ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರ ಒಪ್ಪಿಕೊಂಡು ತನಿಖೆ ನಡೆಸುತ್ತಿದೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು: ಇತ್ತೀಚೆಗೆ ನಡೆದ ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರ ಒಪ್ಪಿಕೊಂಡು ತನಿಖೆ ನಡೆಸುತ್ತಿದೆ. ಈ ಅಕ್ರಮ ತಾವೇ ಕಂಡುಹಿಡಿದು ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಅವರ ಬೆನ್ನು ಅವರೇ ತಟ್ಟಿಕೊಳ್ಳುತ್ತಿದ್ದಾರೆ. ಈ ಪ್ರಕರಣವನ್ನು ಆಳವಾಗಿ ನೋಡಿದಾಗ ಈ ಅಕ್ರಮದಲ್ಲಿ ಈ 40% ಸರ್ಕಾರ ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ. ಲಕ್ಷಾಂತರ ಯುವಕರ ಬದುಕು ಹಾಳು ಮಾಡುತ್ತಿದ್ದಾರೆ. ನಮ್ಮಲ್ಲಿ ಸರ್ಕಾರಿ ನೌಕರಿ ಎಂದರೆ ಒಂದು ರೀತಿ ಕನಸಾಗಿದೆ. ತಮ್ಮ ಮಕ್ಕಳಿಗೆ ಓದಿಸಿ, ಸರ್ಕಾರಿ ಕೆಲಸ ಸಿಗಬೇಕು ಎಂದು ಪೋಷಕರು ಹಗಳಿರುಲಳು ಶ್ರಮಿಸುತ್ತಾರೆ. ಆ ಅಭ್ಯರ್ಥಿಗಳು ಕೂಡ ಅಪಾರ ಶ್ರಮ ಹಾಕುತ್ತಾರೆ. ನಮ್ಮ ಊರಿನ ಕಡೆ ಒಬ್ಬ ವಿದ್ಯಾರ್ಥಿ ಸರ್ಕಾರಿ ಹುದ್ದೆ ಪಡೆಯಲು ಪ್ರಯತ್ನಿಸಿದರೆ, ಇಡೀ ಊರೇ ಆತನ ಮೇಲೆ ನಿರೀಕ್ಷೆ ಇಟ್ಟುಕೊಳ್ಳುತ್ತದೆ.

ಈ ಸರ್ಕಾರ ಈ ಯುವಕರ ಕನಸು ನುಚ್ಚು ನೂರು ಮಾಡುತ್ತಿದೆ. 2020ರಲ್ಲಿ ಸರ್ಕಾರಿ ಹುದ್ದೆ ಭರ್ತಿ ಮಾಡುವಂತೆ ಹೈಕೋರ್ಟ್ ಆದೇಶ ನೀಡುತ್ತದೆ. ಅದರಂತೆ ಸರ್ಕಾರ ಪಿಎಸ್ ಐ ಹುದ್ದೆ ನೇಮಕಕ್ಕೆ 2 ಅಧಿಸೂಚನೆ ಹೊರಡಿಸುತ್ತದೆ. ಮೊದಲ ಹಂತದಲ್ಲಿ 545 ಹುದ್ದೆಗಳಿಗೆ, ಎರಡನೇ ಹಂತದಲ್ಲಿ 402 ಒಟ್ಟು 947 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತದೆ. ಏಪ್ರಿಲ್ 1, 2020ರಲ್ಲಿ ಈ 40% ಸರ್ಕಾರ ಅರ್ಜಿ ಕರೆಯುತ್ತಾರೆ, ಮೇ 14, 2020ಗೆ ನೋಟಿಫಿಕೇಶನ್ ಪ್ರಕಟವಾಗುತ್ತದೆ. ಇದರಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಕೋಟಾ ನೀಡಲು ಇದನ್ನು ತಡೆ ಹಿಡಿಯುತ್ತಾರೆ. ಇದು ಒಳ್ಳೆಯದು. ನಂತರ ಜ.21, 2021ರಲ್ಲಿ ಎರಡನೇ ಅಧಿಸೂಚನೆ ಹೊರಡಿಸಿ, ಜ.22ರಿಂದ ಅರ್ಜಿ ಆಹ್ವಾನ ಆರಂಭ. ಆಶ್ಚರ್ಯ ಎಂದರೆ 545 ಹುದ್ದೆಗೆ 1,28,598 ಅರ್ಜಿ ಬರುತ್ತವೆ. ಇದು ನಮ್ಮಲ್ಲಿ ಎಷ್ಟು ಜನ ಆಕಾಂಕ್ಷಿ ಇದ್ದಾರೆ ಎಂದು ಗೊತ್ತಾಗುತ್ತದೆ.

