ಬೆಂಗಳೂರು/ಹಾವೇರಿ ಮಾ, 17; ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಹೆಸರಿನಲ್ಲಿ ಉಕ್ರೇನ್ ನಲ್ಲಿ ಅರ್ದದಲ್ಲೇ ಶಿಕ್ಷಣ ಮೊಟಕುಗೊಳಿಸಿರುವವರಿಗೆ ನೆರವು ನೀಡುವುದಾಗಿ ಯುವ ಕಾಂಗ್ರೆಸ್ ಮುಖಂಡ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ. ಹಾವೇರಿಯಲ್ಲಿ ನವೀನ್ ಅವರ ತಂದೆ ಶೇಖರಗೌಡ ಮತ್ತವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ ಅವರು, ಉಕ್ರೇನ್ ನಿಂದ ವೈದ್ಯಕೀಯ ವಿದ್ಯಾರ್ಥಿಗಳು ವಾಪಸ್ಸಾಗಿದ್ದು, ಇಂತಹ ವಿದ್ಯಾರ್ಥಿ ಸಮುದಾಯಕ್ಕೆ ನೆರವು ಬೇಕಾಗಿದೆ. ತೀರಾ ಅಗತ್ಯವಿರುವವರನ್ನು ಗುರುತಿಸಿ ವೈದ್ಯರಾಗುವ ಕನಸು ಕಂಡಿದ್ದ ನವೀನ್ ಗ್ಯಾನಗೌಡರ್ ಅವರ ಆಶಯಗಳನ್ನು ಈ ಮೂಲಕ ಸಾಕಾರಗೊಳಿಸಲಾಗುವುದು ಎಂದರು.
![](http://www.kannadanadunews.in/wp-content/uploads/2022/03/WhatsApp-Image-2022-03-17-at-3.08.38-PM-1024x768.jpeg)
ನವೀನ್ ಸಾವು ಎಲ್ಲರಿಗೂ ದುಃಖ ತಂದಿದ್ದು, ಇವರ ಕುಟುಂಬಕ್ಕೆ ಇದು ಭಾರೀ ಆಘಾತ ಉಂಟು ಮಾಡಿದೆ. ನವೀನ್ ಅವರ ಮೃತ ದೇಹವನ್ನು ಸ್ವದೇಶಕ್ಕೆ ತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು. ನವೀನ್ ಹೆಸರಿನಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ನವೀನ್ ಅಗಲಿಕೆಯ ನೋವಿನಿಂದ ಅವರ ಕುಟುಂಬ ಇನ್ನೂ ಹೊರ ಬಂದಿಲ್ಲ. ನವೀನ್ ಬದುಕಿದ್ದರೆ ವೈದ್ಯರಾಗಿ ಕುಟುಂಬದ ಕನಸು ನನಸು ಮಾಡುವ ಜತೆಗೆ ಸಮಾಜಕ್ಕೆ ಅವರು ಮಾದರಿಯಾಗುತ್ತಿದ್ದರು ಎಂದು ರಕ್ಷಾ ರಾಮಯ್ಯ ಹೇಳಿದರು.
![](http://www.kannadanadunews.in/wp-content/uploads/2022/03/WhatsApp-Image-2022-03-17-at-3.08.39-PM-1024x768.jpeg)