ಕುಮಾರಸ್ವಾಮಿ ಅವರು ಅನವಶ್ಯಕವಾಗಿ ತಮ್ಮ ಕುಟುಂಬದ ಒಳ ಜಗಳವನ್ನು ಕಾಂಗ್ರೆಸ್‌ ಪಕ್ಷ, ಡಿ.ಕೆ.ಶಿವಕುಮಾರ್ , ಸಿಎಂ ಸಿದ್ದರಾಮಯ್ಯ ಅವರ ಮೇಲೆ ಹಾಕುತ್ತಿದ್ದಾರೆ : ರಮೇಶ್‌ ಬಾಬು

ಪೆನ್‌ ಡ್ರೈವ್‌ ವಿಚಾರ ಕುಮಾರಸ್ವಾಮಿ ಹಾಗೂ ಬಿಜೆಪಿಯ ಎಲ್ಲಾ ನಾಯಕರಿಗೆ ಮೊದಲೇ ತಿಳಿದಿತ್ತು. ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಕೂಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು. 

ಕುಮಾರಸ್ವಾಮಿ ಅವರು ಅನವಶ್ಯಕವಾಗಿ ತಮ್ಮ ಕುಟುಂಬದ ಒಳ ಜಗಳವನ್ನು ಕಾಂಗ್ರೆಸ್‌ ಪಕ್ಷ, ಡಿ.ಕೆ.ಶಿವಕುಮಾರ್ , ಸಿಎಂ ಸಿದ್ದರಾಮಯ್ಯ ಅವರ ಮೇಲೆ ಹಾಕುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಇವರ ಹೆಸರು ತರುವುದು ಬೇಡ. ತನಿಖೆಯ ಹಾದಿ ತಪ್ಪಿಸುವುದು ಬಿಟ್ಟು ತನಿಖೆ ಪೂರಕವಾಗಿ ನಡೆದುಕೊಳ್ಳಿ. ವಾಸ್ತವತೆಯ ಬಗ್ಗೆ ಮಾತನಾಡಿ.

ಬಿಜೆಪಿಗೆ ಜೆಡಿಎಸ್‌ ಮೇಲೆ ಇರುವ ಕೋಪವನ್ನು ಈ ರೀತಿಯಾಗಿ ತೀರಿಸಿಕೊಳ್ಳುವ ಕೆಲಸ ನಡೆದಿದೆ. ಹುಣಸೂರಿನಿಂದ ಪ್ರಜ್ವಲ್‌ ಅವರು ಸ್ಪರ್ಧಿಸಬೇಕು ಎನ್ನುವ ಚರ್ಚೆ ಬಂದಾಗ ʼನಮ್ಮ ಪಕ್ಷದಲ್ಲಿ ಸೂಟ್‌ ಕೇಸ್‌ ಸಂಸ್ಕೃತಿ ಇದೆ ಅದು ಹೋಗುವ ತನಕ ಇದೆಲ್ಲಾ ನಿಲ್ಲುವುದಿಲ್ಲʼ ಎಂದಿದ್ದರು. ಈ ಕಾರಣಕ್ಕೆ ರೇವಣ್ಣ ಮತ್ತು ಕುಮಾರಸ್ವಾಮಿ ಕುಟುಂಬದ ನಡುವೆ ಅಸಮಾಧಾನ ಹೊತ್ತಿಕೊಂಡಿತು.

 

ಭವಾನಿ ರೇವಣ್ಣ ಅವರು ಸಹ ಕೆ.ಆರ್‌.ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದಾಗ ಕುಮಾರಸ್ವಾಮಿ ಅವರು ಅವಕಾಶ ಕೊಡಲಿಲ್ಲ. ಮತ್ತೆ ಭವಾನಿ ರೇವಣ್ಣ ಅವರು ಹಾಸನದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದಾಗ ಕುಮಾರಸ್ವಾಮಿ ಎಂಥೆಂತಾ ಮಾತುಗಳನ್ನು ಆಡಿದರು. ಆರ್‌. ಆರ್ ನಗರದಿಂದಲೂ ಪ್ರಜ್ವಲ್‌ ಸ್ಪರ್ಧೆ ಮಾಡುತ್ತೇನೆ ಎಂದಾಗಲೂ ಅಸಮಾಧಾನ ಹೆಚ್ಚಾಗಿತ್ತು. ಇದು ಕುಟುಂಬಗಳ ಮಧ್ಯದ ಪೈಪೋಟಿ.

