ಚಿಕ್ಕಬಳ್ಳಾಪುರದಲ್ಲಿ ಕ್ರಿಕೆಟ್ ಟೂರ್ನಿಗೆ ಚಾಲನೆ

ಕಟ್ಟುಕಥೆ ಸೃಷ್ಟಿಸುವುದು ನಿಂತರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ – ಎಂ.ಎಸ್. ರಕ್ಷಾ ರಾಮಯ್ಯ

ಚಿಕ್ಕಬಳ್ಳಾಪುರ : ಊಹೆ ಮಾಡಿಕೊಂಡು ಕಟ್ಟುಕಥೆ ಕಟ್ಟುವುದನ್ನು ನಿಲ್ಲಿಸಿದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

 

          ಚಿಕ್ಕಬಳ್ಳಾಪುರದಲ್ಲಿ ಸ್ಥಳೀಯ ಆಟಗಾರರು, ವಕೀಲರು, ಮಾಧ್ಯಮ ಪ್ರತಿನಿಧಿಗಳು, ರಾಜಕೀಯ ನೇತಾರರಿಗಾಗಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚೆಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಸಂದರ್ಭದಲ್ಲಿ ಮಾಧ್ಯಮ ಸೇರಿದಂತೆ ಯಾವುದೇ ವಲಯದಿಂದಲೂ ತೀವ್ರ ಪ್ರತಿರೋಧ ವ್ಯಕ್ತವಾಗಿಲ್ಲ. ಆದರೆ ವಿಧಾನಸೌಧದಲ್ಲಿ ನಾಸೀರ್ ಸಾಬ್ ಜಿಂದಾಬಾದ್ ಎಂಬು ಕೂಗಿದ್ದನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ವಿವಾದ ಸೃಷ್ಟಿಸಲಾಗಿದೆ. ತಮ್ಮದೇ ಆದ ರೀತಿಯಲ್ಲಿ ಕಲ್ಪನೆ ಮಾಡಿಕೊಂಡು ಕಟ್ಟುಕಥೆ ಸೃಷ್ಟಿಸಿ ಪ್ರಕರಣಕ್ಕೆ ವಿವಾದದ ಸ್ಪರೂಪ ನೀಡಲಾಗಿದೆ ಎಂದರು.

          ನಮಗೆ ದೇಶ ಮೊದಲು. ಆ ನಂತರ ಉಳಿದದ್ದು. ವಿಧಾನಸೌಧ ಪ್ರಕರಣದ ಬಗ್ಗೆ ಎಫ್.ಎಸ್.ಎಲ್ ನಿಂದ ಧ್ವನಿ ಪರೀಕ್ಷೆ ನಡೆಯುತ್ತಿದ್ದು, ವೈಜ್ಞಾನಿಕ ತನಿಖೆ ಆಗಿ ವರದಿ ಬಂದ ನಂತರ ನಮ್ಮ ಸರ್ಕಾರ ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಸೂಕ್ತ ಕ್ರಮ ಜರುಗಿಸಲಿದೆ. ಇಂತಹ ಪ್ರಕರಣಗಳಲ್ಲಿ ಕಟ್ಟು ಕಥೆ ಕಟ್ಟುವುದನ್ನು ನಿಲ್ಲಿಸಿದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರಯಲಿದೆ ಎಂದು ಹೇಳಿದರು.

 

          ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿದ್ದು, ಯಾವುದೇ ಸಮಸ್ಯೆ ಇಲ್ಲ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತರಿಗೆ ಸೂಕ್ತ ಸ್ಥಾನ ದೊರೆಯಲಿದ್ದು, ಯಾರಿಗೂ ಅನ್ಯಾವಾಗುವುದಿಲ್ಲ. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ.  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆ ಈಗಾಗಲೇ ಈ ಕುರಿತು ಚರ್ಚಿಸಿದ್ದು, ಸ್ಥಳೀಯರಿಗೆ ಅವಕಾಶ ನೀಡಲು  ಸಾಕಷ್ಟು ಕಾರ್ಯಕ್ರಮಗಳಿವೆ. ಮೂರ್ನಾಲ್ಕು ದಿನಗಳಲ್ಲಿ ಸೂಕ್ತ ತೀರ್ಮಾನ ಹೊರ ಹೊಮ್ಮಬಹುದು ಎಂದು ಎಂ.ಎಸ್. ರಕ್ಷಾ ರಾಮಯ್ಯ ಆಶಯ ವ್ಯಕ್ತಪಡಿಸಿದರು. 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top