ಬೆಂಗಳೂರು: ಮುಂಬರುವ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಅವಧಿ ವಿಸ್ತರಿಸಲು ಬಿಜೆಪಿ ನಿಯೋಗ ಮನವಿ ಸಲ್ಲಿಸಿದೆ.
ಈ ಚುನಾವಣೆಗೆ ಸಂಬಂಧಿಸಿ ಮತದಾರರ ನೋಂದಣಿ ಅವಧಿಯನ್ನು ಸೆಪ್ಟೆಂಬರ್ 30ರಿಂದ ನವೆಂಬರ್ 6ರವರೆಗೆ ನಿಗದಿಪಡಿಸಲಾಗಿತ್ತು. ಅದನ್ನು ಮತ್ತೊಂದು ತಿಂಗಳು ಅಂದರೆ ಡಿಸೆಂಬರ್ 6ರವರೆಗೆ ವಿಸ್ತರಿಸಬೇಕೆಂದು ಬಿಜೆಪಿ ಬೆಂಗಳೂರು ಘಟಕದ ವತಿಯಿಂದ ವಿನಂತಿಸಲಾಗಿದೆ. ಈ ಸಂಬಂಧ ಇಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
![](https://kannadanadunews.in/wp-content/uploads/2023/11/WhatsApp-Image-2023-11-04-at-15.15.13_fd899a3a-1024x683.jpg)
ಮಾಜಿ ಉಪ ಮುಖ್ಯಮಂತ್ರಿ ಡಾ|| ಸಿ.ಎನ್.ಅಶ್ವತ್ಥ್ಥನಾರಾಯಣ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರ ನಿಯೋಗವು ಈ ಮನವಿ ಸಲ್ಲಿಸಿತು.
ಬೆಂಗಳೂರು ನಗರವೊಂದರಲ್ಲೇ 50 ಲಕ್ಷ ಮತದಾರರಿದ್ದಾರೆ. ಅವರ ಮತದಾನದ ಹಕ್ಕನ್ನು ದೊರಕಿಸಲು ಅವರೆಲ್ಲರನ್ನು ಈ ಪ್ರಕ್ರಿಯೆಯಲ್ಲಿ ನೋಂದಣಿ ಮಾಡಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ಪೂರಕವಾಗಿದೆ. ನಿಗದಿತ ಅವಧಿಯಲ್ಲಿ ಗಣೇಶ ಚತುರ್ಥಿ ಮತ್ತು ದಸರಾ ಹಬ್ಬದ ಕಾರಣಕ್ಕೆ ಸಾಲು ಸಾಲು ರಜೆಗಳಿದ್ದವು. ಶಾಲಾ ಕಾಲೇಜುಗಳಿಗೆ ದಸರಾ ರಜೆ ಕೊಡಲಾಗಿತ್ತು. ಈ ಸಂದರ್ಭದಲ್ಲಿ ಅನೇಕರು ಪರಸ್ಥಳಗಳಿಗೆ ಮತ್ತು ನೋಂದಣಿ ಮಾಡಿಸಬೇಕಾದ ಕಾರ್ಯಕರ್ತರು ಹಬ್ಬದ ಸಲುವಾಗಿ ತೊಡಗಿಸಿಕೊಂಡಿದ್ದರು. ಇದರಿಂದ ನೋಂದಣಿ ಪ್ರಕ್ರಿಯೆಗೆ ತೊಡಕಾಗಿದೆ ಎಂದು ಗಮನ ಸೆಳೆಯಲಾಗಿದೆ.
![](https://kannadanadunews.in/wp-content/uploads/2023/11/WhatsApp-Image-2023-11-04-at-15.15.13_331fcc04-1024x683.jpg)
ಇದೀಗ ಗಡುವು ಮುಗಿಯುತ್ತಿದ್ದು, ಅನೇಕರು ಇನ್ನೂ ಪಟ್ಟಿಯಿಂದ ಹೊರಗಿದ್ದಾರೆ. ಇದರಿಂದ ವಿದ್ಯಾವಂತ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಮತದಾನ ಮಾಡುವುದು ಅತ್ಯಂತ ಮಹತ್ವದ ಜವಾಬ್ದಾರಿಯಾಗಿದೆ. ಈ ಕಾರಣಕ್ಕಾಗಿ ನಿಗದಿತ ದಿನಾಂಕವನ್ನು ಮತ್ತೊಂದು ತಿಂಗಳು ವಿಸ್ತರಿಸಲು ನಿಯೋಗ ಮನವಿ ಮಾಡಿತು.