ಆಕ್ಟೊಬರ್ 3, 2021ರಂದು ಲಿಖಿತ ಪರೀಕ್ಷೆ. ಆಗ ಅಭ್ಯರ್ಥಿಗಳು ಚರ್ಚೆ ನಡೆಯುವಾಗ ಇದರಲ್ಲಿ ಅಕ್ರಮ ನಡೆದಿರುವ ಅನುಮಾನ ವ್ಯಕ್ತವಾಗುತ್ತದೆ. ಜ.1 ಈ ವಿಚಾರವಾಗಿ ದೂರು ನೀಡುತ್ತಾರೆ. ಅದೇ ದಿನ 402 ಹುದ್ದೆಗಳಿಗೆ ಎರಡನೇ ಹಂತದ ನೇಮಕಾತಿಗೆ ಪರೀಕ್ಷೆ ಪ್ರಕಟ. ಆಗ ಮೊದಲ ಹಂತದ ನೇಮಕಾತಿ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮ ನಡೆದಿರುವ ಮಾಹಿತಿ ಇದೆ, ಹೀಗಾಗಿ ಎರಡನೇ ಹಂತದ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿ ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಾರೆ. ಇದಕ್ಕೆ ಗೃಹ ಸಚಿವರು ಟ್ವೀಟ್ ಮಾಡಿ, ಅಭ್ಯರ್ಥಿಗಳು ಅಕ್ರಮ ಆಗದಂತೆ ನಿರ್ದೇಶನ ನೀಡುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದು, ಯಾರಿಗೂ ಅನ್ಯಾಯವಾಗದಂತೆ ತಡೆಯಲಾಗುವುದು, ಅಕ್ರಮ ಮಾಡಲು ಪ್ರಯತ್ನಿಸುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಕರ್ನಾಟಕ ಹಾಗೂ ಮುಖ್ಯಮಂತ್ರಿ ಅವರನ್ನು ಟ್ವೀಟ್ ಮಾಡುತ್ತಾರೆ.

ಮೊದಲ ಹಂತದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅವರು ಪ್ರಶ್ನೆ ಮಾಡಲಿಲ್ಲ. ಇನ್ನು ಜ.19, 2022ರಂದು ಸರ್ಕಾರ ಸಂಭಾವ್ಯ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಒಂದು ವಾರದ ನಂತರ ಜ.25ರಂದು ಈ ಅಭ್ಯರ್ಥಿಗಳು ಡಿಜಿ ಬಳಿ ದೂರು ನೀಡುತ್ತಾರೆ. ಅದರಲ್ಲಿ ಸಂಭಾವ್ಯ ಆಯ್ಕೆ ಪಟ್ಟಿಯಲ್ಲಿ ಅಕ್ರಮ ನಡೆದು ಬಂದಿದೆ. ಪ್ರಶ್ನೆ ಪತ್ರಿಕೆ ಅತ್ಯಂತ ಕಠಿಣವಾಗಿದ್ದರೂ 120ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದು, ಮೊದಲ ಪತ್ರಿಕೆಯಲ್ಲಿ ಕನಿಷ್ಠ ಅಂಕ ಪಡೆಯದಿರುವುದು ಅಕ್ರಮ ಸ್ಪಷ್ಟವಾಗುತ್ತದೆ. ಉತ್ತರ ಕರ್ನಾಟಕ ಭಾಗದ ಕೆಲವು ಕೇಂದ್ರಗಳಲ್ಲಿ ಸಿಸಿಟಿವಿ ಇಲ್ಲದಿರುವುದರಿಂದ ಬ್ಲೂಟೂಥ್ ಸಾಧನ ಬಳಸಿ ಅಕ್ರಮ ಮಾಡಲಾಗಿದೆ, ಹೀಗಾಗಿ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ದೂರನ್ನು ಖುದ್ದು ಡಿಜಿ ಅವರು ಸ್ವೀಕರಿಸಿದ್ದು, ಇದನ್ನು ಯಾಕೆ ನಿರ್ಲಕ್ಷಿಸಿದ್ದಾರೆ ಎಂದು ತಿಳಿದಿಲ್ಲ. ನಮ್ಮ ಗೃಹಮಂತ್ರಿಗಳು ಈ ದೂರು ದಾಖಲಾದ ದಿನ ಒಂದು ಹೇಳಿಕೆ ನೀಡುತ್ತಾರೆ. ದೂರು ನೀಡಿರುವವರು ಪರೀಕ್ಷೆ ಪಾಸ್ ಮಾಡಲಾಗದೆ ದೂರು ನೀಡಿದ್ದಾರೆ ಎಂದು ಹೇಳುತ್ತಾರೆ. ಅನುಮಾನ ಇದ್ದರೆ ನಿಮ್ಮ ಉತ್ತರ ಪತ್ರಿಕೆ ನಕಲು ಪ್ರತಿ ಪಡೆದು ಪರೀಕ್ಷಿಸಿಕೊಳ್ಳಿ ಎಂದು ಹೇಳುತ್ತಾರೆ.

