ಚಿಕ್ಕಬಳ್ಳಾಪುರದ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಶಿಡ್ಲಘಟ್ಟದ ನಾಯಕ ಪುಟ್ಟ ಆಂಜನಪ್ಪ  ಕಾಂಗ್ರೆಸ್ ಸೇರ್ಪಡೆ

ಚಿಕ್ಕಬಳ್ಳಾಪುರ: ‘ಹಸ್ತ’ ಎನ್ನುವುದು ಕೇವಲ ಗುರುತಲ್ಲ, ಇದು ರೈತರ ನೇಗಿಲು ಹಿಡಿಯುವ ಹಸ್ತ, ಕಾರ್ಮಿಕರ ಶ್ರಮದ ಹಸ್ತ, ಮಹಿಳೆಯರ ಶಕ್ತಿಯ ಹಸ್ತ, ಯುವಕರ ಭವಿಷ್ಯದ ಹಸ್ತ. ಹಸ್ತ ಈ ದೇಶ ಮತ್ತು ಜನರ ಶಕ್ತಿ. ಕಾಂಗ್ರೆಸ್ ಎಂದರೆ ಹಲವು ನದಿಗಳ ಸಂಗಮ. ಕಾಂಗ್ರೆಸ್ ಪಕ್ಷ ಪವಿತ್ರವಾದ ದೇವಸ್ಥಾನ. ನಾವೆಲ್ಲಾ ಈ ದೇಶವನ್ನು ಕಾಪಾಡಲು ಈ ದೇವಸ್ಥಾನದಲ್ಲಿ ಸೇರಿದ್ದೇವೆ. ನೀವು ಈಶ್ವರ, ವೆಂಕಟೇಶ್ವರ ಹೀಗೆ ಯಾವುದೇ ದೇವಸ್ಥಾನಕ್ಕೆ ಹೋದರು ದೇವರು ಆಶೀರ್ವಾದ ಮಾಡುವುದು ಈ ಹಸ್ತದಿಂದ.

          ಕಾಂಗ್ರೆಸ್ ಪಕ್ಷ ಸೇರಿದ ನಂತರ ಹಳಬರು, ಹೊಸಬರು ಎನ್ನುವ ತಾರತಮ್ಯ ನಮ್ಮಲ್ಲಿ ಇಲ್ಲ. 50 ವರ್ಷ ಪಕ್ಷ ಕಟ್ಟಿರುವವರು ಮತ್ತು ಹೊಸಬರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನಾವು, ನೀವು ಎಲ್ಲರೂ ಸೇರಿ ಮಾಡಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಹೋಗಬೇಕು.

          ಇಡೀ ದೇಶದಲ್ಲೇ ಬದಲಾವಣೆಯ ಗಾಳಿ ಬೀಸುತ್ತಿದೆ. ಬಿಜೆಪಿಯವರಿಗೆ ತಾವು ಗೆಲ್ಲುವುದಿಲ್ಲ ಎನ್ನುವುದು ಅರ್ಥವಾಗಿದೆ. ಇದಕ್ಕಾಗಿ 12 ಅಭ್ಯರ್ಥಿಗಳನ್ನು ಬದಲಾಯಿಸಿದ್ದಾರೆ. ಆಪರೇಷನ್ ಕಮಲ ಮಾಡಿ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದವರ ಜತೆಗೆ ಈಗ ನೆಂಟಸ್ಥನ ಮಾಡಿಕೊಂಡಿದ್ದಾರೆ.

 

          ಕುಮಾರಸ್ವಾಮಿ ಸರಿ ಇಲ್ಲ ಎಂದವರೇ ಕುಮಾರಸ್ವಾಮಿಯ ಬೆಂಬಲ ಬೇಕು ಎಂದು ಹೊರಟಿದ್ದಾರೆ. ಅವರ ನೀತಿ, ಸಿದ್ಧಾಂತದ ಬಗ್ಗೆ ಚರ್ಚೆ ಮಾಡುವುದು ಬೇಡ. ಎಂತಹ ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಜನ ಅವರನ್ನು ನೋಡಿ ನಗುತ್ತಿದ್ದಾರೆ. 

