ಬೆಂಗಳೂರು : ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದಾಗ ಆರೋಪಿಯನ್ನು ಬಂಧಿಸಲೇಬೇಕು ಅಂತೇನಿಲ್ಲ ಎಂದು ಮಾಜಿ ಕಾನೂನು ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಜೆ. ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಬಿ.ಎಸ್ ಯಡಿಯೂರಪ್ಪ, ಹಾಗೂ ವಿದ್ಯಾ ಚೌಡೇಶ್ವರಿ ಮಠದ ಪೀಠಾಧಿಪತಿಗಳಾದ ಬಾಲ ಮಂಜುನಾಥ ಸ್ವಾಮೀಜಿ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಬೆನ್ನೆಲ್ಲೇ ಜೆ.ಸಿ. ಮಾಧುಸ್ವಾಮಿ ಈ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
![](https://kannadanadunews.in/wp-content/uploads/2024/03/WhatsApp-Image-2024-03-16-at-11.41.00_f681af14.jpg)
ಯಡಿಯೂರಪ್ಪ ಅವರ ವಿರುದ್ಧ ನೀಡಿರುವ ದೂರು ಗಂಭೀರವಾದದ್ದಲ್ಲ. ದೂರು ನೀಡಿದಾಕೆ ಈಗಾಗಲೇ 53 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ದುರುದ್ದೇಶದಿಂದ ನೀಡಿರುವ ದೂರು. ಇದು ಗಂಭೀರ ಹಂತಕ್ಕೆ ಹೋಗುವುದಿಲ್ಲ ಎಂದು ಭಾವಿಸಿದ್ದೇನೆ. ದೂರು ನೀಡಿರುವವರಿಗೆ ಮಾನಸಿಕ ಸ್ಥಿಮಿತ ಇಲ್ಲ ಎಂಬುದು ಈಗಾಗಲೇ ತಿಳಿದು ಬರುತ್ತದೆ ಎಂದರು.
ಕಾನೂನಿನಲ್ಲಿ ದೂರು ಸ್ವೀಕರಿಸದೇ ಇರಲು ಸಾಧ್ಯವೇ ಇಲ್ಲ. ಕಾನೂನು ಇರುವುದೇ ಹಾಗೆ. ಆದರೆ ಯಡಿಯೂರಪ್ಪ ವಿರುದ್ಧ ಇದು ಒಂದು ರೀತಿಯಲ್ಲಿ ತೇಜೋವಧೆಯಾಗಿದೆ. ಒಳ್ಳೆಯವರೋ, ಕೆಟ್ಟವರೋ ಯಾರೇ ದೂರು ನೀಡಿದರೂ ಸ್ವೀಕರಿಸಬೇಕಾಗುತ್ತದೆ. ಯಾರು ದೂರು ನೀಡಿದ್ದಾರೆ ಎಂಬುದು ಮುಖ್ಯವಲ್ಲ. ಪ್ರಕರಣ ದಾಖಲಾದ ನಂತರ ಬಂಧಿಸಬೇಕಿಲ್ಲ. ಆದರೆ ಬಂಧಿಸಬೇಕೋ ಅಥವಾ ಬೇಡವೋ ಎಂಬುದು ಪೊಲೀಸರ ವಿವೇಚೆನೆಗೆ ಬಿಟ್ಟದ್ದು ಎಂದು ಮುಗುಮ್ಮಾಗಿ ಹೇಳಿದರು.
![](https://images.hindustantimes.com/img/2023/01/24/1600x900/jc_madhuswamy_1674536380595_1674536380833_1674536380833.jpg)
ಮಾಜಿ ಕಾನೂನು ಸಚಿವರ ಈ ಹೇಳಿಕೆ ತುಮಕೂರು ಜಿಲ್ಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ವಿದ್ಯಾ ಚೌಡೇಶ್ವರಿ ಮಠದ ಪೀಠಾಧಿಪತಿಗಳಾದ ಬಾಲ ಮಂಜುನಾಥ ಸ್ವಾಮಿಜೀ ಬಂಧನಕ್ಕೂ ಅನ್ವಯವಾಗಲಿದೆ. ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಶ್ರೀ ವಿದ್ಯಾ ಚೌಡೇಶ್ವರಿ ದೇವಸ್ಥಾನಕ್ಕೆ ಲಕ್ಷಾಂತರ ಜನರು ಬಂದು ತಾಯಿ ಚೌಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಇದರ ಹಿನ್ನೆಲೆ ಕೆಲವು ನಕಲಿ ಜ್ಯೋತಿಷ್ಯರು ಶ್ರೀ ಬಾಲ ಮಂಜುನಾಥ ಸ್ವಾಮಿಯವರ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂಬುದು ಭಕ್ತರ ಆರೋಪವಾಗಿದೆ.