ಬೆಂಗಳೂರು: ದೇಶದಲ್ಲಿ ಇಂಧನ ಮಿತವ್ಯಯ ಸಾಧಿಸುವಂತೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಕ್ಷಣವೇ ಸ್ಪಂದಿಸಿದ್ದಾರೆ. ತಮ್ಮ ಅಧಿಕೃತ ಕಾರು ಹಾಗೂ ಬೆಂಗಾವಲು ವಾಹನಗಳನ್ನು ಬದಿಗಿಟ್ಟು, ಸಾಮಾನ್ಯ ಪ್ರಯಾಣಿಕರಂತೆ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಾಮಾನ್ಯರಂತೆ ಮೆಟ್ರೋದಲ್ಲಿ ಪ್ರಯಾಣಿಸಿದ ರಾಜ್ಯಾಧ್ಯಕ್ಷ:
ಪಕ್ಷದ ಪ್ರಮುಖ ಸಭೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿಜಯೇಂದ್ರ ಅವರು ಮೆಟ್ರೋ ಮೊರೆ ಹೋಗಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ನಿಂದ ಕೆಂಗೇರಿವರೆಗೂ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಅವರು, ಸಾಮಾನ್ಯ ಜನರ ನಡುವೆ ನಿಂತು, ಕುಳಿತು ಸಂಚರಿಸಿದರು. ಇದೇ ಹಾದಿಯಲ್ಲಿ ಕುಂಬಳಗೂಡಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೂ ಅವರು ಮೆಟ್ರೋ ಮೂಲಕವೇ ತಲುಪಿದ್ದಾರೆ.
ಸಾರ್ವಜನಿಕ ಸಾರಿಗೆಯನ್ನು ಬಳಸುವುದರಿಂದ ಇಂಧನ ಉಳಿತಾಯವಾಗುವುದಷ್ಟೇ ಅಲ್ಲದೆ, ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂಬ ಪ್ರಮುಖ ಸಂದೇಶವನ್ನು ಅವರು ಈ ಮೂಲಕ ಸಾರಿದ್ದಾರೆ.
“ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಮಿತವ್ಯಯಕ್ಕೆ ಸಲಹೆ ನೀಡಿದ್ದಾರೆ. ಅವರು ಸ್ವತಃ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಹಾಗಾಗಿ ನಾನು ಕೂಡ ಅವರ ಮಾತಿಗೆ ಬೆಲೆ ಕೊಟ್ಟು, ಸ್ಪಂದಿಸಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೇನೆ. ಕುಂಬಳಗೂಡಿನ ಸಭೆಯ ಬಳಿಕ ಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆಯಲಿದ್ದೇನೆ.”
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ವಿಪಕ್ಷಗಳ ‘ರಾಜೀನಾಮೆ’ ಟೀಕೆಗೆ ವಿಜಯೇಂದ್ರ ತೀಕ್ಷ್ಣ ತಿರುಗೇಟು:
ಇಂಧನ ಬೆಲೆ ಏರಿಕೆ ವಿಚಾರವಾಗಿ ಪ್ರಧಾನಿ ಮೋದಿಯವರ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಬಿ.ವೈ. ವಿಜಯೇಂದ್ರ ಇದೇ ವೇಳೆ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ: “ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆಯ ಕಾರಣಕ್ಕೆ ದೇಶದ ಪ್ರಧಾನಿಯೇ ರಾಜೀನಾಮೆ ಕೊಡಬೇಕು ಎನ್ನುವುದಾದರೆ, ಕರ್ನಾಟಕದಲ್ಲಿ ಬೆಲೆ ಏರಿಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎರಡು ವರ್ಷಗಳ ಹಿಂದೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು” ಎಂದು ತಿರುಗೇಟು ನೀಡಿದರು.
ಪ್ರಧಾನಿ ಅವರ ಮಿತವ್ಯಯದ ಕರೆಯನ್ನು ಪಾಲಿಸುವ ಜೊತೆಗೆ ವಿಪಕ್ಷಗಳ ಟೀಕೆಗಳಿಗೆ ರಾಜಕೀಯವಾಗಿಯೂ ವಿಜಯೇಂದ್ರ ಅವರು ತಮ್ಮ ಈ ಮೆಟ್ರೋ ಪ್ರಯಾಣದ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.



