋಜಿಸಿದ್ದ ಕುರುಗೋಡು ಉತ್ಸವ ಪೂರ್ವಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಘಸಂಸ್ಥೆ ಪದಾಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮುಖಂಡರು ಉತ್ಸಾಹದಿಂದ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಬೇಕು ಎಂದರು.
ಫೆ. 15 ಮತ್ತು 16 ರಂದು ಎರಡು ದಿನ ನಡೆಯುವ ಉತ್ಸವದಲ್ಲಿ ನಲವತ್ತು ಕಲಾತಂಡ ಭಾಗವಹಿಸಲಿವೆ. ಜತೆಗೆ ತಾಲೂಕಿನ ಕಲಾವಿದರಿಗೆ ಮೊದಲ ಆದ್ಯತೆ ನೀಡುವ ಜತೆಗೆ ವಿವಿಧ ರಂಗದಲ್ಲಿ ಸಾಧನೆಗೈದವರಿಗೆ ಗೌರವಿಸಲಾಗುವುದು ಎಂದರು.
ಪಟ್ಟಣದಲ್ಲಿ ಪ್ರಾಚೀನ ವೈಭವ ಮರುಕಳಿಸುವಂತೆ ಹಲವು ಬಗೆಯ ಅಲಾಂಕರಕ್ಕೆ ಯೋಜನೆ ರೂಪಿಸಲಾಗಿದೆ. ಕ್ರೀಡೆ, ನೃತ್ಯ, ಸಂಗೀತ ಸೇರಿ ಇತರ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದು ಉತ್ಸವಕ್ಕೆ ಬರುವ 30ಸಾವಿರ ಜನರಿಗೆ ಭೂಜನಾ ವ್ಯವಸ್ಥೆ ಮಾಡಲಾಗುವುದು. ಉತ್ಸವ ಯಾವುದೇ ಪಕ್ಷ, ವ್ಯಕ್ತಿ, ಸಮುದಾಯಕ್ಕೆ ಸೀಮಿತವಾಗದೇ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ನರಸಪ್ಪ ತಹಶೀಲ್ದಾರ್, ತಾಲ್ಲೂಕು ಸಿಪಿಐ .ವಿಶ್ವನಾಥ ಹಿರೇಗೌಡರ್, ಪಿಎಸ್ಐ.ಸುಪ್ರಿತ್ ವಿರುಪಾಕ್ಷಿ, ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮತ್ತು ತಾಲ್ಲೂಕು ಮಟ್ಟಡ ಸಂಘಸಂಸ್ಥೆ ಮತ್ತು ಸಾರ್ವಜನಿಕರು ಮುಖಂಡರು ಇದ್ದರು.