ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಜೊತೆಗೂಡಿ ಹಿಜಾಬ್ ಗಲಭೆ ಸೃಷ್ಟಿಸಿವೆ

ಬೆಂಗಳೂರು,ಫೆ,21 : ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ತಮ್ಮ ಯೋಜನೆಗಳ ಮೂಲಕ ಜನಮೆಚ್ಚುಗೆಯನ್ನು ಮತ್ತು ಜನರ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದರೆ, ಕಾಂಗ್ರೆಸ್ ಪಕ್ಷ ಹಿಜಾಬ್ ಒಳಗೆ ಸೇರಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ಗಲಭೆಯನ್ನು ಪ್ರಾರಂಭಿಸಲು ಎರಡು ಶಕ್ತಿಗಳು ಒಂದುಗೂಡಿವೆ. ಇದರಲ್ಲಿ ಮಾನಸಿಕ ಮತ್ತು ಬೌದ್ಧಿಕ ಚಿಂತನೆ ಕಾಂಗ್ರೆಸ್ ಪಕ್ಷದ್ದಾದರೆ, ದೈಹಿಕ ಚಿಂತನೆ ಎಸ್‍ಡಿಪಿಐಯದು. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಜೊತೆಗೂಡಿ ಹಿಜಾಬ್ ಗಲಭೆಯನ್ನು ಸೃಷ್ಟಿಸಿವೆ. ಕಾಂಗ್ರೆಸ್‍ಗೆ ಹಿಜಾಬ್ ವಿಚಾರದಲ್ಲಿ ನಷ್ಟ ಆಗುವ ಅರಿವಾಗಿ ಅದು ಆತಂಕಕ್ಕೆ ಒಳಗಾಗಿದೆ ಎಂದು ವಿಶ್ಲೇಷಿಸಿದರು.


ಸಿಎಎ ಗಲಭೆಯಲ್ಲೂ ಕಾಂಗ್ರೆಸ್ ಪಾತ್ರವಿತ್ತು. ಡಿಜೆ ಹಳ್ಳಿ- ಕೆಜೆ ಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡವಿತ್ತು. ರಾಜ್ಯದಲ್ಲಿ ಅವಾಂತರ ಮಾಡಲು ಗಲಭೆಗಳಿಗೆ ಕಾಂಗ್ರೆಸ್ ಬೆಂಗಾವಲಾಗಿ ನಿಂತಿದೆ. ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸಿದೆ. ಸದನದಲ್ಲಿ ಚರ್ಚೆ ಮಾಡಬೇಕಿದ್ದ ವಿರೋಧ ಪಕ್ಷವಾದ ಕಾಂಗ್ರೆಸ್, ಧರಣಿ ಮೂಲಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ, ವಿಧಾನಸಭೆ, ವಿಧಾನ ಪರಿಷತ್ ಮೇಲೆ ನಂಬಿಕೆ ಇಲ್ಲ ಎಂದು ನುಡಿದರು. ಕೇವಲ ರಾಜಕಾರಣಕ್ಕಾಗಿ ಕಾಂಗ್ರೆಸ್ಸಿಗರು ಧರಣಿ ಕುಳಿತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್‍ನ ಈ ನಿಲುವನ್ನು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಖಂಡಿಸುತ್ತದೆ ಎಂದರು. ವಿರೋಧ ಪಕ್ಷವಾಗಿ ಅದು ನಾಲಾಯಕ್ ಪಾರ್ಟಿ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮೇಲೇಳುವುದಿಲ್ಲ ಎಂಬುದು ಆ ಪಕ್ಷದ ನಾಯಕರಿಗೆ ಗೊತ್ತಾಗಿದೆ. ಶಾಲೆಗಳಲ್ಲಿ ಧನಿಕ, ಬಡವ, ಜಾತಿ ವಿಂಗಡನೆ ಆಗಬಾರದೆಂಬ ಕಾರಣಕ್ಕೆ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ. ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯ. ಶಾಲೆಯೊಳಗೆ ಹಿಜಾಬ್‍ಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.


