ಬಳ್ಳಾರಿ: ಹಲವರು ಬಡತನ ದಿಂದಲೇ ಬಂದವರು. ಬಡತನ ಇರಬೇಕು ಆದರೆ ಅದಕ್ಕೆ ಇಂತಿಷ್ಟು ಕಾಲ ಅಂತ ಮಿತಿ ಇರುತ್ತೆ. ಆ ಕಾಲ ಕೂಡಿ ಬಂದಾಗ, ಅದಕ್ಕೆ ತಕ್ಕಂತೆ ಬದುಕು, ಶ್ರಮ, ಪ್ರಯತ್ನ ಇವೆಲ್ಲವುಗಳಿಂದ ಕಾಲ ಕೂಡಿ ಬಂದಾಗ ಹಕವರ ಜೀವನದಲ್ಲಿ ಬಡತನ ಬಡತನ ಎಂಬುದು ದೂರವಾಗಿರುವ ಉದಾಹರಣೆಗಳು ಇವೆ. ಆದರೆ, ಇಲ್ಲೊಬ್ಬ ಕಲಾವಿದ. ಈಗ್ಗೆ 65 ವರ್ಷ ಕಳೆದರೂ ಅವರ ಜೀವನದಲ್ಲಿ ಬದಲಾವಣೆಗಳೇ ಕಂಡಿಲ್ಲ. ಈಗಲೂ ಬಾಡಿಗೆ ಮನೆಯಲ್ಲೇ ಜೀವನ ಸಾಗಿಸುತ್ತಾ ತಮ್ಮ ಜೀವನದ ಬದುಕಿನ ಬಂಡಿ ಓಡಿಸುತ್ತಿದ್ದಾರೆ.
ಕಳೆದ ಜೂ.1, 1960 ರಲ್ಲಿ ರಾಮಸಾಗರ ಗ್ರಾಮದಲ್ಲಿ ಜನಿಸಿದ ಚಂದ್ರಶೇಖರ್ ಹೂಗಾರ್ ಅವರು ಅದೇ ಗ್ರಾಮದಲ್ಲಿ ಆಗಿನ ಕಾಲದಲ್ಲಿ 7 ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ ಮನೆಯಲ್ಲಿ ಹಲವು ಸಮಸ್ಯೆಗಳು ಇದ್ದುದರಿಂದ ಶಾಲೆಗೆ ಹೋಗುವುದನ್ನು ಮೊಟಕುಗೊಳಿಸಿ, ತಮ್ಮ ಹೂವು ಮಾರುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬಯಲಾಟದಲ್ಲಿ ಎತ್ತಿದ ಕೈ:
ರಾಮಾಯಣ, ಅಭಿಮನ್ಯು ಕಾಳಗ, ರೇಣುಕಾ ಮಹಾತ್ಮೆ ಸೇರದಿಂತೆ ಹಲವು ಬಯಲಾಟದಲ್ಲಿ ಪಾತ್ರಗಳ ಸಂಭಾಷಣೆಯನ್ನು ನಿರ್ಗಳವಾಗಿ ಹೇಳಿ ಕೊಡುತ್ತಾರೆ.
ಈ ಬಗ್ಗೆ ಈನಮ್ಮ ಕನ್ನಡನಾಡು ಪ್ರತಿನಿಧಿ ಸಂಪರ್ಕಿಸಿ ಸಂದರ್ಶನಕ್ಕಿಳಿದಾಗ, ಜೀವನದ ಬದುಕಿನ ಅನುಭವನದ ಬುತ್ತಿಯನ್ನು ಬಿಚ್ಚಿಟ್ಟರು. ಅವರೇ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ಚಂದ್ರಶೇಖರ ಹೂಗಾರ.
ಬಡತನ ಬಹಳ ಕೆಟ್ಟದ್ದು, ಆಗಿನ ಕಾಲದಲ್ಲಿ ನಾನು 7 ನೇ ತರಗತಿ ಓದಿದ್ದು, ಶಾಲೆಯಲ್ಲಿ ಬಹಳ ಬುದ್ಧಿವಂತನಿದ್ದೆ. ಆದರೂ ನನಗೂ ಇನ್ನೂ ಓದುವ ಆಸೆ ಆಕಾಂಕ್ಷೆ ಇತ್ತು. ಆದರೆ ಬಡತನ ಎಂಬುದು ಬಂದು ನನ್ನ ಆಸೆಗೆ ತಣ್ಣೀರೆರೆಚಿತು. ಕಿತ್ತು ತಿನ್ನುವ ಬಡತನ ಊಟಕ್ಕೂ ಇಲ್ಲದ ಸ್ಥಿತಿ. ಆ ಸಂದರ್ಭದಲ್ಲಿ ನನಗೆ ಸಪೋರ್ಟ್ ಮಾಡೋರು ಇರಲಿಲ್ಲ. ಪ್ರೋತ್ಸಾಹ ಕೊಡೋರು ಇರಲಿಲ್ಲ. ಆರ್ಥಿಕವಾಗಿ ಕೂಡ ಸಪೋರ್ಟ್ ಮಾಡೋರು ಇರಲಿಲ್ಲ ಎಂದು ಹೇಳುತ್ತಿದ್ದ ಚಂದ್ರಶೇಖರ್ ಹೂಗಾರ ಅವರ ಕಣ್ಣಂಚಿನಲ್ಲಿ ನೀರು ತುಂಬಿತ್ತು.
