ಇಂಗ್ಲೆಂಡಿನ ದಂಡಿ ವಿ.ವಿ.ಗೆ ಸಚಿವ ಅಶ್ವತ್ಥನಾರಾಯಣ ಭೇಟಿ

ದಂಡಿ (ಸ್ಕಾಟ್ಲೆಂಡ್): ಜೀವವಿಜ್ಞಾನ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಇಲ್ಲಿನ ದಂಡೀ ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗ ಮತ್ತು ಅತ್ಯಾಧುನಿಕ ಪ್ರಯೋಗಾಲಯಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಭೇಟಿ ನೀಡಿ, ಸಮಗ್ರವಾಗಿ ವೀಕ್ಷಿಸಿದರು.ಈ ಸಂದರ್ಭದಲ್ಲಿ ಸಚಿವರೊಂದಿಗೆ ಮಾತನಾಡಿದ ವಿ.ವಿ.ದ ಉನ್ನತಾಧಿಕಾರಿಗಳ ನಿಯೋಗವು, `ನಮ್ಮ ತಂಡವು ಬರುವ ಸೆಪ್ಟೆಂಬರಿನಲ್ಲಿ ಭಾರತಕ್ಕೆ ಭೇಟಿ ನೀಡಲಿದೆ. ಕರ್ನಾಟಕ ಸರಕಾರವು ಆಸಕ್ತಿ ವಹಿಸಿದರೆ ಜೀವವಿಜ್ಞಾನ ಅಧ್ಯಯನಕ್ಕೆ ಸಹಭಾಗಿತ್ವ ಹೊಂದಲು ಒಡಂಬಡಿಕೆಗೆ ಸಿದ್ಧರಿದ್ದೇವೆ. ಇಂತಹ ಕೇಂದ್ರಗಳನ್ನು ರಾಜ್ಯದ ಹಲವು ವಿ.ವಿ.ಗಳಲ್ಲಿ ತೆರೆಯಬಹುದು’ ಎಂದು ತಿಳಿಸಿತು.

ಕರ್ನಾಟಕ ಸರಕಾರವು ಒಡಂಬಡಿಕೆ ಮಾಡಿಕೊಂಡರೆ, ತಮ್ಮ ವಿವಿ ವತಿಯಿಂದ ರಾಜ್ಯದಲ್ಲಿ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು ಸಹಕಾರ ನೀಡಲಾಗುವುದು. ಇದಲ್ಲದೆ, ಜೀವವಿಜ್ಞಾನ ವಿಭಾಗವು ಹೊರಗಿನ ಮಾರುಕಟ್ಟೆಯಲ್ಲಿ ಕೈಗೊಳ್ಳುವ ವಾಣಿಜ್ಯ ಚಟುವಟಿಕೆಗಳ ಮೂಲಕ ಹಣಕಾಸು ಕ್ರೋಡೀಕರಣ ಮಾಡಬಹುದು ಎಂದು ದಂಡಿ ವಿ.ವಿ.ದ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಇದಕ್ಕೆ ಸ್ಪಂದಿಸಿದ ಸಚಿವರು, ಒಡಂಬಡಿಕೆಗೆ ಇರುವ ಸಾಧ್ಯತೆಗಳನ್ನು ಪರಿಶೀಲಿಸಿ, ಮುಂದಿನ ಹೆಜ್ಜೆ ಇಡುವುದಾಗಿ ಅವರಿಗೆ ಹೇಳಿದ್ದಾರೆ.ದಂಡಿ ವಿ.ವಿ.ದಲ್ಲಿ ದುಬಾರಿ ಮತ್ತು ಅತ್ಯಾಧುನಿಕ ಜೀವವಿಜ್ಞಾನ ಸಾಧನ-ಸಲಕರಣೆಗಳಿವೆ. ಇಲ್ಲಿ ಇಮೇಜ್ ಅನಾಲಿಸಿಸ್, ಡೇಟಾ ಕಮ್ಯುನಿಕೇಷನ್, ಸೈನ್ಸ್ ಕಮ್ಯುನಿಕೇಷನ್, ಡೇಟಾ ಸೈನ್ಸ್, ಮಶೀನ್ ಲರ್ನಿಂಗ್ ಕೋರ್ಸುಗಳಿವೆ. ಇದರಿಂದ ಕರ್ನಾಟಕದ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ಹೇರಳ ಅವಕಾಶಗಳು ಸಿಗಲಿವೆ. ಜತೆಗೆ, ನಾವು ಪದವಿ, ಸ್ನಾತಕೋತ್ತರ ಮತ್ತು ಪಿಎಚ್.ಡಿ. ಸಂಶೋಧನಾ ಕ್ರಮಗಳ ವಿನ್ಯಾಸವನ್ನೂ ಅಭಿವೃದ್ಧಿ ಪಡಿಸಿ ಕೊಡಲಿದ್ದೇವೆ’ ಎಂದು ನಿಯೋಗವು ವಿವರಿಸಿದೆ.