ರಾಷ್ಟ್ರಧ್ವಜ, ಸಂವಿಧಾನ, ಜನಗಣಮನ, ವಂದೇ ಮಾತರಂ ಗೀತೆಗೆ ಬಿಜೆಪಿ ಗರಿಷ್ಠ ಗೌರವ ನೀಡುತ್ತಿದೆ. ಶಿವಮೊಗ್ಗದಲ್ಲಿ ಕಾಲೇಜೊಂದರಲ್ಲಿ ರಾಷ್ಟ್ರಧ್ವಜವನ್ನು ಇಳಿಸಿ ಕೇಸರಿ ಧ್ವಜವನ್ನು ಹಾರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಸುಳ್ಳುಮಾಹಿತಿ ನೀಡಿದ್ದರು. ಸುಳ್ಳು, ಮೋಸದ ಮೂಲಕ ಗಲಭೆಗೆ ಪ್ರೇರೇಪಿಸಿದ್ದರು. ಕಾಂಗ್ರೆಸ್ಸಿಗರು ರಾಷ್ಟ್ರಧ್ವಜ, ಜನಗಣಮನಕ್ಕೆ ಗೌರವ ಕೊಡುವುದಿಲ್ಲ. ಅವರದು ಏನಿದ್ದರೂ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಜೈಕಾರವನ್ನಷ್ಟೇ ಕೂಗುತ್ತಿದೆ ಎಂದು ವಿವರಿಸಿದರು. ಕಾಂಗ್ರೆಸ್ಸಿಗರು ನಮಗೆ ರಾಷ್ಟ್ರಭಕ್ತಿಯ ಪಾಠ ಹೇಳಬೇಕಿಲ್ಲ. ರಾಷ್ಟ್ರಧ್ವಜ ಮತ್ತು ಕೇಸರಿ ಧ್ವಜಗಳೆರಡನ್ನೂ ನಾವು ಗೌರವಿಸುತ್ತೇವೆ ಎಂದು ನುಡಿದರು. ಕಾಂಗ್ರೆಸ್ ಪಕ್ಷದ ಗಲಭೆ ಸೃಷ್ಟಿಸುವ ಪ್ರಯತ್ನದ ಫಲವಾಗಿ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಈ ಹತ್ಯೆಗೆ ಕಾರಣವಾದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಕೊಲೆಯ ಹಿಂದಿನ ಕೈವಾಡ, ಶಕ್ತಿಗಳನ್ನು ಪೊಲೀಸ್ ಇಲಾಖೆ ಹೊರಕ್ಕೆ ತರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸದನದಲ್ಲಿ ಧರಣಿ ಮಾಡಿ ನಿದ್ದೆಗೆಟ್ಟು ಈಶ್ವರಪ್ಪ ಅವರ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ ಎಂದ ಅವರು, ಹಿಜಾಬ್ ಕುರಿತ ಚರ್ಚೆ ವಿಧಾನಸಭೆಯಲ್ಲಿ ನಡೆಯಬಾರದು ಮತ್ತು ಕಾಂಗ್ರೆಸ್ ಪಕ್ಷದ ಡಿ.ಕೆ.ಶಿವಕುಮಾರ್ ವiತ್ತು ಸಿದ್ದರಾಮಯ್ಯ ನಡುವಿನ ಒಳಜಗಳದ ಕಾರಣಕ್ಕೇ ಧರಣಿ ನಡೆಸಲಾಗುತ್ತಿದೆ. ಹಿಜಾಬ್‍ನ ಚರ್ಚೆಯಲ್ಲಿ ಭಾಗವಹಿಸಿದರೆ ಕಾಂಗ್ರೆಸ್‍ಗೆ ಮೈನಸ್ ಆಗಲಿದೆ ಎಂಬ ರಾಜಕೀಯ ಲೆಕ್ಕಾಚಾರ, ಅವಕಾಶ ಕೊಟ್ಟರೆ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣಕ್ಕೆ ಉತ್ತರಿಸಿ ಪ್ರಚಾರಕ್ಕೆ ಬರುತ್ತಾರೆಂಬ ಕಾರಣಕ್ಕಾಗಿ ಡಿಕೆಶಿ ಅವರು ಮಾಡಿರುವ ತಂತ್ರ ಇದರ ಹಿಂದಿದೆ. ಇದರಿಂದಾಗಿ ಕಾಂಗ್ರೆಸ್‍ಮುಕ್ತ ಕರ್ನಾಟಕ ಆಗಲಿದೆ ಎಂದರು.


