ಕೊಪ್ಪಳ: ಕಲ್ಯಾಣ ಕರ್ನಾಟಕದಲ್ಲಿ 1995ರ ನಂತರ ಪ್ರಾರಂಭಗೊಂಡಿರುವ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ವೇತಾನುದಾನಕ್ಕೆ ಅಳವಡಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ,ಕೊಪ್ಪಳ ಜಿಲ್ಲಾ ಘಟಕ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಮಂಗಳವಾರ ದಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಒಕ್ಕೂಟದ ಪದಾಧಿಕಾರಿಗಳು ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಲಭ್ಯಗಳನ್ನು 371ಜೆ ಅಡಿಯಲ್ಲಿ ಒದಗಿಸಬೇಕು. ಈ ಭಾಗದಲ್ಲಿ ಸತತ 15 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಿಗೆ ಶಾಶ್ವತ ನವೀಕರಣ ನೀಡಬೇಕು. 2018ಕ್ಕೂ ಮುಂಚೆ ಪ್ರಾರಂಭವಾದ ಶಾಲೆಗಳಿಗೆ ನವೀಕರಣಕ್ಕಾಗಿ ಹೊಸ ನಿಯಮಗಳನ್ನು ಅಳವಡಿಸಬಾರದು ಎಂದು ಒಕ್ಕೂಟ ಮನವಿ ಸಲ್ಲಿಸಿ ಒತ್ತಾಯಿಸಿದೆ. ಈ ಸಮಯದಲ್ಲಿ ಕಲ್ಯಾಣ ಕರ್ನಾಟಕ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಗೋಡಿ, ಶಿವಕುಮಾರ್ ಕುಕನೂರು, ಹುಲುಗಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ, ಗಂಗಾವತಿ ತಾಲೂಕು ಅಧ್ಯಕ್ಷ ದೇವಾನಂದ ರಾಚನಗೌಡ ಸೇರಿದಂತೆ ಅನೇಕರು ಇದ್ದರು.