          ಚಿಕ್ಕಬಳ್ಳಾಪುರದಲ್ಲಿ ಜಾತಿ, ನೀತಿಯ ಮಾತುಗಳು ಕೇಳಿಬರುತ್ತಿದೆ. ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವಾಗ ಎಲ್ಲಿ ಹೋಗಿತ್ತು ಈ ಜಾತಿ, ನೀತಿ. ಕಾಂಗ್ರೆಸ್ ಪಕ್ಷ ಎಂಟು ಮಂದಿ ಒಕ್ಕಲಿಗರಿಗೆ ಟಿಕೆಟ್ ನೀಡಿದೆ. ಒಕ್ಕಲಿಗರಿಗೆ ಬಿಜೆಪಿ, ಜೆಡಿಎಸ್ ಎರಡೂ ಮಾನ್ಯತೆ ನೀಡಿಲ್ಲ. ಒಂದೇ ಕುಟುಂಬದ ಮೂರು ಮಂದಿ ದಳ ಮತ್ತು ಬಿಜೆಪಿಯಿಂದ ಚುನಾವಣೆ ಎದುರಿಸುತ್ತಿದ್ದಾರೆ. ಭವಿಷ್ಯದಲ್ಲಿ ದಳ ಎಲ್ಲಿರುತ್ತದೆ ಗೊತ್ತಿಲ್ಲ. ದೇವೇಗೌಡರು ತಮ್ಮ ಅಳಿಯನನ್ನೇ ಬಿಜೆಪಿಯಿಂದ ನಿಲ್ಲಿಸಿದ ಮೇಲೆ ದಳದ ಚಿಹ್ನೆ ಮತ್ತು ಆ ಪಕ್ಷಕ್ಕೆ ಬೆಲೆಯೇ ಇಲ್ಲದಂತಾಗಿದೆ.

          ಹಿರಿಯರಾದ ಕೆ.ಪಿ.ಬಚ್ಚೇಗೌಡರು ಸಿದ್ದಾಂತದ ಮೇಲೆ ರಾಜಕಾರಣ ಮಾಡಿಕೊಂಡು ಬಂದವರು. ದೇವೇಗೌಡರ ಮಾತು ಎಂದರೆ ಅಪಾರವಾದ ವಿಶ್ವಾಸ ಅವರಿಗೆ. ಅವರನ್ನು ಪಕ್ಷದಲ್ಲಿ ಬಹಳ ತುಚ್ಛವಾಗಿ ಕಂಡರು ಎಂಬುದರ ಬಗ್ಗೆ ವಿಷಾದವಿದೆ. ನಂತರ ನನ್ನ ಮತ್ತು ಮುಖ್ಯಮಂತ್ರಿಗಳ ಬಳಿ ಮಾತನಾಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಚ್ಚೇಗೌಡರ ಬೆಂಬಲಿಗರು ಮತ್ತು ಕುಟುಂಬಸ್ಥರನ್ನು ಗೌರವಯುತವಾಗಿ ಕಾಣಲಾಗುವುದು ಎಂದು ಭರವಸೆ ನೀಡಿದ್ದೇನೆ.

 

          ಕೋಲಾರ ಮತ್ತು ಚಿಕ್ಕಬಳ್ಳಾಪುರವನ್ನು ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಎರಡು ಕ್ಷೇತ್ರದಲ್ಲಿ ಇಬ್ಬರು ಯುವಕರಿಗೆ ಅವಕಾಶ ನೀಡಿದ್ದೇವೆ. ಅವರಿಗೆ ಹಣ ಬೇಕಾಗಿಲ್ಲ, ಜನಸೇವೆ ಮಾಡಲು ನಿಮ್ಮ ಬೆಂಬಲ ಬೇಕಾಗಿದೆ. ಒಗ್ಗಟ್ಟಿನಿಂದ ಎಲ್ಲರು ಹೊಸ ಮುಖಗಳ ಗೆಲುವಿಗೆ ಶ್ರಮಿಸಬೇಕು. ಎಂ.ಎಸ್.ರಾಮಯ್ಯ ಅವರ ಕುಟುಂಬ ಶಿಕ್ಷಣ, ಆರೋಗ್ಯ, ಧರ್ಮ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಈ ಕುಟುಂಬವನ್ನು ಜಾತಿ ಮೇಲೆ ತೀರ್ಮಾನ ಮಾಡಬಾರದು. ಪಕ್ಷ ಮತ್ತು ಸಿದ್ಧಾಂತದ ಆಧಾರದ ಮೇಲೆ ತೀರ್ಮಾನ ಮಾಡಬೇಕು. 

