ಕೊಪ್ಪಳ: ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆ ಪರಿಣಾಮ ವಾನರ ಅಸುನೀಗಿರುವ ಘಟನೆ ಶಹಪುರ-ಹಿಟ್ನಾಳ್ ಟೋಲ್ ಗೇಟ್ ಮಧ್ಯೆ ಜರುಗಿದೆ.
ಇದೀಗ ಬೇಸಿಗೆ ಇರುವುದರಿಂದ ಆಹಾರ ಅರಸಿ ವಾನರ ಸೈನ್ಯ ಗ್ರಾಮಗಳತ್ತ ತೆರಳುತ್ತಿವೆ. ಹೊಲಗದ್ದೆಗಳಲ್ಲಿ ಹಾಕಿದ್ದ ಅಲಸಂದಿ, ಸೇಂಗಾ, ಹೆಸರು ತಿನ್ನಲು ರಸ್ತೆ ದಾಟಿ ಬರುವುದು ಉಂಟು. ಹೀಗೆ ರಸ್ತೆ ದಾಟುವ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದದ್ದರಿಂದ ಕಪಿಯೊಂದು ಅಸು ನೀಗಿದೆ. ಈ ಕುರಿತು ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಕಾಡು ಪ್ರಾಣಿಗಳು ಇರುವ ಚಿತ್ರಗಳನ್ನು ನಾಮಫಲಕಗಳಲ್ಲಿ ದೊಡ್ಡದಾಗಿ ಹಾಕಬೇಕು. ರಸ್ತೆ ಬದಿ ಈ ರೀತಿ ಹಾಕುವ ಮೂಲಕ ಚಾಲಕರಿಗೆ ಎಚ್ಚರಿಕೆ ನೀಡಬೇಕು.
![](https://kannadanadunews.in/wp-content/uploads/2024/02/WhatsApp-Image-2024-02-27-at-13.23.27_61a5d988-1024x577.jpg)
ಹಿಟ್ನಾಳ ಟೋಲ್ ಗೇಟ್ ನಿಂದ ಶಹಪುರ, ಕೆರೆಹಳ್ಳಿ, ಬೂದಗುಂಪಿ ಕ್ರಾಸ್, ಕೂಕನಪಳ್ಳಿ ಮತ್ತು ಹಿರೇವಂಕಲಕುಂಟೆವರೆಗೆ ಅಲ್ಲಲ್ಲಿ ಗುಡ್ಡಗಾಡು ಇರುವುದರಿಂದ ಕಪಿಗಳು ಹೊಲ, ಗದ್ದೆ, ತೋಟ ಅರಸಿ ಬರುತ್ತಿವೆ. ಹೀಗೆ ಬರುವಾಗ ರಾಷ್ಟ್ರೀಯ ಹೆದ್ದಾರಿ ದಾಟುವ ಪ್ರಮೇಯ ಇರುವುದರಿಂದ ವಾಹನಗಳು ಡಿಕ್ಕಿ ಹೊಡೆದು ಕರಡಿ, ಚಿರತೆ, ವನಗ್ಯಾ(ದೊಡ್ಡ ಕಾಡು ಬೆಕ್ಕು) ನರಿ, ತೋಳಗಳು ಸಾವಿಗೀಡಾಗುತ್ತಿವೆ. ಅದೇರೀತಿ, ಗಿಣಿಗೇರಿಯಿಂದ ಗಂಗಾವತಿವರೆಗೆ ಗುಡ್ಡಗಾಡು ಇರುವುದರಿಂದ ರಾಜ್ಯ ಹೆದ್ದಾರಿಯಲ್ಲೂ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಮೂಕ ಪ್ರಾಣಿಗಳ ಮೇಲೆ ವಾಹನ ಹರಿಸಿ ಪ್ರಾಣಿಗಳನ್ನು ಕೊಲ್ಲಲಾಗುತ್ತಿದೆ. ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಲ್ಲಲ್ಲಿ ನಾಮಫಲಕಗಳನ್ನು ಹಾಕುವ ಮೂಲಕ ವಾಹನ ಚಾಲಕರಿಗೆ ಎಚ್ಚರಿಕೆ ನೀಡಬೇಕೆಂದು ಪರಿಸರಪ್ರೇಮಿ ವೀರಣ್ಣ ಕೋಮಲಾಪುರ ಸರ್ಕಾರವನ್ನು ಒತ್ತಾಯಿಸಿದ್ದಾರೆ.