ಎಲ್ಲರು ಸೆರೀ ನನ್ನ ಜೀವನ ಹಾಳು ಮಾಡಿದ್ದಾರೆ !
ಕನ್ನಡ ಚಿತ್ರರಂಗದಲ್ಲಿ ಮಿಂಚಿನ ಓಟಕ್ಕೆ ಸಜ್ಜಾಗಿದ್ದವರು ಮಡೆನೂರು ಮನು. ಅದಕ್ಕೆ ವೇದಿಕೆ ಕೂಡ ಸಜ್ಜಾಗಿತ್ತು. ಆ ಕಾಲ ಕೂಡ ಕೂಡಿ ಬಂದಿತ್ತು. ಮೊದಲ ಚಿತ್ರ ಕೂಡ ಬಿಡುಗಡೆ ಆಯ್ತು. ಆದರೆ.. ವಿಪರ್ಯಾಸ ಅದೇ ಮಿಂಚಿನ ಹೊಡೆತಕ್ಕೆ ನರಳಿ ಮಡೆನೂರು ಮನು ಪರಪ್ಪನ ಅಗ್ರಹಾರದ ಪಾಲಾದರು. ತನ್ನದೇ ಚಿತ್ರವನ್ನು ಬೆಳ್ಳಿತೆರೆಯ ಮೇಲೆ ನೋಡುವ ಅವಕಾಶದಿಂದ ಮಡೆನೂರು ಮನು ವಂಚಿತರಾದರು.
ಮಡೆನೂರು ಮನು ಜೊತೆ ಮೂರೊತ್ತು ರೀಲ್ಸ್ ಮಾಡ್ತಿದ್ದ ಚೆಲುವೆಯೇ ಚಿತ್ರದ ಬಿಡುಗಡೆಯ ಹಿಂದಿನ ದಿನ ತಿರುಗಿ ಬಿದ್ದರು. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬಲವಂತದ ಗರ್ಭಪಾತ , ಬೆದರಿಕೆ ಆರೋಪಗಳನ್ನು ಮಾಡಿದರು. ಮಡೆನೂರು ಮನುವನ್ನು ಜೈಲಿಗೆ ಕೂಡ ಕಳುಹಿಸಿದರು
ಈಗ ವನವಾಸ ಮುಗಿಸಿಕೊಂಡು ಮಡೆನೂರು ಮನು ಮರಳಿ ಬಂದಿದ್ದಾರೆ. ಜಾಮೀನಿನ ಮೇಲೆ ಜೈಲಿಂದ ಹೊರಗಡೆ ಬಂದಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮನದ ನೋವನ್ನು ಕೂಡ ಹಂಚಿಕೊಂಡಿರುವ ಮನು ಪಕ್ಕಾ ಪ್ಲ್ಯಾನ್ ಮಾಡಿ ನನ್ನನ್ನು ಮುಗಿಸಿದರು ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಮಡೆನೂರು ಮನು ನಾನು ಸಾಮಾನ್ಯ ಹಳ್ಳಿ ಹುಡುಗ. ಮೂರು ವರ್ಷಗಳ ಕಾಲ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿದ್ದೇ ಆದರೆ ನನ್ನ ಜೊತೆಯಲ್ಲಿದ್ದವರೆ ಕೇಸ್ ಮಾಡಿದರು. ಇನ್ನೂ ಮೇಲೆಳದಂತೆ ಪಕ್ಕಾ ಪ್ಲಾನ್ ಮಾಡಿಕೊಂಡು ನನ್ನ ಮುಗಿಸಿದರು ಎಂದು ಹೇಳಿದ್ದಾರೆ. ಇನ್ನು, ಎಲ್ಲರಿಗೆ ಗೊತ್ತಿರುವಂತೆ ಮಡೆನೂರು ಮನು ಅವರದ್ದೆನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು. ಶಿವಣ್ಣ, ದರ್ಶನ್ ಮತ್ತು ಧ್ರುವಾ ಸರ್ಜಾ ಕುರಿತು ಕೀಳು ಮಟ್ಟದಲ್ಲಿ ಮಾತನಾಡಲಾದ ಆಡಿಯೋ ಅದು.
ಆ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಅನೇಕರು ಅಯ್ಯೋ ಪಾಪಾ ಎನ್ನುತ್ತಿದ್ದವರೆಲ್ಲ ಮಡೆನೂರು ಮನು ವಿರುದ್ಧ ಕೆರಳಿ ಕೆಂಡವಾಗಿದ್ದರು. ಮಡೆನೂರು ಮನುನ ಚಿತ್ರರಂಗದಿಂದ ಮಾತ್ರವಲ್ಲ ಕಿರುತೆರೆಯಿಂದಲೇ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು. ಮಡೆನೂರು ಮನು ವಿಚಾರಕ್ಕೆ ಸಭೆ ಮೇಲೆ ಸಭೆ ಮಾಡಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಡೆನೂರು ಮನು ಅವರ ವಿರುದ್ಧ ಅಸಹಕಾರ ಚಳುವಳಿಯನ್ನು ಕೂಡ ಘೋಷಿಸಿತು.