ನಂತರ ಅಭ್ಯರ್ಥಿ ಅರ್ಜಿ ಹಾಕಿದಾಗ ಫೆ.21ರಂದು ಅವನಿಗೆ ಉತ್ತರ ನೀಡುತ್ತಾರೆ, ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮೊದಲ ಪತ್ರಿಕೆಯ ಉತ್ತರ ಪತ್ರಿಕೆ ಪ್ರತಿ ನೀಡಲು ಅವಕಾಶ ಇಲ್ಲ ಎಂದು ಈ ಮೂಲಕ ತಿಳಿಸಲಾಗಿದೆ ಎಂದು ನೀಡಲಾಗಿತ್ತದೆ. ಆದರೆ ಮುಖ್ಯಮಂತ್ರಿಗಳು ಆರ್ ಟಿಐ ಹಾಕಲು ಯಾಕೆ ಹೇಳಿದರು? ಅಭ್ಯರ್ಥಿಗಳ ದಾರಿ ತಪ್ಪಿಸಲೇ? ಇಡೀ ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿ. ಗೃಹ ಸಚಿವರಿಗೆ ಎರಡು ನಾಲಿಗೆ ಇದೆಯಾ? ಜ.29ರಂದು ಮತ್ತೊಂದು ದೂರು ದಾಖಲಾಗಿ, 371 ಜೆ ಮೂಲಕ ಮೀಸಲಾತಿ ನೀಡಿಲ್ಲ ಎಂದು ತಿಳಿಸಲಾಗುತ್ತದೆ. ಜತೆಗೆ ಇದರಲ್ಲಿ ಕಲಬುರ್ಗಿ ಜಿಲ್ಲೆಯ ಕಿಂಗ್ ಪಿನ್ ಬಗ್ಗೆ ಪ್ರಸ್ತಾಪ ಇದೆ.

ಆದರೂ ಸರ್ಕಾರ ಯಾಕೆ ಗಂಭೀರವಾಗಿ ಪರಿಗಳಿಸಿಲ್ಲ?

ಇನ್ನು ಸಚಿವ ಪ್ರಭು ಚೌಹಾಣ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಕಲಬುರ್ಗಿ ಜಿಲ್ಲೆಯಲ್ಲಿ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೂಡಲೇ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ತಿಳಿಸುತ್ತಾರೆ. ಇನ್ನು ಗೃಹಮಂತ್ರಿಗಳಿಗೆ ಬಿಜೆಪಿ ಶಾಸಕರು ಪತ್ರ ಬರೆದಿದ್ದು, ಈ ವಿಚಾರವಾಗಿ ತನಿಖೆ ನಡೆಸಿ ಅನ್ಯಾಯಕ್ಕೆ ಒಳಗಾಗಿರುವ ಅಭ್ಯರ್ಥಿಗೆ ನ್ಯಾಯ ಒಡಗಿಸಿಕೊಡಬೇಕು ಎಂದು ತಿಳಿಸಿದ್ದಾರೆ. ಬಿಜೆಪಿ ಮಂತ್ರಿ ಹಾಗೂ ಶಾಸಕರು ಪತ್ರ ಬರೆದಿದ್ದರೂ ಈ ಬಗ್ಗೆ ಯಾಕೆ ತನಿಖೆ ಆಗಿಲ್ಲ? ಈ ಬಗ್ಗೆ ಸಂಪುಟದಲ್ಲಿ ಚರ್ಚೆ ಆಗಿದೆಯಾ? ಇದರಲ್ಲಿ ಬರುವ 40% ನಾವೇ ಹಂಚಿಕೊಳ್ಳೋಣ ಎಂದು ತೀರ್ಮಾನ ಆಯ್ತೆ?