ನಮ್ಮ ಕುಟುಂಬದಿಂದ ನಾನು ಮತ್ತು ರೇವಣ್ಣ ಇಬ್ಬರೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು. ಆವರೇ ಎರಡು ಕಡೆ ಸ್ಪರ್ಧೆ ಮಾಡಿ ನಂತರದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದರು. ಇಲ್ಲಿಂದ ಕುಟುಂಬದಲ್ಲಿ ಆಂತರಿಕ ಕಿತ್ತಾಟ ಹೆಚ್ಚಾಯಿತು. ಇದೆಲ್ಲಾ ಕಾರಣಕ್ಕೆ ದೇವೇಗೌಡರು ಹಾಸನವನ್ನು ಪ್ರಜ್ವಲ್‌ ಅವರಿಗೆ ಬಿಟ್ಟುಕೊಟ್ಟರು. ನಂತರದ ಬೆಳವಣಿಗೆಗಳು ಎಲ್ಲರಿಗೂ ತಿಳಿದೇ ಇದೆ.

ಮಂಗಳವಾರ ಮಾತನಾಡಿದ್ದ ಕುಮಾರಸ್ವಾಮಿ ಅವರು ಪೆನ್‌ ಡ್ರೈವ್‌ ಹಂಚಿಕೆ ಹಿಂದೆ ಡಿ.ಕೆ.ಶಿವಕುಮಾರ್‌ ಅವರು ಇದ್ದಾರೆ ಎನ್ನುವ ಹತಾಶೆಯ ಹೇಳಿಕೆ ಕೊಟ್ಟಿದ್ದಾರೆ. ಏಕೆಂದರೆ ಮಂಗಳವಾರ ಬೆಳಿಗ್ಗೆ ಅಮಿತ್‌ ಶಾ ಅವರು ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಹಾಗು ಯಡಿಯೂರಪ್ಪ ಅವರ ಜೊತೆಗೂ ಮಾತನಾಡಿ ʼಈ ಘಟನೆಯಿಂದ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಹಾನಿಯಾಗಿದೆ. ಈ ಪ್ರಕರಣವನ್ನು ನೀವೇಕೆ ಮೊದಲೇ ಸರಿ ಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರು ಈ ಘಟನೆಯಿಂದ ವಿಚಲಿತ ಹಾಗೂ ಹತಾಶರಾಗಿದ್ದಾರೆ. ಇದರಿಂದ ಕಂಡಕಂಡವರ ಮೇಲೆ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿದರು. ಆದರೆ ಸಿಎಂ ಅವರು ಪ್ರಕರಣ ಸಾರ್ವಜನಿಕ ಚರ್ಚೆಗೆ ಬಂದ ತಕ್ಷಣ ತನಿಖೆಗೆ ಆದೇಶ ಮಾಡಿದ್ದಾರೆ.

ಇದನ್ನೂ ಪ್ರಶ್ನೆ ಮಾಡಿರುವ ಕುಮಾರಸ್ವಾಮಿ ಅವರು ಮೋದಿ ಅವರು ಸಹಾಯ ಮಾಡಿದರು ಎನ್ನುವ ದಾಟಿಯಲ್ಲಿ ಮಾತನಾಡಿದ್ದಾರೆ. ಇದೆಲ್ಲಾ ಕುಮಾರಸ್ವಾಮಿ ಅವರ ಕಟ್ಟುಕತೆ ಮತ್ತು ಕೆಳಮಟ್ಟದ ಹೇಳಿಕೆಗಳು. ಡಿ.ಕೆ.ಶಿವಕುಮಾರ್‌ ಹಂಚಿಕೆಯ ಹಿಂದೆ ಇದ್ದಾರೆ ಎಂದು ಹೇಳಿರುವುದು ಹತಾಶ ಮನೋಭಾವದ ಮುಂದುವರೆದ ಭಾಗ.

