ದೇವನಹಳ್ಳಿ ,ಜನವರಿ,,18 : ಪಟ್ಟಣದ ಜೂನಿಯರ್ ಕಾಲೇಜಿನ ಮುಂಭಾಗದಲ್ಲಿರುವ ಖಾಸಗಿ ಕ್ಲಿನಿಕ್ ವೈದ್ಯ ಡಾ.ರಾಜಕುಮಾರ್ ಅವರ ಮನೆಗೆ ಸೋಮವಾರ ರಾತ್ರಿ 8:45 ರ ಸಮಯಕ್ಕೆ 4 ಮಂದಿ ಅಪರಿಚಿತರು ಮನೆಗೆ ನುಗ್ಗಿ ಮನೆಯಲ್ಲಿದ್ದವರಿಗೆ ಗನ್ ಹಾಗೂ ಚಾಕು ತೋರಿಸಿ , ಚಿನ್ನ ಹಾಗೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಹೆಚ್ಚು ಜನಸಂದಣಿ ಇದ್ದರೂ ಮನೆಗೆ ನುಗ್ಗಿರುವ ದುಷ್ಕರ್ಮಿಗಳು , ಮನೆಯಲ್ಲಿದ್ದ ವೈದ್ಯನ ಪತ್ನಿ , ಪುತ್ರಿ , ಹಾಗೂ ಮೊಮ್ಮಗನಿಗೆ ಗನ್ ತೋರಿಸಿ , ವೈದ್ಯರ ಪತ್ನಿ ಬಳಿಯಿದ್ದ 60 ಗ್ರಾಂ ಚಿನ್ನದ ಸರ , ಪುತ್ರಿಯ ಕತ್ತಿನಲ್ಲಿದ್ದ 90 ಗ್ರಾಂ ಚಿನ್ನದ ಸರ, ಬಳೆಗಳು ಹಾಗೂ 5 ಸಾವಿರ ರೂ ನಗದು ಕಸಿದು, ಪರಾರಿಯಾಗಿದ್ದಾರೆ. ಮಾಸ್ಕ್ ಧರಿಸಿಕೊಂಡು ಮನೆಯೊಳಗೆ ನುಗ್ಗಿದ್ದ ಮೂರು ಮಂದಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಮಾತನಾಡುತ್ತಿದ್ದರು. ಹಣ ಎಷ್ಟಿದೆ ಕೊಡಿ ಎಂದು ಒತ್ತಾಯಿಸಿದರು. ಜೋರಾಗಿ ಕೂಗಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದರು . ಸಿನಮೀಯ ರೀತಿಯಲ್ಲಿ ಗನ್ ಹಾಗೂ ಚಾಕು ತೋರಿಸಿ ಪರಾರಿಯಾದರು ಎಂದು ಕುಟುಂಬದವರು ಘಟನೆಯ ಕುರಿತ ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.
![](http://www.kannadanadunews.in/wp-content/uploads/2022/01/WhatsApp-Image-2022-01-18-at-2.14.06-PM-1024x665.jpeg)
ಅಪರಿಚಿತರ ಚಹರೆಗಳ ಕುರಿತು ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಎಸ್ ಪಿ ವಂಶಿಕೃಷ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿ, ರಾತ್ರಿ 8 , 8:30 ರ ಸಮಯವಾದ್ದರಿಂದ ವೈದ್ಯರ ಮೊಮ್ಮಗ ಲ್ಯಾಬ್ ಸಿಬ್ಬಂದಿಯವರು ಸಾಮಾನ್ಯವಾಗಿ ಬಂದಿರುವ ಸಮಯ ಎಂದು ಮನೆ ಬಾಗಿಲು ತೆಗೆದಿದ್ದಾನೆ. ಆದರೆ ಅಚಾನಕ್ಕಾಗಿ ಗನ್ ತೋರಿಸಿ ಒಳ ನುಗ್ಗಿದ ದರೋಡೆಕೋರರು ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರ, ಕೈಯಲ್ಲಿದ್ದ ಬಳೆಗಳು, ಕೈಬೆರಳಿನಲ್ಲಿ ಇದ್ದ ಉಂಗುರ, 5 ಸಾವಿರ ಹಣ ಕಸಿದು ತಕ್ಷಣ ಪರಾರಿಯಾಗಿದ್ದಾರೆ. ರಾತ್ರಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದು, ಕಳ್ಳರ ಚಹರೆ ಗುರುತಿಸಲು ಚಿತ್ರ ಬಿಡಿಸುವವರು ಇಂದು ಬರಲಿದ್ದಾರೆ. ಇಂತಹ ಸರಗಳ್ಳರ ಗುಂಪನ್ನು ಈ ಹಿಂದೆ ಹಿಡಿದು ಬಂಧಿಸಿದ್ದು, ನಮ್ಮ ತಂಡ ಚುರುಕಾಗಿ ಕೆಲಸ ಮಾಡಿ ಈ ಪ್ರಕರಣವನ್ನು ಶೀಘ್ರವಾಗಿ ಬೇಧಿಸಲಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಇರುವುದನ್ನು ಪರಿಶೀಲಿಸಲಾಗುತ್ತಿದೆ. ದೇವನಹಳ್ಳಿ ಅಥವಾ ಸುತ್ತಮುತ್ತ ಇಂತಹ ಪ್ರಕರಣ ಸಂಭವಿಸಿರುವ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
![](http://www.kannadanadunews.in/wp-content/uploads/2022/01/WhatsApp-Image-2022-01-18-at-2.14.07-PM-1024x461.jpeg)
ಕೋಟ್:
” ಕಳೆದ ಬಾರಿ 13 ಸರಗಳ್ಳತನದ ಪ್ರಕರಣ ಬೇಧಿಸಿದ್ದು, ಅದರಲ್ಲಿ ವಿಜಯಪುರ ಮತ್ತು ಚನ್ನರಾಯಪಟ್ಟಣ ದಲ್ಲಿ ಆದ ಪ್ರಕರಣಗಳನ್ನು ಕಂಡು ಹಿಡಿದು ಕಳ್ಳರನ್ನು ಬಂಧಿಸಿದ್ದೇವೆ. ನಮ್ಮ ತಂಡ ಕಳ್ಳರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಕರಣದ ಆರೋಪಿಗಳು ಶೀಘ್ರ ಪತ್ತೆಯಾಗುವ ಭರವಸೆ ಇದೆ.”
- ವಂಶಿಕೃಷ್ಣ, ಎಸ್ ಪಿ, ಬೆಂಗಳೂರು ಗ್ರಾಮಾಂತರ