ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ರೇವಣ್ಣ ಅವರು ವಿದೇಶಕ್ಕೆ ಹೋಗಿರುವುದು ದೇವೇಗೌಡರು ಹಾಗೂ ಅವರ ಮನೆಯವರಿಗೆ ಗೊತ್ತಿಲ್ಲವೇ,ಅವರಿಗೆ ಗೊತ್ತಿಲ್ಲದೆ ಪ್ರಜ್ವಲ್ ವಿದೇಶಕ್ಕೆ ಹೋಗಿದ್ದಾನಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
![](https://kannadanadunews.in/wp-content/uploads/2024/02/IMG-20240229-WA0280-978x1024.jpg)
ಮೈಸೂರಿನಲ್ಲಿಂದು ಪ್ರಜ್ವಲ್ರೇವಣ್ಣ ಅವರು ವಿದೇಶದಿಂದ ಬರದಿದ್ದರೆ ಕುಟುಂಬದಿಂದ ಹೊರ ಹಾಕುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರಿಗೆ ಗೊತ್ತಿಲ್ಲದೆ ಪ್ರಜ್ವಲ್ ಹೋಗಿದ್ದಾನಾ ಎಂದು ಪ್ರಶ್ನಿಸಿದರು.
ಪ್ರಜ್ವಲ್ ತಮ್ಮ ಸಂಪರ್ಕದಲ್ಲಿ ಇಲ್ಲ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಸರಿಯಲ್ಲ. ಅವರ ಸಂಪರ್ಕದಲ್ಲಿರದಿದ್ದರೆ ಕುಮಾರಸ್ವಾಮಿ ರೇವಣ್ಣ ಅವರ ಪರ ಪ್ರಚಾರ ಮಾಡುತ್ತಿದ್ದರಾ,ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕುಮಾರಸ್ವಾಮಿ ಪ್ರಜ್ವಲ್ರೇವಣ್ಣ ನನ್ನ ಮಗ ಇದ್ದಹಾಗೆ ಎಂದು ಹೇಳಿದ್ದನ್ನು ಮುಖ್ಯಮಂತ್ರಿಗಳು ನೆನಪು ಮಾಡಿದರು.
ಪ್ರಜ್ವಲ್ ಪೆನ್ಡ್ರೈವ್ ಪ್ರಕರಣದಲ್ಲಿ ವಿಷಯಾಂತರ ಮಾಡಲು ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಅವರ ಹೆಸರೇಳುತ್ತಿದ್ದಾರೆ ಅಷ್ಟೆ ಎಂದರು.
ಪ್ರಜ್ವಲ್ರೇವಣ್ಣ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳಿವೆ. ಹೀಗಿರುವಾಗ ಆ ಬಗ್ಗೆ ಕುಮಾರಸ್ವಾಮಿ ಮಾತನಾಡುವುದನ್ನು ಬಿಟ್ಟು ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡುವುದು,ಅವರನ್ನು ವಿಚಾರಣೆಗೊಳಪಡಿಸಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಪ್ರಜ್ವಲ್ ಅವರ ಪಾಸ್ಪೋರ್ಟ್ನ್ನು ರದ್ದು ಮಾಡಿ ಎಂದು ಪ್ರಧಾನಿ ಮೋದಿ ಅವರಿಗೆ ೨ ಬಾರಿ ಪತ್ರ ಬರೆದಿದ್ದೇನೆ. ಇದುವರೆಗೂ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಪ್ರಧಾನಿ ಕಚೇರಿಗೆ ಪತ್ರ ಬರೆದರೆ ಉತ್ತರ ಬಂದೇ ಬರುತ್ತದೆ ಎಂಬ ನಿಮ್ಮ ಅಭಿಪ್ರಾಯ ತಪ್ಪು ತಿಳುವಳಿಕೆ ಹಾಗೆಂದು ಆಯ್ದ ಪತ್ರಗಳಿಗೆ ಮಾತ್ರ ಉತ್ತರ ನೀಡುತ್ತಾರೆ ಎಂದು ಹೇಳಲ್ಲ ಎಂದರು.
ಚುನಾಯಿತ ಸರ್ಕಾರದ ಮುಖ್ಯಮಂತ್ರಿಯಾಗಿ ನಾನು ಪ್ರಧಾನಿಯವರಿಗೆ ೨ ಪತ್ರ ಬರೆದರೂ ಉತ್ತರ ಕೊಡಲ್ಲ ಎಂದರೆ ಏನು ಹೇಳುವುದು ಯಾಕೆ ಕೊಟ್ಟಿಲ್ಲ ಎಂಬುದನ್ನು ನೀವು ಬಿಜೆಪಿಯ ಸಚಿವರಾದ ಪ್ರಹ್ಲಾದ್ಜೋಷಿ ಅವರನ್ನು ಕೇಳಿ ಎಂದು ಮಾಧ್ಯಮದವರಿಗೆ ಸಲಹೆ ಮಾಡಿದರು.