ಕೂಡ್ಲಿಗಿ : ಶಬರಿಮಲೈ ಕಡೆಗೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕೂಡ್ಲಿಗಿ ಸಮೀಪದ ಚಿಕ್ಕ ಜೋಗಿಹಳ್ಳಿ ಕ್ರಾಸ್ ಬಳಿಯ ಹೈವೇಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿದ್ದ ಇಬ್ಬರು ಅಯ್ಯಪ್ಪ ಮಾಲಾ ಧಾರಿಗಳು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದು ಇನ್ನುಳಿದ ಮೂವರು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಇಂದು ನಡೆದಿದೆ.
ಗದಗನ ಯುವರಾಜ ಕಾಶಪ್ಪ ಹೂಗಾರ್ (22) ಹಾಗೂ ಗದಗ ಜಿಲ್ಲೆ ಲಕ್ಕುಂಡಿಯ ಚನ್ನವೀರಗೌಡ ಹೊಳಿಯಪ್ಪ ಪಾಟೀಲ್ (32) ಇಂದು ನಡೆದ ಕಾರು ಅಪಘಾತದ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನುಳಿದ ವೀರಣ್ಣ ಸಂಗಳದ್ ಮಂಜುನಾಥ ತಳವಾರ ಹಾಗೂ ಕಾರಿನ ಚಾಲಕ ಚಿದಂಬರ ಕುಲಕರ್ಣಿ ಗಾಯಳುಗಳಾಗಿದ್ದು ಇವರನ್ನು ಜಗಳೂರು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
![](https://kannadanadunews.in/wp-content/uploads/2024/01/WhatsApp-Image-2024-01-09-at-1.05.34-PM-768x1024.jpeg)
ಗದಗ ಕಡೆಯಿಂದ ಶಿಫ್ಟ್ ಡಿಸೈರ್ ಕಾರಿನಲ್ಲಿ ಐವರು ಮಾಲಾಧಾರಿಗಳು ಶಬರಿಮಲೈಗೆ ಹೋಗುತ್ತಿರುವಾಗ್ ಕೂಡ್ಲಿಗಿ ತಾಲೂಕಿನ ಚಿಕ್ಕ ಜೋಗಿಹಳ್ಳಿ ತಾಂಡಾ ಕ್ರಾಸ್ ನ ಒಂಕಾರ ನಾಯ್ಕ ಅವರ ತೋಟದ ಸಮೀಪದ ಹೈವೇಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಹೊಸಹಳ್ಳಿ ಪೊಲೀಸರು ಹಾಗೂ ಹೈವೇ ಪೊಲೀಸ್ ರು ಕಾರಿನಲ್ಲಿದ್ದ ಐವರು ಗಾಯಳುಗಳನ್ನು ಜಗಳೂರು ಆಸ್ಪತ್ರೆಗೆ ಸಾಗಿಸುವಾಗ ತೀವ್ರಗಾಯಗಳಾಗಿದ್ದ ಯುವರಾಜ ಹಾಗೂ ಚನ್ನವೀರಗೌಡ ಮಾರ್ಗ ಮದ್ಯೆ ಮೃತಪಟ್ಟಿದ್ದು, ಇನ್ನುಳಿದ ಮೂವರನ್ನು ಜಗಳೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ತೆರಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.