ಬೆಂಗಳೂರು: ಇಸ್ರೋ ಮುಖ್ಯಸ್ಥ ಸೋಮನಾಥ್, ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಲೇಖಕಿ ಕೆ. ಷರೀಫಾ, ಗಾಲ್ಫ್ ಆಟಗಾರ್ತಿ ಆದಿತಿ ಅಶೋಕ್ ಸೇರಿದಂತೆ 68 ಮಂದಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಯ್ಕೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 68 ಸಾಧಕರು ಹಾಗೂ ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಸ್ಥೆಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ.
100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು. 13 ಮಹಿಳೆಯರು ಮತ್ತು 54 ಪುರುಷರು ಹಾಗೂ ಒಬ್ಬರು ಮಂಗಳಮುಖಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದವರಿಗೆ ರೂ. 5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕ ವಿತರಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರಿಗಣಿಸಿ ಗೌರವಿಸಲಾಗಿದೆ. ಮಾಧ್ಯಮ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಪತ್ರಿಕಾ ವಿತರಕಾ ಸಮುದಾಯದ ಪ್ರತಿನಿಧಿ, ಮೈಸೂರಿನ ಜವರಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ, ವಿತರಕ ಸಮುದಾಯವನ್ನು, ಈ ಸಮುದಾಯದ ಕಾರ್ಯಕ್ಷಮತೆ ಮತ್ತು ಶ್ರಮವನ್ನು ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿ ಗುರುತಿಸಿ, ಗೌರವಿಸಿದೆ ಎಂದರು.
ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆ, ಯಕ್ಷಗಾನದಲ್ಲಿ ಕೆ.ಲೀಲಾವತಿ ಬೈಪಾಡಿತ್ತಾಯ, ಸಿನಿಮಾ ಕ್ಷೇತ್ರದಲ್ಲಿ ಡಿಂಗ್ರಿ ನಾಗರಾಜ್ ಹಾಗೂ ಬ್ಯಾಂಕ್ ಜನಾರ್ಧನ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸಿ.ನಾಗಣ್ಣ, ಸುಬ್ಬು ಹೊಲೆಯಾರ್, ಪತ್ರಿಕೋದ್ಯಮದಲ್ಲಿ ದಿನೇಶ್ ಅಮೀನ್ಮಟ್ಟು, ಮಾಯಾ ಶರ್ಮ ಸೇರಿದಂತೆ 68 ಸಾಧಕರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.
ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ದಾನ ನೀಡಿದ್ದ ತಾಲ್ಲೂಕಿನ ಕುಣಿಕೇರಿ ಗ್ರಾಮದ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಅರ್ಜಿ ಹಾಕದಿದ್ದರೂ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಶಿವಮೊಗ್ಗದ ಕರ್ನಾಟಕ ಸಂಘ, ಬೆಂಗಳೂರಿನ ಮಿಥಿಕ್ ಸೊಸೈಟಿ, ದಾವಣಗೆರೆಯ ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ ಸೇರಿದಂತೆ ಹತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆಯಾಗಿದೆ.
ಪ್ರಶಸ್ತಿ ಪಟ್ಟಿ:
ಸಂಗೀತ/ನೃತ್ಯ ಕ್ಷೇತ್ರ: ಡಾ. ನಯನ ಎಸ್ ಮೋರೆ, ನೀಲಾ ಎಂ ಕೊಡ್ಲಿ, ಶಬ್ಬೀರ್ ಅಹಮದ್, ಡಾ. ಎಸ್ ಬಾಳೇಶ ಭಜ್ರಂತಿ ಅವರಿಗೆ ಪ್ರಶಸ್ತಿ ಲಭಿಸಿದೆ.
ಚಲನಚಿತ್ರ ಕ್ಷೇತ್ರ: ಡಿಂಗ್ರಿ ನಾಗರಾಜ, ಬಿ. ಜನಾರ್ದನ (ಬ್ಯಾಂಕ್ ಜನಾರ್ದನ).
ರಂಗಭೂಮಿ ಕ್ಷೇತ್ರ: ಎಜಿ ಚಿದಂಬರ ರಾವ್ ಜಂಬೆ, ಪಿ ಗಂಗಾಧರ ಸ್ವಾಮಿ, ಹೆಚ್ಬಿ ಸರೋಜಮ್ಮ, ತಯ್ಯಬಖಾನ್ ಎಂ ಇನಾಮದಾರ, ವಿಶ್ವನಾಥ್ ವಂಶಾಕೃತ ಮಠ, ಪಿ ತಿಪ್ಪೇಸ್ವಾಮಿ.
ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ ಕ್ಷೇತ್ರ: ಟಿ ಶಿವಶಂಕರ್, ಕಾಳಪ್ಪ ವಿಶ್ವಕರ್ಮ, ಮಾರ್ಥಾ ಜಾಕಿಮೋವಿಚ್ ಮತ್ತು ಪಿ ಗೌರಯ್ಯ.
