ಬಳ್ಳಾರಿ: ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ತಮಗೆ ತಿಳಿದು ಬಂದ ಅತ್ಯಂತ ಖಚಿತವಾದ ಮಾಹಿತಿಯ ಮೇರೆಗೆ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆಹಾರ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಜಂಟಿ ದಾಳಿ ನಡೆಸಿ, ಲಕ್ಷಾಂತರ ರೂಪಾಯಿಗಳ ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ||ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.
ಬಳ್ಳಾರಿ ತಾಲ್ಲೂಕಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಸಗೀ ಲೇ-ಔಟ್ ಪಕ್ಕದ ಗುಡ್ಡದ ಅಂಚಿನ ಸಾರ್ವಜನಿಕ ಸ್ಥಳದಲ್ಲಿ, ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ, ಗ್ರಾಮೀಣ ಠಾಣೆಯ ಪೊಲೀಸರು, ಆಹಾರ ನಿರೀಕ್ಷಕ ಪಾಪಣ್ಣನವರೊಂದಿಗೆ ಜಂಟಿ ದಾಳಿ ನಡೆಸಿ, ಅಕ್ರಮ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ಅಂದಾಜು 94 ಸಾವಿರ ರೂ.ಗಳ ಮೌಲ್ಯದ 40.80 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 87/2026, ಕಲಂ 3,7 ಅಗತ್ಯ ವಸ್ತುಗಳ (ಇ.ಸಿ.) ಕಾಯಿದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಳ್ಳಾರಿಯ ಗುಗ್ಗರಹಟ್ಟಿ ನಿವಾಸಿ ಶರಭಯ್ಯ ಎನ್ನುವ ಆರೋಪಿಯ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಎಸ್.ಪಿ. ಡಾ||ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ : ಅಂತೆಯೇ ಬಳ್ಳಾರಿ ಗ್ರಾಮೀಣ ಠಾಣಾ ವ್ಯಾಪ್ತಿಯ ಕೊಳಗಲ್ಲು-ಸಿರುಗುಪ್ಪ ರಸ್ತೆಯ ಮಧ್ಯದಲ್ಲಿರುವ ಲೇ-ಔಟ್ ಒಂದರ ರಸ್ತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಲಾಗಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ, ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು, ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಮಿಂಚಿನ ದಾಳಿ ನಡೆಸಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿಯವರು ಹೇಳಿದ್ದಾರೆ.
ಗ್ರಾಮೀಣ ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳು ಅಂದಾಜು 1.90 ಲಕ್ಷ ರೂಪಾಯಿಗಳ ಬೆಲೆಯ 82.80 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಜಪ್ತು ಮಾಡಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಅಪರಾಧ ಸಂಖ್ಯೆ 88/2026 ಕಲಂ 3,7 ಇ.ಸಿ. ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಕೇಸ್ನಲ್ಲಿ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಅಕ್ರಮ ದಂಧೆಗೆ ಬ್ರೇಕ್ ಇಲ್ಲವೆ?: ಬಳ್ಳಾರಿ ನಗರ, ಗ್ರಾಮೀಣ ಹಾಗೂ ಜಿಲ್ಲೆಯಲ್ಲಿ ವಿವಿಧ ತಾಲ್ಲೂಕುಗಳಲ್ಲಿ ಬಡ ಜನರಿಗೆ ದೊರೆಯಬೇಕಾಗಿರುವ ಪಡಿತರ ಅಕ್ಕಿ ಹಾಗೂ ಇತರೆ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಣ ಮಾಡಿ, ಬೇರೆ ಜಿಲ್ಲೆಗಳಿಗೆ, ರಾಜ್ಯಗಳಿಗೆ ಸಾಗಾಟ ನಡೆಸುವ ವ್ಯವಸ್ಥಿತ `ಜಾಲ’ವೊಂದು ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಪೊಲೀಸ್ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಈ ದಂಧೆಗೆ ಕಡಿವಾಣ ಹಾಕಬೇಕಾಗಿದೆ.
ಅಕ್ರಮವಾಗಿ ಪಡಿತರ ಸಾಗಣೆ ಮತ್ತು ಸಂಗ್ರಹಣೆಯ ದಂಧೆ, ನಡೆಸುತ್ತಿರುವವರಿಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಪರೋಕ್ಷ ಬೆಂಬಲ ಇರುವುದಾಗಿ ಹೇಳಲಾಗುತ್ತಿದೆ.
ಜಿಲ್ಲೆಯ ಖಡಕ್ ಎಸ್ಪಿ ಎಂದೇ ಹೆಸರು ಮಾಡಿರುವ ಡಾ||ಸುಮನ್ ಪನ್ನೇಕರ್ ಅವರು, ಈ ಬಗ್ಗೆ ಕೂಡಾ ವಿಚಾರಣೆ-ತನಿಖೆ ನಡೆಸಿ, ಅಕ್ರಮ ಪಡಿತರ ಸಾಗಣೆ ಮಾಡುವವರ ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವವರ ವಿರುದ್ಧ ಕೂಡಾ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತ ನಾಗರೀಕರು ಆಗ್ರಹಪಡಿಸಿದ್ದಾರೆ.