ಬಳ್ಳಾರಿ : ಮೂರು ರಾಜ್ಯಗಳ ಲಕ್ಷಾಂತರ ಜನ ರೈತರ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಸಲು ಕ್ರಮ ಕೈಗೊಳ್ಳಬೇಕು. ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ, ತುಂಗಭದ್ರ ಮಂಡಳಿಯು ಈ ನಿಟ್ಟಿನಲ್ಲಿ ಸ್ಪಂದಿಸಿ, ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಬೇಕು ಎಂದು ತುಂಗಭದ್ರ ರೈತ ಸಂಘ ಆಗ್ರಹ ಪಡಿಸಿದೆ.
ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ಅವರು ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರ ಈ ಬಗ್ಗೆ ವಿಸ್ತ್ರøತ ಯೋಜನೆ ತಯಾರಿಸಿ, ಆಂಧ್ರ-ತೆಲಂಗಾಣ ಸರ್ಕಾರಗಳ ಹಾಗೂ ತುಂಗಭದ್ರ ಮಂಡಳಿಯ ಅಧಿಕಾರಿಗಳ ಜೊತೆ ಮಾತನಾಡಬೇಕು. ಸರ್ಕಾರ ಮಾತ್ರವಲ್ಲದೇ ಡ್ಯಾಂನಿಂದ ನೀರು ಪಡೆಯುತ್ತಿರುವ ಕಾರ್ಖಾನೆಗಳ ಮಾಲೀಕರು ಕೂಡಾ ಈ ಬಗ್ಗೆ ಸಹಕರಿಸಬೇಕು ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರನ್ನು ಸಹ ವಿಶ್ವಾಸಕ್ಕೆ ಪಡೆದು ಹೂಳನ್ನು ತೆಗೆಸಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರವು ಮತ್ತು ರೈತರ ಭವಿಷ್ಯದ ಹಿತ ದೃಷ್ಟಿಯಿಂದ ಹೂಳು ತೆಗೆಸುವ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಲಿ. ನೀರಾವರಿ ತಜ್ಞರು, ಹಾಗೂ ಅನುಭವಿ ಇಂಜಿನೀಯರುಗಳು, ಹಿರಿಯ ರೈತರ ಸಲಹೆ-ಸೂಚನೆ ಪಡೆದು, ಸಾಧ್ಯವಾದಷ್ಟರ ಮಟ್ಟಿಗೆ ಟಿ.ಬಿ.ಡ್ಯಾಂನಲ್ಲಿ ಸಂಗ್ರಹಗೊಂಡಿರುವ ಹೂಳನ್ನು ತೆಗೆಸುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ. ಕರ್ನಾಟಕದೊಂದಿಗೆ, ಆಂಧ್ರ-ತೆಲಂಗಾಣ ಮತ್ತು ಕೇಂದ್ರ ಸರ್ಕಾರ ಕೂಡಾ ಇದಕ್ಕೆ ಸಹಕರಿಸಬೇಕು. 30 ಟಿಎಂಸಿಗಳಷ್ಟು ಹೂಳು ತುಂಬಿಕೊಂಡಿರುವುದರಿಂದ ಹೂಳನ್ನು ತೆಗೆಸಲು ಕ್ರಮ ಕೈಗೊಳ್ಳಲಿ ಎಂದರು.
