ಬಳ್ಳಾರಿ: "ಬಿಸಿಲು ಹೆಚ್ಚಾಗಿದೆ, ಹೆಲ್ಮೆಟ್ ಹಾಕೋಕೆ ಆಗಲ್ಲ" ಎಂಬ ಸಬೂಬು ಹೇಳುವ ಬೈಕ್ ಸವಾರರಿಗೆ ಬಳ್ಳಾರಿ ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಡಳಿತ ಶಾಕ್ ನೀಡಿದೆ. ಬಳ್ಳಾರಿಯಲ್ಲಿ ಇನ್ಮುಂದೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸುಮನ್ ಪನ್ನೇಕರ್ ಎಚ್ಚರಿಸಿದ್ದಾರೆ.
ಬಳ್ಳಾರಿಯ ಎಸ್ಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 'ಹೆಲ್ಮೆಟ್ ಜಾಗೃತಿ ಜಾಥಾ'ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸವಾರರ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಬಿಸಿಲ ನೆಪ... ಸಾವಿನ ಕೌಂಟ್ ಅಪ್!
ಬಳ್ಳಾರಿಯ ಸುಡುವ ಬಿಸಿಲನ್ನೇ ನೆಪ ಮಾಡಿಕೊಂಡು ಜನರು ಹೆಲ್ಮೆಟ್ ಧರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಭೀಕರ ಪರಿಣಾಮದ ಬಗ್ಗೆ ಎಸ್ಪಿ ಅವರು ಬೆಚ್ಚಿಬೀಳಿಸುವ ಅಂಕಿಅAಶಗಳನ್ನು ನೀಡಿದ್ದಾರೆ: ಕಳೆದ 3 ವರ್ಷಗಳಲ್ಲಿ 462 ಬೈಕ್ ಸವಾರರು ಸಾವನಪ್ಪಿದ್ದಾರೆ. ಸಣ್ಣಪುಟ್ಟ ಅಪಘಾತಗಳಲ್ಲೂ ತಲೆಗೆ ಗಂಭೀರ ಪೆಟ್ಟು ಬಿದ್ದು ಸಾವು ಸಂಭವಿಸಿದೆ ಎಂದು ಅವರು ಹೇಳಿದರು.
"ಜನರು ಬಿಸಿಲಿನ ಕಾಲ ಮಾತ್ರವಲ್ಲ, ಯಾವ ಕಾಲದಲ್ಲೂ ಹೆಲ್ಮೆಟ್ ಧರಿಸುತ್ತಿಲ್ಲ. ಇಷ್ಟು ದಿನಗಳ ನಿರಾಸಕ್ತಿ ಸಾಕು, ಇನ್ಮುಂದೆ ಜೀವ ಉಳಿಸಿಕೊಳ್ಳಲು ಹೆಲ್ಮೆಟ್ ಧರಿಸಲೇಬೇಕು." ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದಂಡಕ್ಕಾಗಿ ಅಲ್ಲ, ನಿಮ್ಮ ಜೀವಕ್ಕಾಗಿ: ಡಿಸಿ ನಾಗೇಂದ್ರ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ನಾಗೇಂದ್ರ ಅವರು ಮಾತನಾಡಿ, "ಹೆಲ್ಮೆಟ್ ಕೇವಲ ದಂಡದಿAದ ತಪ್ಪಿಸಿಕೊಳ್ಳಲು ಇರುವ ವಸ್ತುವಲ್ಲ, ಅದು ನಿಮ್ಮ ಪ್ರಾಣ ಉಳಿಸುವ ಕವಚ. ಪ್ರತಿಯೊಬ್ಬ ಸವಾರನೂ ತನ್ನ ಕುಟುಂಬದ ಹಿತದೃಷ್ಟಿಯಿಂದ ಹೆಲ್ಮೆಟ್ ಧರಿಸುವ ಅಭ್ಯಾಸ ಮಾಡಿಕೊಳ್ಳಬೇಕು" ಎಂದು ಕರೆ ನೀಡಿದರು.
ಜಾಗೃತಿ ಮೂಡಿಸಿದ 'ಬೈಕ್ ರೈಡಿಂಗ್' ಅಧಿಕಾರಿಗಳು
ಕೇವಲ ಭಾಷಣಕ್ಕೆ ಸೀಮಿತವಾಗದ ಜಿಲ್ಲಾಧಿಕಾರಿಗಳು, ಎಸ್ಪಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರು ಖುದ್ದು ಬೈಕ್ ಚಲಾಯಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಇದೇ ವೇಳೆ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಅಂಟಿಸಲು ಸಿದ್ಧಪಡಿಸಲಾದ ವಿಶೇಷ ಜಾಗೃತಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.
ನಿಮ್ಮ ಪ್ರಾಣ ನಿಮ್ಮ ಕೈಯಲ್ಲಿದೆ. ಬಳ್ಳಾರಿಯ ಬಿಸಿಲಿಗಿಂತ ನಿಮ್ಮ ಜೀವ ಅಮೂಲ್ಯವಾದುದು. ರಸ್ತೆಗಿಳಿಯುವ ಮುನ್ನ ಹೆಲ್ಮೆಟ್ ಧರಿಸಲು ಮರೆಯಬೇಡಿ!