ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರನ್ನು ತಡೆದು ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧಿಸಿದ್ದು, ಒಟ್ಟು 8 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಳೆಬಾತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜುನಾಥ ಎಂಬುವರು ಕುಟುಂಬ ಸಮೇತರಾಗಿ ಮಲೇಬೆನ್ನೂರಿನಿಂದ ದಾವಣಗೆರೆಗೆ ಕಾರಿನಲ್ಲಿ ಬರುತ್ತಿದ್ದರು. ಹಳೆಬಾತಿ ಗ್ರಾಮ ಎನ್.ಹೆಚ್.48 ರಸ್ತೆಯಲ್ಲಿ 04 ಜನ ಒಂದು ಕಾರಿನಲ್ಲಿ ಬಂದು ಕಾರನ್ನು ಅಡ್ಡಹಾಕಿ ಬಂಗಾರದ ಆಭರಣ ಮತ್ತು ಎರಡು ಮೊಬೈಲ್ ವ್ಯಾನಿಟಿ ಬ್ಯಾಗ್ ಮತ್ತು ಪರ್ಸ ಕಿತ್ತುಕೊಂಡು ಹೋಗಿದ್ದಾರೆ ಎಂದು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇನ್ನೊಂದು ಪ್ರಕರಣದಲ್ಲಿ ಹರಿಹರದ ಪಕ್ಕೀರೇಶ್ ನಾಗೆನಹಳ್ಳಿ ಅವರಿಗೆ ಚಾಕು, ರಾಡು ತೋರಿಸಿ ಮೊಬೈಲ್ ಮತ್ತು 5 ಸಾವಿರ ನಗದು ಕಿತ್ತುಕೊಂಡು ಹಾಲುವರ್ತಿ ಬಳಿಯ ಹೈವೇ ಮೇಲೆ ಬಿಟ್ಟು ಹೋಗಿದ್ದರು. ಈ ಪ್ರಕರಣಗಳ ಪತ್ತೆಗಾಗಿ ಡಿವೈಎಸ್ ಪಿ ಕನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಲಿಂಗನಗೌಡ ನೆಗಳೂರು ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಎರಡು ಪ್ರಕರಣಗಳಿಂದ ಒಟ್ಟು 02 ಸುಲಿಗೆ, 04 ಮನೆ ಕಳ್ಳತನ, 01 ಸಾಮಾನ್ಯ ಕಳ್ಳತನ ಒಟ್ಟು 07 ಪ್ರಕರಣಗಳಲ್ಲಿ ಸುಮಾರು 08 ಲಕ್ಷ ಬೆಲೆಯ ಒಟ್ಟು ಸುಮಾರು 200 ಗ್ರಾಂ ತೂಕದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹಾಗೂ 2 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿತರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.