5 ಕೋಟಿ ವೆಚ್ಚದಲ್ಲಿ ಅಲೆಮಾರಿ ಭವನ ನಿರ್ಮಾಣಕ್ಕೆ ಸಚಿವ ಬಿ.ನಾಗೇಂದ್ರ ಭರವಸೆ

ಬಳ್ಳಾರಿ: ಜಿಲ್ಲೆಯಲ್ಲಿನ ಅಲೆಮಾರಿ ಜನಾಂಗದವರ ಸಾಮಾಜಿಕ, ಸಾಂಸ್ಕøತಿಕ ಹಾಗೂ ಇತರೆ ಚಟುವಟಿಕೆಳಿಗಾಗಿ 5 ಕೋಟಿ ರೂ.ವೆಚ್ಚದಲ್ಲಿ ಸರ್ಕಾರದಿಂದ ಅಲೆಮಾರಿ ಭವನ ನಿರ್ಮಿಸಿಕೊಡುವುದಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಭರವಸೆ ನೀಡಿದರು.

 

ಇಲ್ಲಿನ ವಾಲ್ಮೀಕಿ ಭವನದಲ್ಲಿ ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ., ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ `ಅಲೆಮಾರಿ ಜಾಗೃತಿ ಸಮಾವೇಶಉದ್ಘಾಟಿಸಿ ಮಾತನಾಡಿದ ಅವರು, 1 ಎಕರೆ ಸರ್ಕಾರಿ ಸ್ಥಳದಲ್ಲಿ ಭವನ ನಿರ್ಮಿಸುವುದಾಗಿ ಹೇಳಿದರು. ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಎಲ್ಲೆಲ್ಲಿ ಸರ್ಕಾರದ ಜಾಗ ಇರುತ್ತೋ ಅಲ್ಲಲ್ಲಿ ಗುರುತಿಸಿ ನಿವೇಶ ಒದಗಿಸುವುದಾಗಿ ಹೇಳಿದರು. ವಸತಿ ಇದ್ದು, ಮನೆ ಕಟ್ಟಲು ಸಾಧ್ಯವಾಗದೇ ಇರುವವರಿಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದರು. ಸಂವಿದಾನಶಿಲ್ಪಿ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಸರ್ಕಾರದಿಂದ ಅಲೆಮಾರಿಗಳಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತೇನೆ. ಯಾವುದೇ ಸಂದರ್ಭದಲ್ಲಿ ನಿಮ್ಮ ಜೊತೆಗೆ ಇದ್ದು, ನಿಮ್ಮೆಲ್ಲರ ಸಬಲೀಕರಣಕ್ಕಾಗಿ ಶ್ರಮಿಸುತ್ತೇನೆ ಎಂದರು. 

ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಅಲೆಮಾರಿಗಳ ಪರಂಪರೆ ಮುಂದುವರಿಸಿಕೊಂಡು ಹೋಗುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಏನೇ ಇದ್ದರೂ ಅದನ್ನು ಶಾಸಕನಾಗಿ ನಿಮಗೆ ಪೂರೈಸಿಕೊಡುತ್ತೇನೆ ಎಂದರು.

ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಅಲೆಮಾರಿಗಳೊಂದಿಗೆ ನಾನು ಇರುತ್ತೇನೆ. ಗುಡಾರ ನಗರದಲ್ಲಿರುವ ಎಲ್ಲರಿಗೂ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳಿದರು.

 

ಮಾಜಿ ಸಂಸದ ವಿಎಸ್ ಉಗ್ರಪ್ಪ ಮಾತನಾಡಿ, ಅಲೆಮಾರಿಗಳು ಮೊದಲಿನಂತಿಲ್ಲ. ಅವರು ಕೂಡ ಒಂದೆಡೆ ನೆಲೆ ನಿಲ್ಲಲು ಶ್ರಮಿಸುತ್ತಿದ್ದಾರೆ. ಅಲೆಮಾರಿಗಳ ಸಾಮಾಜಿಕ ಜೀವನದಲ್ಲಿ ನಾವು ಕೂಡ ನಿಲ್ಲುತ್ತೇವೆ. ನಿಮ್ಮೆಲ್ಲರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಿದ್ಧರಿದ್ದೇವೆ. ಸಂವಿಧಾನದ ಮಟ್ಟದಲ್ಲಿ ಅಲೆಮಾರಿಗಳಿಗೆ ಸಿಗುವ ಸೌಲಭ್ಯಗಳಿಗೆ ಅಗತ್ಯ ನೆರವು ನೀಡುತ್ತೇವೆ ಎಂದರು. 

ಕರ್ನಾಟಕ ಎಸ್.ಸಿ., ಎಸ್.ಟಿ., ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಲೆಮಾರಿಗಳು ಜಾಗೃತರಾಗಬೇಕು. ಶಿಕ್ಷಣವಂತರಾಗಬೇಕು. ಎಲ್ಲರೂ ಒಗ್ಗೂಡಿ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರಗಳ ಕಣ್ಣು ತೆರೆಸಬೇಕು. ಅಲೆಮಾರಿಗಳಿಗೆ ನಿವೇಶನ, ವಸತಿ ಸೌಕರ್ಯದ ಜೊತೆಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

 

ವೇದಿಕೆಯ ಮೇಲೆ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಶ್ವೇತಾ ಸೋಮು, ಕಾಂಗ್ರೆಸ್ ಪಕ್ಷದ ಧುರೀಣರಾದ ಕಲ್ಲುಕಂಬ ಪಂಪಾಪತಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯ ಸಮಿತಿಯ ರಾಜ್ಯಾಧ್ಯಕ್ಷ ಶೇಷಪ್ಪ, ಕರ್ನಾಟಕ ರಾಜ್ಯ ಎಸ್.ಸಿ., ಎಸ್.ಟಿ., ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ಕೆ.ವೀರೇಶ್, ಅಲೆಮಾರಿ ಸಮುದಾಯಗಳ ಮುಖಂಡರಾದ ರಾಮಾಂಜಿನಿ, ಗೋವಿಂದ, ವೀರೇಶ್, ಜಂಬುನಾಥ, ಮಹೇಶ್ ಮತ್ತು ರಂಗಯ್ಯ ಸೇರಿದಂತೆ ಅನೇಕರು ಇದ್ದರು.

Facebook
Twitter
LinkedIn
Telegram
Pocket
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top