ಇದೇ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಕೂಡ ನೀಡಿರುವ ಮಡೆನೂರು ಮನು ಆ ಆಡಿಯೋ ಕೇಳಿದರೆ ನನ್ನ ಮೈಯೆಲ್ಲ ಉರಿಯುತ್ತಿದೆ ಎಂದು ಹೇಳಿದ್ದಾರೆ. ಆ ಆಡಿಯೋ ನನ್ನದಲ್ಲ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಮಡೆನೂರು ಮನು ನಾನು ಜೈಲು ಪಾಲಾಗುವ ಮುನ್ನ ನನಗೆ ಕರೆ ಮಾಡಿದ್ದರು. ನೀನು ಅತ್ಯಾಚಾರದ ಪ್ರಕರಣದಲ್ಲಿ ತಪ್ಪಿಸಿಕೊಂಡು ಹೊರ ಬಂದರೆ ನಿನ್ನ ವಿರುದ್ಧ ನಾವು ಇನ್ನೊಂದು ಪ್ಲ್ಯಾನ್ ಮಾಡಿದ್ದೇವೆ ಎಂದರು. 50,000 ಖರ್ಚು ಮಾಡಿ ಆಡಿಯೋ ರೆಡಿ ಮಾಡಿದ್ದೇವೆ ಅಂದರು ಎಂದು ಹೇಳಿದ್ದಾರೆ.
ನಾನು ಹೀಗೆಲ್ಲ ಯಾಕೆ ಮಾಡ್ತಿದ್ದೀರಾ ? ನನ್ನ ಜೀವನ ಹಾಳು ಮಾಡಬೇಡಿ ಎಂದು ಅವರಲ್ಲಿ ಪರಿಪರಿಯಾಗಿ ಕೇಳಿಕೊಂಡರು ಕೂಡ ಅವರು ಎಲ್ಲ ಸೇರಿ ಹೀಗೆ ಮಾಡಿದರು ಎಂದು ಹೇಳಿರುವ ಮಡೆನೂರು ಮನು ನಾನು ನನ್ನನ್ನು ಸಾಬೀತು ಮಾಡಲು ಹೋಗಲ್ಲ ಯಾಕೆಂದರೆ ಇವನು ತಪ್ಪು ಮಾಡಿದಾನೆ ಅದಕ್ಕೆ ತನ್ನದು ತಪ್ಪಿಲ್ಲ ಎಂದು ಪ್ರೂವ್ ಮಾಡಲು ಬಂದಿದ್ದಾನೆ ಎಂದು ಅಂದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮುಂದುವರೆದು ಕುಲದಲ್ಲಿ ಕೀಳ್ಯಾವುದು ಚಿತ್ರದ ಶೀರ್ಷಿಕೆಯನ್ನು ನಮಗೆ ಶಿವಣ್ಣ ಕೊಟ್ಟಿದ್ದು ನಮ್ಮ ಚಿತ್ರದ ಫೋಸ್ಟರ್ನ ಧ್ರುವಾ ಸರ್ಜಾ ಅವರು ಬಿಡುಗಡೆ ಮಾಡಿದ್ದು ಅವರ ಬಗ್ಗೆ ನಾನ್ಯಾಕೇ ಮಾತನಾಡಲಿ ಎಂದು ಹೇಳಿರುವ ಮಡೆನೂರು ಮನು, ಶಿವಣ್ಣ, ಧ್ರುವ ಸರ್ಜಾ ಮತ್ತು ದರ್ಶನ್ ಅವರನ್ನು ಖುದ್ದು ಭೇಟಿ ಮಾಡಿ ನಡೆದ ಸಂಗತಿಗಳನ್ನೆಲ್ಲ ವಿವರಿಸುತ್ತೇನೆ ಎಂದು ಹೇಳಿದ್ದಾರೆ. ದುಡ್ಡು ನನ್ನ ಹತ್ರ ಇದ್ದಿದ್ದರೆ ಆ ಆಡಿಯೋ ನನ್ನದಲ್ಲ ಎಂದರೆ ಎಲ್ಲರು ನಂಬ್ತಾರೆ, ಆದರೆ ನಾನು ಬಡವ ನನ್ನ ಹತ್ರ ದುಡ್ಡಿಲ್ಲ ಅದಕ್ಕೆ ನನ್ನ ಮಾತುಗಳನ್ನು ಯಾರು ನಂಬುತ್ತಿಲ್ಲ ಎಂದು ಹೇಳಿದ್ದಾರೆ.ಸರಿಯಾದ ಸಮಯ ಸಂದರ್ಭ ಬಂದಾಗ ಎಲ್ಲ ಸತ್ಯವನ್ನು ಬಹಿರಂಗಗೊಳಿಸುತ್ತೇನೆ ಎಂದು ಕೂಡ ಮಡೆನೂರು ಹೇಳಿದ್ದಾರೆ. ಇದರ ನಡುವೆ ನನ್ನ ವಿರುದ್ಧ ಪ್ರತಿ ಹಂತದಲ್ಲಿಯು ಷಡ್ಯಂತ್ರ ನಡೆಯಿತು ಎಂದಿರುವ ಮಡೆನೂರು ಮನು ಸಿನಿಮಾ ಬಿಡುಗಡೆಯಾಗುವ ಮೊದಲು ಕುಣಿಗಲ್ ಬಳಿ ನನ್ನ ಮೇಲೆ ಮೊಟ್ಟೆ ಹೊಡೆದ್ರು. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ನಾನು ಎಲ್ಲವನ್ನು ಸಹಿಸಿಕೊಂಡೆ ಎಂದು ಹೇಳಿದ್ದಾರೆ.