ಕಲುಷಿತ ನೀರಿನ ಸಮಸ್ಯೆ; ಮುಚ್ಚುವ ಭೀತಿಯಲ್ಲಿ ಬಳ್ಳಾರಿ ಜೀನ್ಸ್ ಡೈಯಿಂಗ್ ಘಟಕಗಳು

Kannada Nadu
ಕಲುಷಿತ ನೀರಿನ ಸಮಸ್ಯೆ; ಮುಚ್ಚುವ ಭೀತಿಯಲ್ಲಿ ಬಳ್ಳಾರಿ ಜೀನ್ಸ್ ಡೈಯಿಂಗ್ ಘಟಕಗಳು

ಬಳ್ಳಾರಿ: ಬಾಂಗ್ಲಾದೇಶದ ಅರಾಜಕ ಪರಿಸ್ಥಿತಿಯಿಂದ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಲಾಭವಾಗುವ ಆಶಾದಾಯಕ ವಾತಾವರಣ ಸೃಷ್ಟಿಯಾಗಿತ್ತು. ಆದರೇ ಡೈಯಿಂಗ್ ಘಟಕಗಳಿಂದ ಬರುವ ಕಲುಷಿತ ನೀರಿನ ಸಂಸ್ಕರಣೆ ಸಮಸ್ಯೆಯಿಂದ ಇದೀಗ ಕಳೆದ ಕೆಲವು ದಿನಗಳಿಂದ ಜೀನ್ಸ್ ಉದ್ಯಮ ಒಂದು ರೀತಿಯಲ್ಲಿ ಸ್ತಬ್ಧಗೊಂಡಿದೆ.

ಬದಲಾದ ಬಾಂಗ್ಲಾದೇಶದ ಪರಿಸ್ಥಿಯ ಲಾಭವನ್ನು ಬಳ್ಳಾರಿ ಜೀನ್ಸ್ ಉದ್ಯಮ ತನ್ನದಾಗಿಸಿಕೊಳ್ಳುವ ನಿರೀಕ್ಷೆಯಿತ್ತು. ಉತ್ತಮ ಗುಣಮಟ್ಟದ ಜೀನ್ಸ್ ಉತ್ಪನ್ನಗಳನ್ನು ರಫ್ತು ಮಾಡಿ ಬಳ್ಳಾರಿ ಜೀನ್ಸ್ ಉದ್ಯಮವು ಪುಟಿದೇಳುತ್ತದೆ ಎಂದುಕೊಂಡಿದ್ದರ ನಡುವೆ, ಜೀನ್ಸ್ ಉದ್ಯಮದ ಅವಿಭಾಜ್ಯ ಅಂಗವಾಗಿರುವ ಡೈಯಿಂಗ್ (ಬಟ್ಟೆಗಳನ್ನು ತೊಳೆದು ಬಣ್ಣ ಹಾಕುವ) ಘಟಕಗಳ ಕಲುಷಿತ ನೀರಿನ ಸಮಸ್ಯೆ ತಲೆ ನೋವಾಗಿ ಪರಿಣಮಿಸಿದೆ.
ಈ ಸಮಸ್ಯೆಯಿಂದ ಡೈಯಿಂಗ್ ಘಟಕಗಳು ಕಳೆದ ಹತ್ತು ದಿನಗಳಿಂದ ಸ್ತಬ್ಧಗೊಂಡಿದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ಘಟಕಗಳನ್ನು ಬಂದ್ ಮಾಡಬೇಕಾದ ಆತಂಕದಲ್ಲಿ ಜೀನ್ಸ್ ಡೈಯಿಂಗ್ ಉದ್ಯಮಿಗಳಿದ್ದಾರೆ.

ಕರ್ನಾಟಕ ಉಪ ಲೋಕಾಯುಕ್ತ ನ್ಯಾ|| ಬಿ. ವೀರಪ್ಪ ಅವರು ಇತ್ತೀಚೆಗೆ ಬಳ್ಳಾರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಗರದ ವಿವಿಧೆಡೆ ಭೇಟಿ ನೀಡಿ ಕುಂದುಕೊರತೆಗಳನ್ನು ಪರಿಶೀಲಿಸಿ, ಅವುಗಳ ಪರಿಹಾರಕ್ಕೆ ನಿರ್ದೇಶನ ನೀಡಿದ್ದರು. ಅದೇ ಸಂದರ್ಭದಲ್ಲಿ ಮುಂಡರಗಿ ಅಪೆರಲ್ ಪಾರ್ಕ್‍ಗೆ ಕೂಡಾ ಭೇಟಿ ನೀಡಿದ್ದರು. ಅಲ್ಲಿ ಕಾರ್ಯನಿರ್ವಹಿಸುವ ಡೈಯಿಂಗ್ ಘಟಕಗಳಿಂದ ಬರುವ ಕಲುಷಿತ ನೀರು ಕಂಡು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂದಿನಿಂದ ಜೀನ್ಸ್ ಡೈಯಿಂಗ್ ಉದ್ಯಮಿಗಳು ಘಟಕಗಳನ್ನು ಬಂದ್ ಮಾಡಿದ್ದಾರೆ.