ಮೇ ತಿಂಗಳÀಲ್ಲಿ ಹೂಳಿನ ಜಾತ್ರೆ : ತುಂಗಭದ್ರ ರೈತ ಸಂಘವು ಈ ಹಿಂದೆ 2017ರಲ್ಲಿ ನಡೆಸಿದಂತೆ ಮತ್ತೆ ಡ್ಯಾಂನಲ್ಲಿನ ಹೂಳು ತೆಗೆಸುವ ಪ್ರಾಮಾಣಿಕ ಪ್ರಯತ್ನದ ಅಂಗವಾಗಿ `ಹೂಳಿನ ಜಾತ್ರೆ’ ನಡೆಸಲು ಉದ್ದೇಶಿಸಿದೆ. ರಾಜ್ಯ ಸರ್ಕಾರ, ತುಂಗಭದ್ರ ಮಂಡಳಿ ಇದಕ್ಕೆ ಸ್ಪಂದಿಸದೇ ಹೋದಲ್ಲಿ, ಬರುವ ಮೇ ತಿಂಗಳಲ್ಲಿ ರಾಜ್ಯದ ರೈತರು ಹಾಗೂ ಆಂಧ್ರ ರೈತರು ಮತ್ತು ಇತರೆ ಸಮಾನ ಮನಸ್ಕ ಸಂಘಟನೆಗಳು ಹಾಗೂ ಮುಖ್ಯವಾಗಿ ಮಠಾಧೀಶರುಗಳ ಸಹಕಾರ-ನೆರವಿನೊಂದಿಗೆ `ಹೂಳಿನ ಜಾತ್ರೆ’ ನಡೆಸಲು ನಿರ್ಧರಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ, ಎಲ್ಲಾ ಗ್ರಾಮಗಳ ರೈತರನ್ನು ವಿಶ್ವಾಸಕ್ಕೆ ಪಡೆದು ಅವರ ಜೊತೆ ಚರ್ಚಿಸಲು ಸಂಘವು ತೀರ್ಮಾನಿಸಿದೆ. ಈ ಬಗ್ಗೆ ಸಿದ್ದತೆಗಳನ್ನು ಕೈಗೊಂಡು ರಾಜ್ಯ ಸರ್ಕಾರ ಮತ್ತು ಟಿ.ಬಿ.ಬೋರ್ಡ್ಗೆ ಪತ್ರ ಬರೆದು ಅನುಮತಿ ಪಡೆಯುತ್ತೇವೆ. ಇವರು ಸ್ಪಂದಿಸದಿದ್ದಲ್ಲಿ, ಕೇಂದ್ರ ಜಲ ಆಯೋಗಕ್ಕೆ ಪತ್ರ ಬರೆಯುತ್ತೇವೆÉ ಎಂದು ಪುರುಷೋತ್ತಮಗೌಡ ತಿಳಿಸಿದರಲ್ಲದೇ, ಬಳ್ಳಾರಿ-ರಾಯಚೂರು- ಕೊಪ್ಪಳ-ವಿಜಯನಗರ ಜಿಲ್ಲೆಗಳ ಜನ ಪ್ರತಿನಿಧಿಗಳು ಸಹಕರಿಸಿ, ಕೈ ಜೋಡಿಸುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರವು ಸಮತೋಲನ ಜಲಾಶಯ ನಿರ್ಮಾಣದ ಬಗ್ಗೆ ಬರೀ ಕಣ್ಣೀರು ಒರೆಸುವ ತಂತ್ರ ಅನುಸರಿಸುತ್ತಾ ಬರುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣ ಕೂಡಾ ಬರೀ ಭರವಸೆ ಆಗಿಯೇ ಉಳಿದಿದೆ ಎಂದು ಆರೋಪಿಸಿದರು. ಟಿ.ಬಿ.ಡ್ಯಾಂಗೆ ಕ್ರಸ್ಟ್ಗೇಟ್ಗಳ ಅಳವಡಿಕೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಹಾಗೂ ಗೇಟ್ಗಳ ಚೈನ್ಲಿಂಕ್ಗಳನ್ನು ಕೂಡಾ ಬದಲಾಯಿಸಿ, ಹೊಸದಾಗಿ ಚೈನ್ಗಳನ್ನು ಅಳವಡಿಸಬೇಕು ಎಂದು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.
ತುಂಗಭದ್ರ ರೈತ ಸಂಘದ ಪದಾಧಿಕಾರಿಗಳು, ಮುಖಂಡರು ಈವೇಳೆ ಉಪಸ್ಥಿತರಿದ್ದರು.
ತುಂಗಭದ್ರ ಜಲಾಶಯದಲ್ಲಿನ ಹೂಳು ತೆಗೆಸಲು ಆಗ್ರಹ
ಮೇ ತಿಂಗಳಿನಲ್ಲಿ ಹೂಳಿನ ಜಾತ್ರೆ



