ರಾಷ್ಟ್ರೀಯ ಮಹಿಳಾ ಸೈನ್ಯಕ್ಕೆ ಮಲ್ಲಮ್ಮಾಜಿಯ ಹೆಸರಿಡಿ

ಹುಬ್ಬಳ್ಳಿ ಫೆಬ್ರವರಿ 28: 500 ವರ್ಷಗಳ ಹಿಂದೆಯೇ ಬೆಳವಡಿ ಸಾಮ್ರಾಜ್ಯದಲ್ಲಿ 2 ಸಾವಿರ ಮಹಿಳೆಯರ ಸ್ತ್ರೀ ಸೈನ್ಯ ಕಟ್ಟಿದ್ದ ಬೆಳವಡಿ ಮಲ್ಲಮ್ಮಾಜಿ ಅವರ ಹೆಸರನ್ನ ರಾಷ್ಟ್ರೀಯ ಮಹಿಳಾ ಸೈನ್ಯಕ್ಕೆ ಇಡುವ ಮೂಲಕ ಅಪ್ರತಿಮ ವೀರಾಗ್ರಣಿಯ ಹೆಸರನ್ನು ಚಿರಸ್ಥಾಯಿಗೊಳಿಸಬೇಕು. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹರಿಹರದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮೀಜಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಇಂದು ವೀರಮಾತೆ ಬೆಳವಡಿ ರಾಣಿ ಮಲ್ಲಮ್ಮಾಜಿ 374 ನೇ ವಿಜಯೋತ್ಸವ ದಿನದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಬೆಳವಡಿ ಮಲ್ಲಮ್ಮನ ಭಾವಚಿತ್ರಕ್ಕೆ ಗೌರವಾರ್ಪಣೆಯನ್ನು ಸಲ್ಲಸಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಯಿತು. ಬೆಳವಡಿ ಮಲ್ಲಮ್ಮ ದೇಶದಲ್ಲಿ ಮೊದಲ ಮಹಿಳಾ ಸೈನ್ಯವನ್ನು ರಚಿಸಿ ಅದರ ಮುಂದಾಳತ್ವವನ್ನು ವಹಿಸಿದ್ದರು. ಹಲವಾರು ಯುದ್ದಗಳಲ್ಲಿ ಈ ವೀರಾಗ್ರಣೀಯರ ಸೈನ್ಯವನ್ನು ಮುನ್ನಡೆಸಿದ ಕೀರ್ತಿ ಮಲ್ಲಮ್ಮಾಜಿ ಅವರದ್ದು. ಇಂತಹ ವೀರಾಗ್ರಣೀ ಮಹಿಳೆಯ ಹೆಸರನ್ನು ನಮ್ಮ ರಾಷ್ಟ್ರೀಯ ಮಹಿಳಾ ಸೈನ್ಯಕ್ಕೆ ಇಡುವುದು ಸೂಕ್ತ. ಇದರಿಂದಾಗಿ ನಮ್ಮ ದೇಶದ ಇತಿಹಾಸದಲ್ಲಿ ರೋಚಕ ಅಧ್ಯಾಯಗಳನ್ನು ಬರೆದಂತಹ ಮಹಿಳೆಗೆ ಇನ್ನಷ್ಟು ಮಹತ್ವ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಲಾಗಿದೆ. ಅಲ್ಲದೇ, ಶೀಘ್ರದಲ್ಲೇ ದೆಹಲಿಗೆ ತೆರಳಿ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸುವುದಾಗಿ ವಚನಾನಂದ ಶ್ರೀಗಳು ತಿಳಿಸಿದರು. ಇದೇ ವೇಳೆ, ಬೆಳವಡಿ ರಾಣಿ ಮಲ್ಲಮ್ಮಾಜಿಯ ಪ್ರಾಧಿಕಾರ ರಚಿಸಬೇಕು, ಮಲ್ಲಮ್ಮಾಜಿಯ ಕುರುಹುಗಳು ರಾಕ್‌ ಗಾರ್ಡನ್‌, ರಾಣಿ ಮಲ್ಲಮ್ಮಾಜಿಯ ಸ್ಮಾರಕ ಭವನ ನಿರ್ಮಾಣ ಹಾಗೂ ರಾಣಿ ಮಲ್ಲಮ್ಮಾಜಿ ಹೆಸರಿನಲ್ಲಿ ಒಂದು ಸೈನಿಕ ಶಾಲೆ ಯನ್ನು ರಚಿಸಬೇಕು ಎಂದು ಮನವಿಯನ್ನು ಸಲ್ಲಿಸಿದ್ದಾಗಿ ಹೇಳಿದರು. ಈ ಸಂಧರ್ಭದಲ್ಲಿ ಸಚಿವರಾದ ಶ್ರೀ ಸಿ ಸಿ ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಮೋಹನ ಲಿಂಬಿಕಾಯಿ, ಸೋಮನಗೌಡ ಪಾಟೀಲ, ಚಂದ್ರಶೇಖರ ಪೂಜಾರ, ಮಲ್ಲಿಕಾರ್ಜುನ ಅಗಡಿ ಮುಂತಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top