ಫೆ.7, 2022ರಂದು ಎಡಿಜಿಪಿ ಈ ತಾತ್ಕಾಲಿಕ ಪಟ್ಟಿ ತಡೆ ನೀಡುತ್ತಾರೆ. ಫೆ.12ರಂದು ಯಾದಗಿರಿ ಅಕ್ರಮ ಜೆರಾಕ್ಸ್ ಅಂಗಡಿ ಮಾಲೀಕನ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ಬರುತ್ತದೆ. ಇಷ್ಟೆಲ್ಲಾ ಆದರೂ ಗೃಹ ಸಚಿವರು ಮಾರ್ಚ್ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿ ಪೊಲೀಸ್ ನೇಮಕಾರಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಸುಳ್ಳು ಹೇಳುತ್ತಾರೆ. ಒಟ್ಟು ಆರು ಬಾರಿ ಸುಳ್ಳು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರು ಈ ಬಗ್ಗೆ ಕೇಳಿದರೆ ದೂರು ಬಂದಿಲ್ಲ ಎನ್ನುತ್ತಾರೆ. ಬಿಜೆಪಿ ಶಾಸಕರು ಈ ಬಗ್ಗೆ ಪ್ರಶ್ನೆ ಮಾಡಿದರೆ ದೂರು ಬಂದಿದೆ, ಪರಿಶೀಲನೆ ಮಾಡಿದ್ದು ಯಾವುದೇ ಅಕ್ರಮ ನಡೆದಿಲ್ಲ ಹೀಗಾಗಿ ನೇಮಕಾತಿ ಮುಂದುವರಿಸುತ್ತಿದ್ದೆವೆ ಎಂದು ಹೇಳುತ್ತಾರೆ. ಗೃಹಮಂತ್ರಿಗಳಿಗೆ ತಮ್ಮ ಇಲಾಖೆಯಲ್ಲಿ ಏನಾಗುತ್ತಿದೆ ಎಂದು ತಿಳಿದಿಲ್ಲವೇ?

ಮಾರ್ಚ್ 10ರಂದು ಪರಿಷತ್ ನಲ್ಲಿ ಬಿಜೆಪಿ ಸದಸ್ಯರು ಪ್ರಶ್ನೆ ಕೇಳಿದಾಗ, ಹೌದು 545 ಹುದ್ದೆಗಳ ಪರೀಕ್ಷೆ ಪಾರದರ್ಶಕವಾಗಿ ನಡೆದಿದೆ ಎನ್ನುತ್ತಾರೆ. ಇನ್ನು ಉಪ ಪ್ರಶ್ನೆಯಲ್ಲಿ ಪರೀಕ್ಷೆಯಲ್ಲಿ ಗೊಂದಲ ಏರ್ಪಟ್ಟಿದೆಯೇ ಎಂಬ ಪ್ರಶ್ನೆಗೆ, ಪರೀಕ್ಷೆಯನ್ನು ಯಾವುದೇ ಗೊಂದಲ ಇಲ್ಲದೆ ಸುಗಮವಾಗಿ ನಡೆಸಲಾಗಿದೆ ಎಂದು ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರಾದ ಎಸ್ ರವಿ ಅವರು ಅದೇ ದಿನ ಈ ವಿಚಾರವಾಗಿ ಪ್ರಶ್ನೆ ಕೇಳಿದಾಗ, ಐದು ದೂರು ಬಂದಿದ್ದು, ಎಲ್ಲವೂ ಸುಗಮವಾಗಿ ನಡೆದಿದೆ ಎಂದು ಉತ್ತರಿಸುತ್ತಾರೆ. ಮಾ.25ರಂದು ಯು.ಬಿ ವೆಂಕಟೇಶ್ ಅವರು ಈ ಬಗ್ಗೆ ಪ್ರಶ್ನೆ ಕೇಳಿದಾಗ, ಅವರಿಗೆ ಉಡಾಫೆ ಉತ್ತರ ಕೊಟ್ಟಿದ್ದಾರೆ. 3 ಪ್ರಶ್ನೆಗೆ 3 ಮಾದರಿ ಉತ್ತರ. ಇದು ಜ್ಞಾನೇಂದ್ರ ಅವರಿಗೆ ಜ್ಞಾನ ಇಲ್ಲವೆಂದು ಸ್ಪಷ್ಟವಾಗುತ್ತದೆ. ಮಾಧ್ಯಮಗಳ ಮುಂದೆ ಯಾವುದೇ ಅಕ್ರಮ ಇಲ್ಲ ಎನ್ನುತ್ತಾರೆ, ಉತ್ತರದಲ್ಲಿ ದೂರು ದಾಖಲಾಗಿವೆ ಎನ್ನುತ್ತಾರೆ.

