ಪಕ್ಷದ ವತಿಯಿಂದ ರೂ 1 ಲಕ್ಷ ಪರಿಹಾರದ ಚೆಕ್ ವಿತರಣೆ.
ಕಲ್ಬುರ್ಗಿ: ಇತ್ತೀಚಿಗೆ ಅಕ್ರಮ ಮರುಳು ಸಾಗಾಣಿಕೆ ಮಾಡುತ್ತಿದ್ದ ಟ್ರಾಕ್ಟರ್ ಗೆ ಸಿಲುಕಿ ಸಾವನ್ನಪ್ಪಿರುವ ನೆಲೋಗಿ ಪೊಲೀಸ್ ಠಾಣೆ ಮುಖ್ಯ ಪೇದೆ ಮಯೂರ ಅವರ ಕುಟುಂಬ ವರ್ಗದವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚವಡಾಪುರ ತಾಂಡಾದ ಅವರ ನಿವಾಸದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರೂ 1 ಲಕ್ಷ ಪರಿಹಾರದ ಚೆಕ್ ವಿತರಿಸಿದರು.
ಸರ್ಕಾರದ ವತಿಯಿಂದ ರೂ 30 ಲಕ್ಷ ಪರಿಹಾರ ಹಾಗೂ ಮೃತ ಮಯೂರ ಅವರ ಸಂಬಳ ಹಾಗೂ ಇತರೆ ಸೌಲಭ್ಯ ಸೇರಿದಂತೆ ರೂ 40 ಲಕ್ಷ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಪೇದೆಯ ಕುಟುಂಬ ವರ್ಗದವರಿಗೆ ಸರಕಾರಿ ನೌಕರಿ ನೀಡಲು ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಮೃತ ಪೇದೆಯ ಕುಟುಂಬ ವರ್ಗದವರಿಗೆ ಭರವಸೆ ನೀಡಿದರು.
![](https://kannadanadunews.in/wp-content/uploads/2023/06/WhatsApp-Image-2023-06-20-at-13.02.20-1024x576.jpg)
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಈ ಹಿಂದಿನ ಸರಕಾರದದಲ್ಲಿ ನೇಮಕವಾದ ಅಧಿಕಾರಿಗಳು ಅಕ್ರಮ ಮರುಳು ಸಾಗಾಣಿಕೆ, ಜೂಜು ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ತನಿಖೆ ನಡೆಸಿ ಅಂತವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮ ಮರುಳು ಸಾಗಾಣಿಕೆ ಮಾಡುವವರು ರಾಜಕೀಯ ಪಕ್ಷಗಳ ಜೊತೆ ನಂಟು ಹೊಂದಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಪ್ರಕರಣದಲ್ಲಿ ಬಂಧಿಸಲಾದ ಆರೋಪಿ ಯಾವ ಪಕ್ಷದ ನಾಯಕರೊಂದಿಗೆ ಇದ್ದಾನೆ ಅವರೇ ಈಗ ಉತ್ತರಿಸಲಿ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ ವೈ ಪಾಟೀಲ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.