ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಯಶಸ್ಸು ದೊರೆಯಲಿದೆ

ದಿ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೇಟರೀಸ್ ಆಫ್ ಇಂಡಿಯಾದ ಎರಡು ದಿನಗಳ ದಕ್ಷಿಣ ವಲಯದ ಪ್ರಾದೇಶಿಕ ಸಮ್ಮೇಳನ

ಬೆಂಗಳೂರು: ಯಾವುದೇ ವಲಯದ ವೃತ್ತಿ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ಜ್ಞಾನದ ಮಟ್ಟವನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಂಡಲ್ಲಿ ಮಾತ್ರ ಯಶಸ್ಸು ಸದಾ ನಮ್ಮ ಜೊತೆ ಇರುತ್ತದೆ ಎಂದು ಹ್ಯಾಪಿಯಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಸಿ.ಎ ವೆಂಕಟರಮಣ್ ನಾರಾಯಣನ್ ಹೇಳಿದ್ದಾರೆ.

 

ನಗರದ ಕೋಣನಕುಂಟೆಯ ಪ್ರಿಸ್ಟೀಜ್ ಶ್ರೀ ಹರಿ ಖೋಡೆ” ಸಭಾಂಗಣದಲ್ಲಿ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ವ್ಯಾಪ್ತಿಗೊಳಪಡುವ ದಿ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೇಟರೀಸ್ ಆಫ್ ಇಂಡಿಯಾದಿಂದ ಆಯೋಜಿಸಲಾದ ಕಂಪನಿಯ ಕಾರ್ಯದರ್ಶಿಗಳ ಪಾತ್ರದ ಮರುವ್ಯಾಖ್ಯಾನ – ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಕುರಿತಾದ ಎರಡು ದಿನಗಳ ದಕ್ಷಿಣ ವಲಯದ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದನ್ನು ಕಲಿಯಬೇಕು. ವಿಶಾಲ ದೃಷ್ಟಿಕೋನದ ಮೂಲಕ ವಿಭಿನ್ನವಾಗಿ ಆಲೋಚನೆ ಮಾಡಬೇಕು. ಬೆಳೆವಣಿಗೆಯಾಗುತ್ತಿರುವ ಕಾರ್ಪೋರೇಟ್ ವಲಯಕ್ಕೆ ಅನುಗುಣವಾಗಿ ಬದಲಾವಣೆಗಳು ಅಗತ್ಯ. ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ರಿಮೋಟ್ ಐಪಿಓ ಬಳಸಿಕೊಂಡು ಮನೆಯಲ್ಲಿ ಕುಳಿತು ಕೆಲಸ ಮಾಡುವ ವಿಧಾನವನ್ನು ಮೊದಲಿಗೆ ಹ್ಯಾಪಿಯಸ್ಟ್ ಮೈಂಡ್ ಕಂಪೆನಿಯಲ್ಲಿ ಆರಂಭಿಸಲಾಯಿತು. ಇದು ಉಳಿದ ಕಂಪೆನಿಗಳಿಗೂ ಮಾದರಿಯಾಯಿತು. ಹೀಗೆ ಯಾವುದೇ ಸಂದರ್ಭಗಳಿಗೂ ನಾವು ಒಗ್ಗಿಕೊಳ್ಳಬೇಕು. ಸವಾಲುಗಳನ್ನು ಎದುರಿಸಲು ಎದ್ದು ನಿಲ್ಲಬೇಕು ಎಂದರು. 

ಮುಂಬರುವ ದಿನಗಳಲ್ಲಿ ಸಾಂಸ್ಥಿಕ ವಲಯ ಗಣನೀಯವಾಗಿ ಬೆಳವಣಿಗೆಯಾಗಲಿದ್ದು, ಕಂಪೆನಿ ಸೆಕ್ರೇಟರಿಗಳು ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ. ಯಾವುದೇ ವೃತ್ತಿಯಾದರೂ ನಮ್ಮಿಂದ ಸಾಕಷ್ಟು ಬಯಸುತ್ತದೆ.  “ಪರಿಸರ, ಸಾಮಾಜಿಕ ಆಡಳಿತ ಮುಖ್ಯವಾಗಿದ್ದು, ಇದರಲ್ಲಿ ಆಡಳಿತ ವ್ಯವಸ್ಥೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಐಸಿಎಸ್ಐ ಅಧ್ಯಕ್ಷ ಬಿ. ನರಸಿಂಹನ್ ಮಾತನಾಡಿ, ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಂಪೆನಿ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಇದಕ್ಕೆ ಪೂರಕವಾಗಿ ಐಸಿಎಸ್ಐ ನಿಂದ ಕೇಂದ್ರ ಸಾಂಸ್ಥಿಕ ಸಚಿವಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಯಾವ ಯಾವ ವಲಯಗಳಲ್ಲಿ ತಿದ್ದುಪಡಿಯಾಗಬೇಕು ಎಂಬ ಕುರಿತು ಸಮಗ್ರ ವಿವರಗಳನ್ನು ನೀಡಲಾಗಿದೆ. ಇದಲ್ಲದೇ  ಕಂಪೆನಿ ಕಾಯ್ದೆಯ ನಿಯಮಗಳ ಬದಲಾವಣೆಗೂ ಸಹ ವರದಿ ನೀಡಲಾಗಿದೆ ಎಂದರು.