ಏ.9ರಂದು ಸಿಐಡಿಯವರು ಕಲಬುರ್ಗಿ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸುತ್ತಾರೆ. ಅದರಲ್ಲಿ ಒಬ್ಬ ಅಭ್ಯರ್ಥಿಗೆ ಸಹಾಯ ಮಾಡಿರುವ ಆರೋಪ ಇದೆ. ಈ ಅಕ್ರಮವನ್ನು ಗೋಕುಲ ನಗರ ಜಿಡಿಎ ಲೇಔಟ್ ನ ಜ್ಞಾನಜ್ಯೋತಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಶಾಲೆ ಬಿಜೆಪಿಯ ಪದಾಧಿಕಾರಿಗಳದ್ದಾಗಿದೆ. ಗೃಹ ಸಚಿವರು ಇವರ ಮನೆಗೆ ಹೋಗಿ ಆರತಿ ಮಾಡಿಸಿಕೊಂಡಿದ್ದರು. ಈ ಅವ್ಯವಹಾರ ಮಾಡಲು ಹೋಗಿದ್ದರೆ?

ಇವರು ದಿಶಾ ಸಮಿತಿ ಹಾಗೂ ನರ್ಸಿಂಗ್ ಕೌನ್ಸಿಲ್ ಸದಸ್ಯರಾಗಿದ್ದಾರೆ. ಈ ಪದಾಧಿಕಾರಿಗಳು ಈಗ ತಲೆಮರೆಸಿಕೊಂಡಿರುವುದೇಕೆ? ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಬಂದಿರುವ ಅಭ್ಯರ್ಥಿ ಸಮವಸ್ತ್ರ ಧರಿಸಿ 2 ಸ್ಟಾರ್ ಹಾಕಿಕೊಂಡು ಓಡಾಡುತ್ತಿದ್ದಾನೆ. ಈ ಇಲಾಖೆ ಎಷ್ಟು ಅಯೋಗ್ಯವಾಗಿದೆ ಎಂದರೆ, ಅಭ್ಯರ್ಥಿಗಳಿಂದಲೇ ಸಾಕ್ಷಿ ಕೇಳಿ ತನಿಖೆ ಹೇಗೆ ಮಾಡಬೇಕು ಎಂದು ಕೇಳುತ್ತಾರೆ. ಇನ್ನು ಎಬಿವಿಪಿ ಕಾರ್ಯಕರ್ತನಿಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಆತ ನಿನ್ನೆ ಬಂಧನವಾಗಿದ್ದೇನೆ. ಇನ್ನು ಈ ಶಾಲೆ ಪ್ರಾಂಶುಪಾಲರು ಬಂಧನವಾಗಿದ್ದು, ಅವರು ನಾವು ಅಮಾಯಕರು, ನಮ್ಮ ಸಂಸ್ಥಾಪಕರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಕೇಳಿಕೊಳ್ಳುತ್ತಿದ್ದಾರೆ. ತಲೆಮರೆಸಿಕೊಂಡಿರುವ ಬಿಜೆಪಿ ಪದಾಧಿಕಾರಿಗಳ ಬಂಧನವಾಗಿಲ್ಲ. ಸಣ್ಣ ಪುಟ್ಟವರನ್ನು ಬಂಧಿಸಿ, ಪದಾಧಿಕಾರಿಗಳನ್ನು ಯಾಕೆ ಬಂಧಿಸಲು ಆಗುತ್ತಿಲ್ಲ. ಈ ಪ್ರಕರಣ ಸರಿಯಾಗಿ ತನಿಖೆ ಮಾಡಿದರೆ ಈ ಸರ್ಕಾರದ 3-4 ವಿಕೆಟ್ ಉರುಳಲಿದೆ. 545ರಲ್ಲಿ 300 ಮಂದಿ ಅಕ್ರಮ ಆಯ್ಕೆ ಆಗಿದ್ದು, ಪ್ರತಿ ಅಭ್ಯರ್ಥಿಯಿಂದ ಕನಿಷ್ಠ 70-80 ಲಕ್ಷ ಪಡೆದಿದ್ದು, ಅಲ್ಲಿಗೆ 210 ಕೋಟಿ ಅವ್ಯವಹಾರ ನಡೆದಿದೆ. ಯಾರೆಲ್ಲಾ ಗೃಹ ಸಚಿವರಾಗಿದ್ದಾರೆ, ಯಾರಿಗೆ ಎಷ್ಟು ಪಾಲು ಹೋಗಿದೆ? ಸಿಐಡಿಯವರು ಏನು ಮಾಡುತ್ತಿದ್ದಾರೆ?

