ಕುಣಿಗಲ್: ಜೆಡಿಎಸ್ ಕಾರ್ಯಕರ್ತ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಎನ್.ಡಿ.ಎ ಅಭ್ಯರ್ಥಿ ಡಾ|| ಮಂಜುನಾಥ್ ಪರವಾಗಿ ಪ್ರಚಾರ ಮಾಡುತ್ತಿದ್ದು, ಈ ಬಗ್ಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡರು ಅಂಚೆಪಾಳ್ಯಕ್ಕೆ ಬರುವಂತೆ ಕರೆದು ಹಲ್ಲೆ ನಡೆಸಿರುವ ಘಟನೆ ಬುಧವಾರ ರಾತ್ರಿ ಅಂಚೆಪಾಳ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿ ಗ್ರಾಮದ ಜೆಡಿಎಸ್ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ರವರನ್ನು ಅದೇ ಗ್ರಾಮದ ಕಾಂಗ್ರೆಸ್ ಮುಖಂಡ ಬೋರೇಗೌಡ ನೀನು ಎನ್.ಡಿ.ಎ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದೀಯಾ ಎಂದು ಬೆದರಿಕೆ ಹಾಕಿದ್ದಲ್ಲದೇ ಅಣೆಯ ಭಾಗಕ್ಕೆ ಹಲ್ಲೆ ನಡೆಸಿ ನೀನು ಚುನಾವಣಾ ಪ್ರಚಾರದಲ್ಲಿ ಭಾಗಿಯಾದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಂಜುನಾಥ್ ದೂರು ನೀಡಿದ ಹಿನ್ನಲೆಯಲ್ಲಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಬೋರೇಗೌಡನ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ಬೋರೇಗೌಡನ ಮೇಲೆ ಮಂಜುನಾಥ ಹಲ್ಲೆ ನಡೆಸಿದ್ದಾನೆ ಎಂದು ಅಣ್ಣ ಕೃಷ್ಣೆಗೌಡ ಪ್ರತಿದೂರು ನೀಡಿದ ಹಿನ್ನೆಲೆಯಲ್ಲಿ ಮಂಜುನಾಥ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಕೊತ್ತಗೆರೆ ಹೋಬಳಿ ಕೊತ್ತಗೆರೆ ಗ್ರಾಮದಲ್ಲಿ ಏಪ್ರಿಲ್ ೧೧ ರಂದು ಗುರುವಾರ
ಮತ್ತೊಂದು ಘಟನೆ ನಡೆದಿದ್ದು ಜೆಡಿಎಸ್ ಮುಖಂಡ ಚಂದ್ರಪ್ಪ ಶೇವಿಂಗ್ ಶಾಪ್ನ ಹತ್ತಿರ ಜೆಡಿಎಸ್ ಕಾರ್ಯಕರ್ತರೊಂದಿಗೆ
ಕುಳಿತಿದ್ದಾಗ ನೀವೆಲ್ಲರೂ ನಮ್ಮ ಪಕ್ಷದಲ್ಲಿದ್ದುಕೊಂಡೇ ರಾತ್ರಿಯ ವೇಳೆ ಕಾಂಗ್ರೆಸ್ ಮುಖಂಡರಿಂದ ಹಾರ
ಹಾಕಿಸಿಕೊಂಡಿದ್ದೀರಿ ಇದು ಸರಿಯೇ ಎಂದು ಜೆಡಿಎಸ್ ಕಾರ್ಯಕರ್ತರನ್ನ ಪ್ರಶ್ನೆ ಮಾಡಿದ್ದಾರೆ ಇದರಿಂದ ಕುಪಿತ ಗೊಂಡ ಕಾಂಗ್ರೆಸ್ ಮುಖಂಡರಾದ ಅನಿಲ್, ನಾರಾಯಣ್,
ಕುಮಾರ, ಗುಂಡ, ಮಲ್ಲ ಇವರುಗಳು ಚಂದ್ರಪ್ಪನ ಮೇಲೆ ಗಲಾಟೆ ಮಾಡಿದ್ದಲ್ಲದೇ ಓಡಿಸಿ ಕೊಂಡು ಹೋಗಿ ಹಲ್ಲೆ
ನಡೆಸಿದ್ದಾರೆ ಎಂದು ಜೆಡಿಎಸ್ ಮುಖಂಡ ಚಂದ್ರಪ್ಪ ದೂರು ನೀಡಿದ್ದರಿಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸಿದ ಘಟನೆ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ
ಹರಿದಾಡುತ್ತಿದೆ.