          ಸಿ.ಎಂ.ಇಬ್ರಾಹಿಂ ಮಗ ಕೂಡ ಪಕ್ಷ ಸೇರಲು ಮುಂದೆ ಬಂದಿದ್ದಾರೆ

          ಸಿ.ಎಂ.ಇಬ್ರಾಹಿಂ ಅವರ ಮಗ ಕೂಡ ಪಕ್ಷ ಸೇರಲು ಮುಂದೆ ಬಂದಿದ್ದಾರೆ. ಸಾಕಷ್ಟು ಅಲ್ಪಸಂಖ್ಯಾತರು, ಒಕ್ಕಲಿಗ ನಾಯಕರು ಸೇರಿದಂತೆ ಎಲ್ಲಾ ವರ್ಗಗಳ ಜನರು ಪಕ್ಷ ಸೇರಲು ಮುಂದೆ ಬರುತ್ತಿದ್ದಾರೆ. ಎರಡು ಪಕ್ಷಗಳ ಮೇಲೆ ಜನರಿಗೆ ಬೇಸರ ಉಂಟಾಗಿದೆ. ಕಾಂಗ್ರೆಸ್ ಪಕ್ಷವೇ ಈ ದೇಶದ ಸಮಸ್ಯೆಗಳಿಗೆ ಪರಿಹಾರ ಎಂದು ನಂಬಿ ಪಕ್ಷಕ್ಕೆ ಸೇರ್ಪಡೆ ಆಗಿರುವ ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡರು ಮತ್ತು ಶಿಡ್ಲಘಟ್ಟದ ಪುಟ್ಟ ಆಂಜನಪ್ಪ ಅವರನ್ನು ನಾನು ತುಂಬು ಹೃದಯದಿಂದ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಜೆಡಿಎಸ್ ಪಕ್ಷದ ಮಾಜಿ ಶಾಸಕರು, ಕಾರ್ಯಕರ್ತರು ಸೂಕ್ತ ತೀರ್ಮಾನ ತೆಗೆದುಕೊಂಡು ಕಾಂಗ್ರೆಸ್ ಪಕ್ಷ ಸೇರಿದಂತೆ ಕಾರ್ಯಕರ್ತರು ಸಹ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಹಲವಾರು ಬಿಜೆಪಿ ಹಾಗು ಜೆಡಿಎಸ್ ಮುಖಂಡರು ಬೆಂಬಲಿಗರ ಜತೆ ಕಾಂಗ್ರೆಸ್ ಸೇರ್ಪಡೆಗೊಂಡರು.

          ಮಾಧ್ಯಮ ಪ್ರತಿಕ್ರಿಯೆ:

 

          ಕಾರ್ಯಕ್ರಮಕ್ಕೂ ಮುನ್ನ ಕೆಪಿಸಿಸಿ ಕಚೇರಿ ಬಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಚನ್ನಪಟ್ಟಣದಲ್ಲಿ ಅಮಿತಾ ಶಾ ಅವರ ಮೆರವಣಿಗೆ ಬಗ್ಗೆ ಕೇಳಿದಾಗ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸ್ವಾಗತ. ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಇದೇ ರೀತಿ ಯಾತ್ರೆ ಮಾಡಿದ್ದರು. ಅವರ ಈ ಯಾತ್ರೆಗಳು ವಿಫಲವಾಗಲಿದೆ ಎಂದು ಅವರಿಗೆ ಗೊತ್ತಿದೆ. ಅವರಿಗೆ ಶುಭಕೋರುತ್ತೇನೆ.

 

          60 ಸಾವಿರ ಮತಗಳ ಲೀಡ್ ಕೊಟ್ಟರೆ ನನ್ನನ್ನು ಟಚ್ ಮಾಡುವವರಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ತಮ್ಮ ಮತದಾರರ ಬಳಿ ಶಕ್ತಿ ನೀಡುವಂತೆ ಕೋರುತ್ತಿದ್ದಾರೆ. ಇದು ಅವರ ರಾಜಕೀಯ ತಂತ್ರಗಾರಿಕೆ. ಇದು ಸಹಜ. ನಾನು ನಮ್ಮ ಕ್ಷೇತ್ರಕ್ಕೆ ಹೋದಾಗ ನಾವು ನಮ್ಮ ಮತದಾರರ ಬಳಿ ಕೇಳುತ್ತೇವೆ” ಎಂದು ತಿಳಿಸಿದರು.

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top