ದಂಡಿ ವಿ.ವಿ. ಈಗಾಗಲೇ ಸಿಂಗಪುರ ಮತ್ತು ಚೀನಾದೊಂದಿಗೆ ಇಂತಹ ಸಹಭಾಗಿತ್ವ ಹೊಂದಿದೆ. ಇಲ್ಲಿನ ಬೋಧಕರು ಪ್ರತೀವರ್ಷ ಚೀನಾಗೆ ಹೋಗಿ, ಬೋಧಿಸುತ್ತಿದ್ದಾರೆ. ಎರಡು ವರ್ಷಗಳ ಕಾಲ ಸ್ಥಳೀಯವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು ನಂತರ ಇಂಗ್ಲೆಂಡಿನ ಕ್ಯಾಂಪಸ್ಸಿಗೇ ಕರೆಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.ರಾಜ್ಯ ಸರಕಾರದ ನಿಯೋಗದಲ್ಲಿ ಸಚಿವರ ಜತೆಗೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿವಿ ಕುಲಪತಿ ಡಾ.ಭಾನುಮೂರ್ತಿ, ಉನ್ನತ ಶಿಕ್ಷಣ ಪರಿಷತ್ತಿನ ಗೋಪಾಲಕೃಷ್ಣ ಜೋಶಿ, ಆಡಳಿತಾಧಿಕಾರಿ ತಾಂಡವ ಗೌಡ ಇದ್ದರು.ನಿಯೋಗವು ದಂಡಿಯ ನ್ಯಾಷನಲ್ ಮೂಸಿಯಂ ಗೂ ಭೇಟಿ ನೀಡಿತ್ತು.

ಸಂಸದ ಮಾರ್ಟಿನ್ ಡೇ ಭೇಟಿ

ಸಚಿವ ಅಶ್ವತ್ಥನಾರಾಯಣ ನೇತೃತ್ವದ ರಾಜ್ಯ ನಿಯೋಗವು ಇದೇ ಸಂದರ್ಭದಲ್ಲಿ ಇಂಗ್ಲೆಂಡಿನ ಸಂಸದ ಮಾರ್ಟಿನ್ ಡೇ ಅವರನ್ನು ಎಡಿನ್ ಬರೊದಲ್ಲಿ ಭೇಟಿ ಮಾಡಿ, ಹಲವು ವಿಚಾರಗಳನ್ನು ಚರ್ಚಿಸಿತು. ಈ ಸಂದರ್ಭದಲ್ಲಿ ಡೇ ಅವರು, ಸಚಿವರ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದರು. ಇದರಲ್ಲಿ ಡೇ ಅವರ ಭಾರತೀಯ ಮೂಲದ ಪತ್ನಿಯಾಗಿರುವ ಕೇರಳದ ನಿಧಿನ್ ಚಂದ್ ಕೂಡ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top