ಮಾತೆತ್ತಿದರೆ ಮೋದಿ ಎನ್ನುತ್ತಾರೆ. ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದರು. ಆದರೆ ನಾಲಾಯಕ್ ಸರ್ಕಾರದಿಂದ ಉದ್ಯೋಗ ಸೃಷ್ಟಿಯಾಗಿಲ್ಲ. ಕಳೆದ 2 ವರ್ಷದಿಂದ ಒಂದು ಉದ್ಯೋಗ ಸೃಷ್ಟಿ ಆಗಿಲ್ಲ. ಕಾರ್ಮಿಕ ಇಲಾಖೆ ಪ್ರಕಾರ 1 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇಲ್ಲಿರುವ ವಾತಾವರಣ ನೋಡಿ ಕೆಟಿಆರ್ ಆಂಧ್ರಕ್ಕೆ ಬಂಡವಾಳ ಹೂಡಿಕೆ ದಾರರನ್ನು ಆಹ್ವಾನಿಸುತ್ತಿದ್ದಾರೆ. ತಮಿಳುನಾಡಿನ ಆರ್ಥಿಕ ಸಚಿವರು ಅಲ್ಲಿನ ರಾಜ್ಯಕ್ಕೆ ಆಮಂತ್ರಣ ನೀಡುತ್ತಿದ್ದಾರೆ. ಎಫ್ ಡಿಸಿ, ವೇಟರ್ನರಿ, ತೋಟಗಾರಿಕೆ ಇಲಾಖೆ ನೇಮಕಾತಿಯಲ್ಲಿ ಅಕ್ರಮವಾಗಿದೆ. ನೀವು ಯುವಕರಿಗೆ ಉದ್ಯೋಗ ನೀಡಿ ಎಂದರೆ ಕೇಸರಿ ಶಾಲು ಹಾಕಿಸಿ ಓಡಾಡುತ್ತೀರಲ್ಲ ನಾಚಿಕೆಯಾಗುವುದಿಲ್ಲವೇ?

ಎಷ್ಟೋ ಜನ ಉದ್ಯೋಗಕ್ಕಾಗಿ ಹೊಲ ಮನೆ ಮಾರಿದ್ದಾರೆ. ಈ ಅಕ್ರಮದಿಂದ ಅವರ ಮಯೋಮಾನ ಮಿತಿ ಮೀರಿದೆ. ಇವರು ಅವರ ಭವಿಷ್ಯದ ಜತೆ ಆಟವಾಡುತ್ತಿದ್ದಾರೆ. ಗೃಹಮಂತ್ರಿಗಳು ನಮಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸರ್ಟಿಫಿಕೇಟ್ ಬೇಡ ಎನ್ನುತ್ತಾರೆ. ಪರ್ವಾಗಿಲ್ಲ ಆದರೆ ನಿಮ್ಮ ನಾಯಕರಾದ ಪ್ರಭು ಚೌಹಾಣ್ ಸೇರಿದಂತೆ ಅನೇಕರು ನಿಮಗೆ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಹರ್ಷ ಹತ್ಯೆ ಪ್ರಕರಣ ಎನ್ ಐಎ, ಚಂದ್ರು ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ನಿಮಗೆ ಮಾಡಲು ತಾಕತ್ತು ಇಲ್ಲವೇ. ನಿಮ್ಮ ಮೇಲೆ ವಿಶ್ವಾಸ ಇಲ್ಲ ಎಂದು ನಾವಲ್ಲ ನಿಮ್ಮ ಸಿಎಂ ಕೊಟ್ಟಿದ್ದಾರೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಸರ್ಟಿಫಿಕೇಟ್ ಕೊಟ್ಟಿದ್ದಾರೆ.