‘ಕಲುಷಿತ ನೀರಿನ ನಿರ್ವಹಣೆ ಸಮರ್ಪಕವಾಗಿ ಮಾಡದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಲೋಕಾಯುಕ್ತಕ್ಕೆ ಅಧಿಕಾರವಿದೆ. ಆದರೆ, ಘಟಕಗಳನ್ನು ಮುಚ್ಚುವ ಆದೇಶ ನೀಡಲಾಗದು’ ಎಂದು ಲೋಕಾಯುಕ್ತ ಮೂಲಗಳೂ ಹೇಳಿವೆ. ಇನ್ನೂ ಕೆಐಎಡಿಬಿ ಮತ್ತು ಕೆಎಸ್‍ಪಿಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ‘ಘಟಕ ಮುಚ್ಚಲು ನಾವೂ ಆದೇಶಿಸಿಲ್ಲ’ ಎಂದು ತಿಳಿಸಿದ್ದಾರೆ.

ಡೈಯಿಂಗ್ ಘಟಕಗಳಿಂದ ಹೊರಬರುವ ನೀರಿನ ಸಂಸ್ಕರಣೆಗೆಂದೇ ಕೆಎಸ್‍ಪಿಸಿಬಿಗೆ ಕೆಐಎಡಿಬಿ ಈ ಹಿಂದೆ ನಾಲ್ಕು ಎಕರೆ ಜಾಗ ನೀಡಿದೆ. ಆದರೆ, ಈವರೆಗೆ ಸಂಸ್ಕರಣಾ ಘಟಕ ನಿರ್ಮಾಣವಾಗಿಲ್ಲ. ‘ಎಲ್ಲರಿಗೂ ಸೇರಿ ಸಾಮಾನ್ಯ ಸಂಸ್ಕರಣಾ ಘಟಕ ನಿರ್ಮಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಕೆಐಎಡಿಬಿ ಮತ್ತು ಕೆಎಸ್‍ಪಿಸಿಬಿ ಆಸಕ್ತಿ ತೋರಬೇಕು. ನಾವೂ ಅಗತ್ಯ ನೆರವು ನೀಡುತ್ತೇವೆ’ ಎಂದು ಡೈಯಿಂಗ್ ಉದ್ಯಮಿಗಳು ಹೇಳುತ್ತಾರೆ. ಒಟ್ಟಿನಲ್ಲಿ ಸಮಸ್ಯೆ ಶೀಘ್ರ ಬಗೆಹರಿದು ಜೀನ್ಸ್ ಉದ್ಯಮ ಉತ್ತಮವಾಗಿ ಕಾರ್ಯನಿರ್ವಹಿಸಿ ವಹಿವಾಟಿನಲ್ಲಿ ವೃದ್ಧಿ ಕಾಣುವಂತಾಗಲಿ Éಎಂಬ ನಿರೀಕ್ಷೆಯಲ್ಲಿ ಉದ್ಯಮಿಗಳು ಹಾಗೂ ಕಾರ್ಮಿಕರಿದ್ದಾರೆ.

“ಬಳ್ಳಾರಿಯ ಮುಂಡರಗಿ ಅಪೆರಲ್ ಪಾರ್ಕ್‍ನಲ್ಲಿ ಆರಂಭದಲ್ಲಿ 83 ಡೈಯಿಂಗ್ ಘಟಕಗಳಿದ್ದವು. ಸದ್ಯ ಅದರ ಸಂಖ್ಯೆ 33ಕ್ಕೆ ಇಳಿದಿದೆ. ಕಲುಷಿತ ನೀರಿನ ಸಾಮಾನ್ಯ ಸಂಸ್ಕರಣಾ ಘಟಕ ನಿರ್ಮಿಸಲು ಸರ್ಕಾರ ಮುಂದಾಗಬೇಕು. ಜೀನ್ಸ್ ಉದ್ಯಮವನ್ನು ಕಾಪಾಡಬೇಕು. ಬೆಳೆಯುತ್ತಿರುವ ಬಳ್ಳಾರಿ ಜೀನ್ಸ್ ಉದ್ಯಮವನ್ನು ಸರ್ಕಾರ ಪೆÇ್ರೀತ್ಸಾಹಿಸಬೇಕು. ಕನಿಷ್ಠ ಸೌಲಭ್ಯ ಒದಗಿಸಬೇಕು. ನೂರಾರು ಕುಟುಂಬಗಳು ಈ ಉದ್ಯಮವನ್ನೇ ನಂಬಿವೆ.”
– ಇಬ್ರಾಹಿಂ ಬಾಬು, ಡೈಯಿಂಗ್ ಘಟಕದ ಮಾಲೀಕರು

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";