ಅಲ್ಲದೆ, ನಾನು ಶಾಲೆಗೆ ಹೂಗುವ ಕಾಲದಲ್ಲಿ ನನಗೆ ಒತ್ತಿನ ಸರಿಯಾಗಿ ಊಟ ಸಹ ಇರಲಿಲ್ಲ ಎಂದು ಹೇಳುತ್ತಿದ್ದಂತೆಯೇ ಅವರನ್ನು ದುಃಖ ಆವರಿಸಿ ಮಾತುಗಳು ತೊದಲಾದವು.
ನನಗೆ ಮೊದಲಿನಿಂದಲೂ ಬಯಲಾಟದಲ್ಲಿ ಬಹಳ ಹುಚ್ಚು. ಹಾಗಾಗಿ 1990 ರಲ್ಲಿ ರಾಮಾಯಣದಲ್ಲಿ ಆಂಜನೇಯನ ಪಾತ್ರ, ರಕ್ತರಾತ್ರಿ ನಾಟಕದಲ್ಲಿ ಭೀಮನ ಪಾತ್ರ, ಅಭಿಮನ್ಯು ಕಾಳಗದಲ್ಲಿ ಭೀಮನ ಪಾತ್ರ, ಗಿರಿಜ ಕಲ್ಯಾಣದಲ್ಲಿ ನಾರದ ಪಾತ್ರ, ಅಭಿಮನ್ಯು ಕಾಳಗದಲ್ಲಿ ಧರ್ಮರಾಯನ ಪಾತ್ರ ಸೇರಿದಂತೆ ಹಲವು ಪಾತ್ರಗಳನ್ನು ಅಭಿನಯಿಸುವ ಮೂಲಕ ಬಯಲಾಟ ಸಾರಥಿ ಪಾತ್ರವನ್ನು ಮಾಡಿದ್ದೇನೆ. ಕಳೆದ 2006 ರಿಂದ ಬಯಲಾಟಗಳ ಕಥಾ ನಾಯಕನಾಗಿ ಈಗ ಕಾರ್ಯನಿರ್ವಹಿಸುತ್ತಿದ್ದೇನೆ. ಬೇರೆ ಊರುಗಳಲ್ಲಿ ಹೋಗಿ ಬಯಲಾಟ ತರಬೇತಿ ನೀಡುವ ಸಂದರ್ಭದಲ್ಲಿ ಒಂದೆರೆಡು ತಿಂಗಳಗಳ ಕಾಲ ಅಲ್ಲೇ ವಾಸ ಮಾಡಿ ಕಥಾನಾಯಕನಾಗಿ ಸೇವೆ ಸಲ್ಲಿಸಿ ಅವರು ಕೊಟ್ಟ ಸಂಭಾವನೆಯಲ್ಲಿ ಜೀವನ ನಡೆಸುತ್ತಿದ್ದೇನೆ. ಇದು ಒಂದು ವರ್ಷದಲ್ಲಿ 6 ತಿಂಗಳ ಸೀಸನ್ ಅಷ್ಟೇ. ಉಳಿದ 6 ತಿಂಗಳು ಮತ್ತು ಹೂವು ಮಾರಾಟ ಮಾಡಿ ಜೀವ ನಡೆಸಬೇಕು ಎಂದು ಚಂದ್ರಶೇಖರ್ ಹೂಗಾರ ಹೇಳಿದರು.
ನನ್ನ ಹೆಂಡತಿ ತೀರಿಹೋಗಿದ್ದಾರೆ. ನನಗಿದ್ದ ಐದು ಗಂಡು ಮಕ್ಕಳು ತೀರಿಹೋಗಿದ್ದು, ಈಗಿರುವ ಒಬ್ಬ ಮಗಳು ಮಾತ್ರ. ಮಗಳನ್ನು ವಿವಾಹ ಮಾಡಿಕೊಟ್ಟಿದ್ದೇನೆ. ಈಗ ನಾನು ಮಾತ್ರ ರಾಮಸಾಗರದಲ್ಲಿ 1500 ರು. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ನಾನು 7 ನೇತರಗತಿ ವಿದ್ಯಾಭ್ಯಾಸ ಮಾಡಿದರೂ ಸಹ ಹಳೆ ಗನ್ನಡ, ಹೊಸ ಗನ್ನಡವನ್ನು ಓದುತ್ತೇನೆ. ಅಲ್ಲದೆ, ಬಯಲಾಟದಲ್ಲಿರುವ ಸಂಸ್ಕøತ ಭಾಷೆ ಮತ್ತು ಹಳೆ ಗನ್ನಡ ಸಂಭಾಷಣೆ ಇರುವ ಮಾತುಗನ್ನು ಹೇಳಿಕೊಡುತ್ತೇನೆ. ನಾನು ಸಹ ಹಲವು ಬಯಲಾಟ ಪ್ರದರ್ಶನ ಮಾಡಿದ್ದೇನೆ. ಇಷ್ಟೆಲ್ಲ ಮಾಡಿದರೂ ಸಹ ನನಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಈವರೆಗೂ ಮಾಸಾಶನವನ್ನೂ ನೀಡದಿರುವುದು ವಿಪರ್ಯಾಸ. ಮುಂದಿನ ದಿನಗಳಲ್ಲಿ ಇಲಾಖೆ ಮತ್ತು ಸರಕಾರಗಳು, ಸಂಘ- ಸಂಸ್ಥೆಗಳು ನಮ್ಮಂಥ ಬಡ ಕಲಾವಿದರನ್ನು ಗುರುತಿಸಲಿ.
- ಚಂದ್ರಶೇಖರ್ ಹೂಗಾರ,
ಬಯಲಾಟ ಕಲಾವಿದ.