 

ನ್ಯಾಯಾಲಯಗಳಲ್ಲಿ ಹಿಂಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೇ ಉದ್ದೇಶದಿಂದ ಐಸಿಎಸ್ಐ ದೆಹಲಿಯ ನೋಯ್ಡಾದಲ್ಲಿ ಅಂತರರಾಷ್ಟ್ರೀಯ ಮಟ್ಟದ ಮಧ್ಯಸ್ಥಿಕೆ ಕೇಂದ್ರ ತೆರೆದಿದ್ದು, ಬೆಂಗಳೂರಿನಲ್ಲೂ ಪ್ರಾದೇಶಿಕ ಕೇಂದ್ರ ಪ್ರಾರಂಭವಾಗಲಿದೆ. ಹೀಗಾಗಿ ಇನ್ನು ಮುಂದೆ ಕಂಪೆನಿ ಸೆಕ್ರೇಟರಿಗಳು ಯಾವುದೇ ಕಂಪೆನಿಗಳ ಒಪ್ಪಂದದ ಕರಡು ಸಿದ್ಧಪಡಿಸುವ ಸಂದರ್ಭದಲ್ಲಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆಗೆ ಇರುವ ಅವಕಾಶದ ಬಗ್ಗೆಯೂ ಒಂದು ಅಂಶವನ್ನು ಕಡ್ಡಾಯವಾಗಿ ಸೇರ್ಪಡೆ ಮಾಡಬೇಕು. ಕಂಪೆನಿ ಸೆಕ್ರೇಟರಿಗಳಿಗೆ ವಿಪುಲ ಅವಕಾಶಗಳಿದ್ದು, ಇದೀಗ ಬಂದರು ವಲಯದಲ್ಲೂ ಅವಕಾಶದ ಬಾಗಿಲು ತೆರೆಯುತ್ತಿದೆ. ಷೇರು ಮಾರುಕಟ್ಟೆ ವಲಯಗಳಲ್ಲೂ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.

ಐಸಿಎಸ್‌ಐ ಬೆಂಗಳೂರು ಚಾಪ್ಟರ್ ಅಧ್ಯಕ್ಷ ವೆಂಕಟ ಸುಬ್ಬಾರಾವ್ ಕಲ್ವಾ  ಮಾತನಾಡಿ, ಸಾಂಸ್ಥಿಕ ಆಡಳಿತ ವಲಯದಲ್ಲಿ ಕಂಪೆನಿ ಸೆಕ್ರೇಟರಿಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಕಂಪೆನಿ ಮತ್ತು ಪಾಲುದಾರರ ಜೊತೆ ನಿರ್ಣಾಯಕ ಸಮನ್ವಯತೆಯನ್ನು ಸಾಧಿಸುವ ಕೆಲಸವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದರು.

 

ಕಾರ್ಯಕ್ರಮದಲ್ಲಿ ಐಸಿಎಸ್‌ಐ ಉಪಾಧ್ಯಕ್ಷ ಧನಂಜಯ್ ಶುಕ್ಲಾ,  ಎಸ್.ಐ.ಆರ್.ಸಿ. ಕಾರ್ಯದರ್ಶಿ ಮಹದೇವ್ ತಿರುನಗರಿ,  ಎಸ್ಐಆರ್ ಸಿ ಅಧ್ಯಕ್ಷರಾದ ಪ್ರದೀಪ್ ಬಿ ಕುಲಕರ್ಣಿ, ಕೇಂದ್ರೀಯ ಮಂಡಳಿ ಸದಸ್ಯರಾದ ಸಿ. ದ್ವಾರಕಾನಾಥ್, ಎ. ಮೋಹನ್ ಕುಮಾರ್,  ವೆಂಕಟರಾಮನ್ ಆರ್, ಐಸಿಎಸ್ಐ ಕಾರ್ಯದರ್ಶಿ ಆಶೀಶ್ ಮೋಹನ್ ಉಪಸ್ಥಿತರಿದ್ದರು. 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top