• ಸಕಾಲಕ್ಕೆ
ಹೊಸದಾಗಿ 120 ಸೇವೆಗಳು ಸೇರ್ಪಡೆ
• ಒಟ್ಟು
ಸೇವೆಗಳ ಸಂಖ್ಯೆ 1202ಕ್ಕೆ ಏರಿಕೆ
• ಮುಂದಿನ
8 ತಿಂಗಳಲ್ಲಿ ಎಲ್ಲಾ 1202 ಸೇವೆಗಳು ಆನ್ಲೈನ್ನಲ್ಲಿ ಲಭ್ಯ
• ಏಕ
ಗವಾಕ್ಷಿ ಸೇವಾಸಿಂಧು ಪೋರ್ಟಲ್ ಮೂಲಕ ಸಾರ್ವಜನಿಕರಿಗೆ ಲಭ್ಯ
![](https://kannadanadunews.in/wp-content/uploads/2024/03/3-1024x576.jpg)
ಬೆಂಗಳೂರು : ‘ಸಕಾಲ’ವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ 1202 ಸೇವೆಗಳನ್ನು ಮುಂದಿನ 8 ತಿಂಗಳಲ್ಲಿ ಜನಸಾಮಾನ್ಯರಿಗೆ ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ “ಸಕಾಲ” ಸಭೆ ನಡೆಸಿ ಮಾತನಾಡಿದ ಅವರು, “ಸಕಾಲ ಯೋಜನೆಯ ಅಡಿ 101 ಇಲಾಖೆಯ 1082 ಸೇವೆಗಳನ್ನು ಈಗಾಗಲೇ ಜನರಿಗೆ ಒದಗಿಸಲಾಗುತ್ತಿದೆ. ಇದೀಗ ಹೊಸ 120 ಹೊಸ ಸೇವೆಗಳನ್ನು ಸೇರಿಸಲಾಗಿದೆ. ಆದರೆ, ಹೊಸ ಸೇವೆ ಸೇರಿದಂತೆ ಕೆಲವು ಸೇವೆಗಳು ಇನ್ನೂ ಪೇಪರ್ ಅಪ್ಲಿಕೇಶನ್ ಮೋಡ್ ನಲ್ಲಿದ್ದು, ಮುಂದಿನ 8 ತಿಂಗಳೊಳಗಾಗಿ ಎಲ್ಲಾ ಸೇವೆಗಳನ್ನೂ ಡಿಜಿಟಲೀಕರಿಸಬೇಕು ಎಂದು ಅಧಿಕಾರಿಗಳಿಗೆ ಸಮಯದ ಗಡುವು ನೀಡಿದರು.
ಮುಂದುವರೆದು, “1202ಸಕಾಲ ಸೇವೆಗಳ ಪೈಕಿ 922 ನಾಗರೀಕ ಹಾಗೂ 280 ಸಿಬ್ಬಂದಿ ಸೇವೆಗಳನ್ನು ನೀಡಲಾಗುತ್ತಿದೆ. ಆದರೆ, ಈ ಪೈಕಿ 802 ಸೇವೆಗಳನ್ನು ಮಾತ್ರ ಸೇವಾಸಿಂಧು ಆನ್ಲೈನ್ನಲ್ಲಿ ಒದಗಿಸಲಾಗುತ್ತಿದೆ. ಉಳಿದಂತೆ 120 ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸಲಾಗುತ್ತಿಲ್ಲ. ನಿಗದಿತ ಸೇವೆಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನಸಾಮಾನ್ಯರಿಗೆ ಅವಕಾಶ ಇದೆ. ಆದರೆ, ಆನ್ಲೈನ್ ಮೂಲಕ ಸೇವೆ ಲಭ್ಯವಾಗುತ್ತಿಲ್ಲ, ಬದಲಾಗಿ ಪೇಪರ್ ಅಪ್ಲಿಕೇಶನ್ ಮೋಡ್ ನಲ್ಲಿ ಸೇವೆ ಲಭ್ಯವಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಲಭ್ಯವಾಗುವ ಸೇವೆಯ ದಾಖಲಾತಿ ಆಗುತ್ತಿಲ್ಲ.
ಹೀಗಾಗಿ ಅರ್ಜಿಯಿಂದ ಸೇವೆಯ ವರೆಗೆ ಎಲ್ಲವೂ ಡಿಜಿಟಲೀಕಣಗೊಳಿಸಬೇಕು. ಎಲ್ಲವೂ ಆನ್ಲೈನ್ನಲ್ಲಿ ದಾಖಲಾಗಬೇಕು. ಅಲ್ಲದೆ, ಏಕ ಗವಾಕ್ಷಿ ಸೇವಾ ಸಿಂಧು ಪೋರ್ಟಲ್ನೊಂದಿಗೆ ಸಂಯೋಜಿಸಿ ಸೇವಾ ಸಿಂಧು ಪೋರ್ಟಲ್ ಮೂಲಕ ಲಭ್ಯವಾಗುವಂತೆ ಮಾಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಸಕಾಲ ನಿರ್ದೇಶಕರಾದ ಉಜ್ವಲ್ ಕುಮಾರ್ ಘೋಷ್ ಹಾಗೂ ಸಕಾಲ ಉಪ ನಿರ್ದೇಶಕರಾದ ಪಲ್ಲವಿ ಅವರು ಉಪಸ್ಥಿತರಿದ್ದರು.