5 ಪ್ಲಾಸ್ಟಿಕ್ ಮುಕ್ತ ನಗರಗಳ ಪೈಕಿ 2 ನಗರದ ಹೆಸರು ಘೋಷಿಸಿದ ಈಶ್ವರ ಖಂಡ್ರೆ

ಕಲ್ಬುರ್ಗಿ : ವಿಶ್ವ ಪರಿಸರ ದಿನದಂದು 5 ನಗರ ಅಥವಾ ಪಟ್ಟಣವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡುವುದಾಗಿ ಘೋಷಿಸಿದ್ದ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಇಂದು ಆ ಐದು ನಗರಗಳ ಪೈಕಿ 2 ನಗರಗಳ ಹೆಸರು ಘೋಷಣೆ ಮಾಡಿದ್ದಾರೆ. 

ಕಲ್ಬುರ್ಗಿಯ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಜೂ.5ರಂದು ಘೋಷಿಸಿದಂತೆ, ಈ ವರ್ಷ 5 ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ, ಪಟ್ಟಣ ಮಾಡುವ ಸಂಕಲ್ಪ ಮಾಡಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕದ 2 ನಗರಗಳೂ ಸೇರಿವೆ ಎಂದು ತಿಳಿಸಿದರು. ನಾನಕ್ ಝೀರಾ, ಬಂದೇ ನವಾಜ್ ದರ್ಗಾ, ಝರಣಿ ನರಸಿಂಹ ದೇವಾಲಯ, ಸಂತ ಪಾಲರ ಮೆಥಾಡಿಸ್ಟ್ ಚರ್ಚ್ ಇರುವ ಸರ್ವ ಜನಾಂಗದ ಶಾಂತಿಯ ತೋಟವಾದ ಬೀದರ್ ನಗರ,  ಐತಿಹಾಸಿಕ ನಗರಿ ಕಲ್ಬುರ್ಗಿಯನ್ನು ಪ್ರಥಮ ಹಂತದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲಾಗುವುದು. ಹಂತ ಹಂತವಾಗಿ ಉಳಿದ ನಗರಗಳನ್ನೂ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲಾಗುವುದು ಎಂದರು. ದೊಡ್ಡ ಸವಾಲು: ಈ ಪ್ಲಾಸ್ಟಿಕ್ ನೀರಲ್ಲಿ ಕರಗುವುದಿಲ್ಲ. ಮಣ್ಣಲ್ಲಿ ಮಣ್ಣಾಗುವುದಿಲ್ಲ. ಜೈವಿಕವಾಗಿ ವಿಘಟನೆಯೂ ಆಗುವುದಿಲ್ಲ. ಭೂಮಿಯ ಒಡಲು ಸೇರಿ ವಿಷವಾಗುತ್ತಿದೆ. ಕಸದ ರಾಶಿಯಾಗಿ ದೊಡ್ಡ ಸಮಸ್ಯೆ ತರುತ್ತಿದೆ.

ಏಕ ಬಳಕೆ ಪ್ಲಾಸ್ಟಿಕ್ ನಲ್ಲಿ ಮನೆಯ ಕಸ ಎಲ್ಲ ಗಂಟು ಕಟ್ಟಿ ಜನ ಹೊರಗೆ ಎಸೆಯುತ್ತಿದ್ದಾರೆ. ಇದರಿಂದ ಮಳೆ ನೀರು ಚರಂಡಿಗಳು ಕಟ್ಟಿಕೊಂಡು ರಸ್ತೆಯಲ್ಲಿ ಪ್ರವಾಹ ಸ್ಥಿತಿ ಉಂಟಾಗುತ್ತದೆ. ಪ್ಲಾಸ್ಟಿಕ್ ಕವರ್ ಗಳಲ್ಲಿ ಉಳಿದ ಅನ್ನ, ಕತ್ತರಿಸಿದ ತರಕಾರಿ ತುಂಬಿ ಎಸೆಯುವ ಕಾರಣ, ಅದನ್ನು ತಿನ್ನುವ ದನಕರುಗಳ ಹೊಟ್ಟೆಗೆ ಪ್ಲಾಸ್ಟಿಕ್ ಸೇರಿ. ಸಾವಿಗೀಡಾಗುತ್ತಿವೆ. ಪ್ಲಾಸ್ಟಿಕ್   ಕಸದ ರಾಶಿಗೆ ಬೆಂಕಿ ಹಚ್ಚುವ ದುರಭ್ಯಾಸವೂ ಕೆಲವರಿಗಿದೆ. ಇದರಿಂದ ವಿಷಕಾರಿ ಹೊಗೆ ಪರಿಸರ ಸೇರಿ ಆಸ್ತಮಾ, ಉಸಿರಾಟದ ಸಮಸ್ಯೆ ಉಂಟಾಗುತ್ತಿದೆ. ಈ ತೀವ್ರತೆ ಅರಿತು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಕಲ್ಪನೆಯನ್ನು ಸಾಕಾರ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದರು.

ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರಗಳಲ್ಲಿ ಪ್ಲಾಸ್ಟಿಕ್ ಉತ್ಪಾದನೆ, ಬಳಕೆ, ಮಾರಾಟ, ದಾಸ್ತಾನು ಆಗದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಡಳಿತದ ಸಹಕಾರದೊಂದಿಗೆ ಏಕ ಬಳಕೆ ಪ್ಲಾಸ್ಟಿಕ್ ಗೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು. ಹಸಿರು ವಲಯ ಕ್ರಾಂತಿಗೆ ಒತ್ತು: ಪ್ರಸಕ್ತ ವರ್ಷ 5 ಕೋಟಿ ಸಸಿ ನೆಟ್ಟು ಪೋಷಿಸುವ ಮೂಲಕ ರಾಜ್ಯದಲ್ಲಿ ಹಸಿರು ವ್ಯಾಪ್ತಿಯ ಕ್ರಾಂತಿ ಮಾಡಲು ನಿರ್ಧರಿಸಿರುವ ಅರಣ್ಯ ಇಲಾಖೆ, ಜುಲೈ 1ರಿಂದ ಆರಂಭವಾದ ವನಮಹೋತ್ಸವದ ಪ್ರಥಮ 6 ದಿನಗಳಲ್ಲಿ 68 ಲಕ್ಷ ಸಸಿಗಳನ್ನು ನೆಟ್ಟಿದೆ ಎಂದು ತಿಳಿಸಿದರು. ವನಮಹೋತ್ಸವದ ಸಂದರ್ಭದಲ್ಲಿ ನೆಟ್ಟಿರುವ ಎಲ್ಲ ಸಸಿಗಳೂ ಬೇರೂರಿ ಬೆಳೆದು ಹೆಮ್ಮರವಾಗುವುದನ್ನು ಖಾತ್ರಿಪಡಿಸಿಕೊಳ್ಳುವ ದೊಡ್ಡ ಸವಾಲು ಇದ್ದು, ಜಿಯೋ ಟ್ಯಾಗ್, ಆಡಿಟ್ ಮೂಲಕ ಇದನ್ನು ವ್ಯವಸ್ಥಿತವಾಗಿ ನಿಭಾಯಿಸಲಾಗುವುದು.

ವರ್ಷವಿಡೀ ಗಿಡ ನೆಡುವ ಅಭಿಯಾನ ಮುಂದುವರಿಸಲಾಗುವುದು ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ ವಿಜಯನಗರ ಹೊರತು ಪಡಿಸಿ ಉಳಿದ 5 ಜಿಲ್ಲೆಗಳಲ್ಲಿ ಅರಣ್ಯ ವ್ಯಾಪ್ತಿ ಶೇ.10ಕ್ಕಿ ಕಡಿಮೆ ಇದೆ. ಇಲ್ಲಿ ಹಸಿರು ವಲಯ ವ್ಯಾಪ್ತಿ ಹೆಚ್ಚಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಎತ್ತರದ ಗಿಡಗಳನ್ನು ಹಚ್ಚಿ, ಹಸಿರೀಕರಣ ಹೆಚ್ಚಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ತಿಪ್ಪಣ್ಣ ಕಮ್ಮಕ್ನೂರ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ್ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top