ಕುಮಾರಸ್ವಾಮಿ ಅವರು ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿಲ್ಲ. ಪ್ರೀತಂ ಗೌಡ, ದೇವರಾಜೇಗೌಡ ಭೇಟಿ ಮಾಡಿದ್ದರು ಎನ್ನುವ ಸವಾಲಿಗೆ ಉತ್ತರ ನೀಡಿಲ್ಲ. ಇದಕ್ಕೆ ಕುಮಾರಸ್ವಾಮಿ ಅವರು ಮಾತ್ರ ಉತ್ತರ ನೀಡಬೇಕಾಗಿಲ್ಲ. ವಿಜಯೇಂದ್ರ, ಆರ್‌. ಅಶೋಕ ಅವರು ಉತ್ತರಿಸಬೇಕು.

ಬಿಜೆಪಿ ಮುಖಂಡ ದೇವರಾಜೇಗೌಡರು ಕಳೆದ ಎರಡು- ಮೂರು ವರ್ಷಗಳಿಂದ ದೇವೇಗೌಡರ ಕುಟುಂಬದ ಅವ್ಯವಹಾರಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೋರಾಟ ಮಾಡುತ್ತಿದ್ದಾರೆ. ಪೆನ್‌ ಡ್ರೈವ್ ಪ್ರಕರಣದ ಬಗ್ಗೆ ಯಾವ ಮಾಹಿತಿಯನ್ನು ಬಿಡುಗಡೆ ಮಾಡಬಾರದು ಎಂದು ಈ ಮೊದಲೇ ಪ್ರಜ್ವಲ್‌ ರೇವಣ್ಣ ಸಂಧಾನ ಮಾಡಿದ್ದರು.

2023 ಡಿಸೆಂಬರ್‌ 8 ರಂದು ದೇವರಾಜೇಗೌಡರು ಪ್ರಜ್ವಲ್‌ ರೇವಣ್ಣ ಅವರ ಸಿಡಿ ಇದೆ ಇದರ ಬಗ್ಗೆ ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದರು. ಹಾಸನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ನನ್ನ ಬಳಿ ಸಿಡಿ ಇದೆ ಯಾವಾಗ ಬೇಕಾದರೂ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರು.

ಎಲ್ಲಾ ವಿಚಾರಗಳು ಗೊತ್ತಿದ್ದ ಬಿಜೆಪಿ ನಾಯಕರು ಏಕೆ ಈ ವಿಚಾರದಲ್ಲಿ ಮೌನವಾಗಿದ್ದಾರೆ. ಆರ್.ಆಶೋಕ್, ವಿಜಯೇಂದ್ರ ಅವರಿಗೂ ಈ ವಿಚಾರ ಗೊತ್ತಿತ್ತು. ಪ್ರೀತಂಗೌಡ ಅವರು ಜೆಡಿಎಸ್‌ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದಾಗ ಕುಮಾರಸ್ವಾಮಿ ಮನೆಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಾರೆ.

 ಮಹಿಳೆಯರ ಜೀವದ ಪ್ರಶ್ನೆ ಇಲ್ಲಿದೆ. ಇದರಿಂದ ಸಾವಿರಾರು ಮಹಿಳೆಯರ ಘನತೆಗೆ ಪೆಟ್ಟಾಗಿದೆ. ಕುಮಾರಸ್ವಾಮಿ ಅವರೇ ಈ ಪ್ರಕರಣದ ಬಗ್ಗೆ ಪಶ್ಚಾತ್ತಾಪ ಪಡಬೇಕು. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುತ್ತೇನೆ ಎಂದ ಹಾಸನ ಜಿಲ್ಲಾಧಿಕಾರಿ ಮಾತಿಗೂ ಕುಮಾರಸ್ವಾಮಿ ಹತಾಶೆಯಿಂದ ಉತ್ತರಿಸುತ್ತಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top