ಬೆಂಗಳೂರು: ನಾಳೆ- ನಾಡಿದ್ದು ಲೋಕಸಭಾ ಚುನಾವಣೆ ಸಂಬಂಧಿಸಿದ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಚುನಾವಣೆಗೆ ಸಂಬಂಧಿಸಿ ಎಲ್ಲ ಅಭ್ಯರ್ಥಿಗಳ ಕುರಿತು ಚರ್ಚೆ ನಡೆದಿದೆ ಎಂದರು.
ಮೊದಲ ಹಂತದಲ್ಲಿ ಎಷ್ಟು ಅಭ್ಯರ್ಥಿಗಳನ್ನು ಘೋಷಿಸಬಹುದು ಎಂಬ ಪ್ರಶ್ನೆಗೆ ‘ಅದ್ಯಾವುದೂ ಮಾಹಿತಿ ಇಲ್ಲ; 28 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಚರ್ಚೆ ಆಗಿದೆ’ ಎಂದರು. ಅಪೇಕ್ಷಿತರ ಕುರಿತು ಚರ್ಚೆ ಆಗಿದೆ. ಅಂತಿಮವಾಗಿ ಕೇಂದ್ರದ ವರಿಷ್ಠರು ಕುಳಿತು ನಿರ್ಧಾರ ಮಾಡುತ್ತಾರೆ. ಬಹುಶಃ ಇನ್ನು ಎರಡ್ಮೂರು ದಿನಗಳಲ್ಲಿ ತಮ್ಮ ನಿರ್ಧಾರ ಘೋಷಿಸುತ್ತಾರೆ ಎಂದು ಉತ್ತರ ನೀಡಿದರು.
ಜೆಡಿಎಸ್ಗೆ ಎಷ್ಟು ಸೀಟು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವೂ ಚರ್ಚೆ ಆಗಿದೆ. ಜೆಡಿಎಸ್ ವರಿಷ್ಠರ ಜೊತೆಗೂ ಚರ್ಚೆ ಮಾಡಿ ಎರಡ್ಮೂರು ದಿನಗಳಲ್ಲಿ ಎಲ್ಲವೂ ಇತಿಶ್ರೀ ಆಗಲಿದೆ ಎಂದು ನುಡಿದರು. ‘ಹಾಲಿ ಸಂಸದರಿಗೆ ಟಿಕೆಟ್ ಇದೆಯೇ ಇಲ್ಲವೇ?’ ಎಂದು ಕೇಳಿದಾಗ ‘ಇವತ್ತು ಎಲ್ಲವೂ ಚರ್ಚೆ ಆಗಿದೆ. ಯಾರಿಗೆ ಕೊಡಲಿದ್ದಾರೆ; ಯಾರಿಗೆ ಇಲ್ಲ ಎಂಬುದು ಅಂತಿಮವಾಗಿ ನಿರ್ಧಾರ ಆಗಬೇಕಿದೆ’ ಎಂದ ಅವರು, ‘ಎರಡು ಹಂತಗಳಲ್ಲಿ ಬಿಜೆಪಿ ಪಟ್ಟಿ ಹೊರಬರಬಹುದು’ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.