ಯಕ್ಷಗಾನ/ಬಯಲಾಟ ಕ್ಷೇತ್ರ: ಅರ್ಗೋಡು ಮೋಹನದಾಸ್ ಶೆಣೈ, ಕೆ ಲೀಲಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳಿಕ್ಯಾತರ, ದಳವಾಯಿ ಸಿದ್ದಪ್ಪ (ಹಂದಿಜೋಗಿ).
ಜಾನಪದ ಕ್ಷೇತ್ರ: ಹುಸೇನಬಿ ಬುಡೆನ್ ಸಾಬ್ ಸಿದ್ದಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಹೆಚ್ಕೆ ಕಾರಮಂಚಪ್ಪ, ಶಂಭು ಬಳಿಗಾರ, ವಿಭೂತಿ ಗುಂಡಪ್ಪ, ಚೌಡಮ್ಮ.
ಸಮಾಜಸೇವೆ ಕ್ಷೇತ್ರ: ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ರೂಪಾ ನಾಯಕ್, ನಿಜಗುಣಾನಂದ ಮಹಾಸ್ವಾಮಿಗಳು, ನಾಗರಾಜು ಜಿ.
ಆಡಳಿತ ಕ್ಷೇತ್ರ: ಜಿವಿ ಬಲರಾಮ್
ವೈದ್ಯಕೀಯ ಕ್ಷೇತ್ರ: ಡಾ. ಸಿ ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ.
ಸಾಹಿತ್ಯ ಕ್ಷೇತ್ರ: ಪ್ರೊ. ಸಿ ನಾಗಣ್ಣ, ಸುಬ್ಬು ಹೊಲೆಯಾರ್ (ಹೆಚ್ಕೆ ಸುಬ್ಬಯ್ಯ), ಸತೀಶ್ ಕುಲಕರ್ಣಿ, ಲಕ್ಷ್ಮಿಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ ಷರೀಫಾ.
ಶಿಕ್ಷಣ ಕ್ಷೇತ್ರ: ರಾಮಪ್ಪ (ರಾಮಣ್ಣ) ಹವಳೆ, ಕೆ ಚಂದ್ರಶೇಖರ್, ಕೆಟಿ ಚಂದು.
ಕ್ರೀಡಾ ಕ್ಷೇತ್ರ: ದಿವ್ಯ ಟಿಎಸ್, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ.
ನ್ಯಾಯಾಂಗ ಕ್ಷೇತ್ರ: ವಿ ಗೋಪಾಲಗೌಡ.
ಕೃಷಿ-ಪರಿಸರ ಕ್ಷೇತ್ರ: ಸೋಮನಾಥರೆಡ್ಡಿ ಪೂರ್ಮಾ, ದ್ಯಾವನಗೌಡ ಟಿ. ಪಾಟೀಲ, ಶಿವರೆಡ್ಡಿ ಹನುಮರೆಡ್ಡಿ ವಾಸನ.
ಸಂಕೀರ್ಣ ಕ್ಷೇತ್ರ: ಎಎಂ ಮದರಿ, ಹಾಜಿ ಅಬ್ದುಲ್ಲಾ ಪರ್ಕಳ, ಮಿಮಿಕ್ರಿ ದಯಾನಂದ್, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕೊಡನ ಪೂವಯ್ಯ ಕಾರ್ಯಪ್ಪ.
ಮಾಧ್ಯಮ ಕ್ಷೇತ್ರ: ದಿನೇಶ ಅಮೀನ್ಮಟ್ಟು, ಜವರಪ್ಪ, ಮಾಯಾ ಶರ್ಮ, ರಫೀ ಭಂಡಾರ.
ವಿಜ್ಞಾನ/ ತಂತ್ರಜ್ಞಾನ ಕ್ಷೇತ್ರ: ಎಸ್. ಸೋಮನಾಥ್ ಶ್ರೀಧರ್ ಪನಿಕರ್, ಪ್ರೊ. ಗೋಪಾಲನ್ ಜಗದೀಶ್
ಹೊರನಾಡು/ ಹೊರದೇಶ ಕ್ಷೇತ್ರ: ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ.
ಸ್ವಾತಂತ್ರ್ಯ ಹೋರಾಟಗಾರ ಕ್ಷೇತ್ರ: ಪುಟ್ಟಸ್ವಾಮಿ ಗೌಡ.
10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ:
1. ಕರ್ನಾಟಕ ಸಂಘ
2. ಬಿಎನ್ ಶ್ರೀರಾಮ ಪುಸ್ತಕ ಪ್ರಕಾಶನ
3. ಮಿಥಿಕ್ ಸೊಸೈಟಿ
4. ಕನಾಟಕ ಸಾಹಿತ್ಯ ಸಂಘ
5. ಮೌಲಾನಾ ಅಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ(ರಿ)
6. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ
7. ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ
8. ಚಿಣ್ಣರ ಬಿಂಬ
9. ಮಾರುತಿ ಜನಸೇವಾ ಸಂಘ
10. ವಿದ್ಯಾದಾನ ಸಮಿತಿ