ಬಹಳ ದಿನಗಳ ನಂತರ ಕಟೀಲ್ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಈಶ್ವರಪ್ಪ ರಾಜೀನಾಮೆ ನೀಡುವಾಗ ಬಾಯಿ ಬಿಚ್ಚಲಿಲ್ಲ. ಕಟೀಲ್ ಅವರು ಯಾಕೆ ಅಷ್ಟು ಹೆದರುತ್ತಾರೆ? ಅವರು ರಾಜ್ಯಾಧ್ಯಕ್ಷರಾಗಿದ್ದಾರೆ, ಅವರ ಹಿಂದೆ ಮೋದಿ ಇದ್ದಾರೆ ಈಶ್ವರಪ್ಪ ಅವರನ್ನು ಕಂಡರೆ ಭಯ ಯಾಕೆ? ಬಿಟ್ ಕಾಯಿನ್, ಪಿಎಸ್ ಐ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದಾರಾ? ಯತ್ನಾಳ್ ದಿನನಿತ್ಯ ಮಾತನಾಡುತ್ತಾರೆ ಆದರೂ ನೀವು ಮಾತನಾಡುವುದಿಲ್ಲ. ಕೇವಲ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಸರಿ ಇಲ್ಲ ಅಂತಾ ಮಾತ್ರ ಹೇಳುತ್ತೀರಿ. ನೀವು ಬಿಜೆಪಿ ಭ್ರಷ್ಟಾಚಾರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ನೇಮಕಾತಿಯಲ್ಲಿ ಅಕ್ರಮ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಸರ್ಕಾರದ ಅಧಿಕಾರದಲ್ಲಿರುವವರ ಬೆಂಬಲ ಇಲ್ಲದೆ ಈ ರೀತಿ ನಡೆಯಲು ಸಾಧ್ಯವಿಲ್ಲ. ನೊಂದ ಅಭ್ಯರ್ಥಿಗಳಿಗೆ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವವರಿಗೆ ನ್ಯಾಯ ದೊರೆಯಬೇಕು. ಅಕ್ರಮಕ್ಕೆ ಅವಕಾಶ ಕೊಡುವವರಿಗೆ ಜೈಲು ಶಿಕ್ಷೆ ಆಗಬೇಕು. ಅರಗ ಜ್ಞಾನೇಂದ್ರ ಉತ್ತಮ ವ್ಯಕ್ತಿ ಇರಬಹುದು ಆದರೆ ಕೆಟ್ಟ ಗೃಹಮಂತ್ರಿ. ಅವರು ರಾಜೀನಾಮೆ ನೀಡುವುದು ಉತ್ತಮ. ನಿಮ್ಮ ಗೌರವಕ್ಕೆ ಧಕ್ಕೆ ಆಗುತ್ತಿದೆ. ಗೃಹ ಇಲಾಖೆ ಅತ್ಯಂತ ಭ್ರಷ್ಟ ಇಲಾಖೆ, ಪೊಲೀಸರು ಎಂಜಲು ಕಾಸು ತಿಂದು ಬಿದ್ದಿದ್ದಾರೆ ಎಂದು ನೀವೇ ಹೇಳುತ್ತೀರಿ. ನಿಮ್ಮ ಅಧಿಕಾರಿಗಳ ಅಪಮಾನ ನೀವೇ ಮಾಡುತ್ತೀರಿ. ಮುಖ್ಯಮಂತ್ರಿಗಳೇ ಈ ಹಿಂದೆ ಗೃಹಸಚಿವರಾಗಿದ್ದರು. ನಿಮ್ಮ ಕಾಲದಿಂದ ಇದು ನಡೆದುಕೊಂಡಿದೆ. ಒಂದು ಕೊಲೆ ಆದರೆ ಸಿಬಿಐ, ಎನ್ ಐಎ ಗೆ ಕೊಡುತ್ತೀರಿ. ಇಷ್ಟು ದೊಡ್ಡ ಹಗರಣ ನಡೆದರೂ ತನಿಖೆ ಮಾಡುತ್ತಿಲ್ಲ. ನೊಂದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸಮಗ್ರ ತನಿಖೆ ನಡೆಸಬೇಕಿದೆ.

Leave a Comment

Your email address will not be published. Required fields are marked *

Translate »
Scroll to Top