ಮಾರ್ಚ್ 27- 28ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಅವರು ಪ್ರಕಟಿಸಿದರು. ಕೇಂದ್ರದ ಯೋಚನೆ ಮತ್ತು ಯೋಜನೆಗಳಿಗೆ ಕರ್ನಾಟಕದ ಕಾರ್ಯಕರ್ತರು ತಕ್ಷಣ ಸ್ಪಂದಿಸುತ್ತಿದ್ದಾರೆ. ಕೇಂದ್ರದ ಸೂಚನೆಯಂತೆ ಪಾರ್ಟಿ ವಿಸ್ತರಣೆಗೊಂಡಿದೆ. ಅದರ ಆಧಾರದಲ್ಲಿ ಮತಗಟ್ಟೆ ಅಧ್ಯಕ್ಷರ ಆಯ್ಕೆ, ಪೇಜ್ ಪ್ರಮುಖರ ನೇಮಕ, ವಿಸ್ತಾರಕರ ಯೋಜನೆ ಅನುಷ್ಠಾನವೂ ಸಮರ್ಪಕವಾಗಿ ನಡೆಯುತ್ತಿದೆ ಎಂದರು. ಶೇ 50 ರಷ್ಟು ಪೇಜ್ ಸಮಿತಿಗಳೂ ರಚನೆಯಾಗಿವೆ. ಸಂಘಟನಾತ್ಮಕವಾಗಿ ನಾವು ಯಶಸ್ಸು ಪಡೆದಿದ್ದೇವೆ. ಮುಂದಿನ ಕಾರ್ಯಚಟುವಟಿಕೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು. ವಿಶ್ವವಂದ್ಯ ಪ್ರಧಾನಿಗಳಾದ ನರೇಂದ್ರ ಮೋದಿಜಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತವು ಇಂದು ಜಗತ್ತಿನ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಕೋವಿಡ್ ಸಂಕಷ್ಟವನ್ನು ಎದುರಿಸಿಯೂ ಭಾರತವು ಆರ್ಥಿಕವಾಗಿ ಸದೃಢವಾಗಿ ಬೆಳೆಯುತ್ತಿದೆ. ಆತ್ಮನಿರ್ಭರ ಭಾರತ ಮತ್ತು ಸ್ವದೇಶಿ ಚಿಂತನೆಯಡಿ ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾವನ್ ಅವರು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಅದ್ಭುತವಾದ, ಅತ್ಯಂತ ದೂರದೃಷ್ಟಿಯ ಬಜೆಟ್ ಅನ್ನು ನೀಡಿದ್ದಾರೆ. ರಾಜ್ಯಾಧ್ಯಕ್ಷನ ನೆಲೆಯಲ್ಲಿ ಇದನ್ನು ಸ್ವಾಗತಿಸುವುದಾಗಿ ತಿಳಿಸಿದರು. ಮುಂದಿನ ಭಾರತದ ದಿಕ್ಕುದೆಸೆ, ಅಭಿವೃದ್ಧಿಗೆ ಈ ಬಜೆಟ್ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 20,000 ಕೋಟಿ ರೂ. ವೆಚ್ಚದಲ್ಲಿ ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಬಂದರುಗಳು,ಸಮೂಹ ಸಾರಿಗೆ, ಜಲಮಾರ್ಗಗಳಂಥ ಪ್ರಮುಖ ವಿಚಾರಗಳಿಗೆ ಆದ್ಯತೆ ಕೊಟ್ಟು ದೇಶದ ಸಮಗ್ರ ಅಭಿವೃದ್ಧಿಗೆ ಕಾರಣವಾಗಲಿದೆ. 2022-23ರಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು 25,000 ಕಿ.ಮೀ.ಗಳಷ್ಟು ವಿಸ್ತರಣೆ ಮಾಡಲಾಗುವುದು. ಇದೊಂದು ಮಹತ್ವದ ಕ್ರಮ ಎಂದು ತಿಳಿಸಿದರು.


ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ದಿನಕ್ಕೆ 11 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆದರೆ, ಅದು ಯುಪಿಎ ಕಾಲಘಟ್ಟದಲ್ಲಿ 4 ಕಿಮೀಗೆ ಇಳಿಯಿತು. ನಮ್ಮ ಕಾಲಘಟ್ಟದಲ್ಲಿ 24 ಕಿಮೀ ರಸ್ತೆ ನಿರ್ಮಾಣ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಸಾಧ್ಯವಾಗಿದೆ ಎಂದು ವಿವರಿಸಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಬಂದ ಬಳಿಕ ಹಳ್ಳಿಗಳಲ್ಲಿ ಗುಣಮಟ್ಟದ ರಸ್ತೆಗಳು ನಿರ್ಮಾಣಗೊಳ್ಳುತ್ತಿವೆ. ಮೋದಿಯವರ ಆಡಳಿತದಲ್ಲಿ ಹಳ್ಳಿಗಳ ರಸ್ತೆಯೂ ಕಾಂಕ್ರಿಟೀಕರಣವಾಗುತ್ತಿದೆ. ಯುಪಿಎ ಕಾಲಘಟ್ಟದಲ್ಲಿ ಗ್ರಾಮ ಸಡಕ್ ಯೋಜನೆ ಆಮೆಗತಿಯಲ್ಲಿ ಸಾಗುತ್ತಿತ್ತು. ಕರ್ನಾಟಕಕ್ಕೆ ಹಣವೇ ಬಂದಿರಲಿಲ್ಲ ಎಂದು ತಿಳಿಸಿದರು. ಹರ್ ಘರ್ ಜಲ್ ಯೋಜನೆಯಡಿ 8.7 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ ಹೊಸದಾಗಿ 3.8 ಕೋಟಿ ಕುಟುಂಬಗಳಿಗೆ ನೀರು ಒದಗಿಸಲು ರೂ.60,000 ಕೋಟಿ. ಅನುದಾನ (ನಲ್ ಸೆ ಜಲ್) ನೀಡಲಾಗಿದೆ. ಇದೊಂದು ಮಹತ್ವದ ಉಪಕ್ರಮ ಎಂದು ಶ್ಲಾಘಿಸಿದರು. ಪ್ರಧಾನಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳನ್ನು ನಿರ್ಮಿಸಲು ರೂ.48,000 ಕೋಟಿ ವಿನಿಯೋಗ ಮಾಡಲಾಗುತ್ತಿದೆ. 2 ಲಕ್ಷ ಅಂಗನವಾಡಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ವಿವರಿಸಿದರು.


ದೂರದ ಮತ್ತು ಗ್ರಾಮೀಣ ಪ್ರದೇಶಗಳಿಗೆ ಶಿಕ್ಷಣವನ್ನು ನೀಡಲು 200 ಟಿವಿ ಚಾನೆಲ್‍ಗಳು ಆರಂಭಿಸಲಾಗುವುದು. ರೈತಪರ ಕೇಂದ್ರ ಸರಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಯೋಜನೆಗಳ ಅಡಿಯಲ್ಲಿ ರೂ.2.37 ಲಕ್ಷ ಕೋಟಿ ಪಾವತಿಗೆ ಹಣ ಮೀಸಲಿಡಲಾಗಿದೆ. ಕೃಷಿ ಅರಣ್ಯವನ್ನು ಕೈಗೆತ್ತಿಕೊಳ್ಳುವ ಎಸ್‍ಸಿ/ಎಸ್‍ಟಿಗೆ ಸೇರಿದ ರೈತರಿಗೆ ಆರ್ಥಿಕ ಬೆಂಬಲ ಪ್ರಕಟಿಸಲಾಗಿದೆ. ದೇಶಾದ್ಯಂತ ರಾಸಾಯನಿಕ ಮುಕ್ತ, ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುವುದು. ಇದೆಲ್ಲವೂ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಎಂದರು. ರಾಜ್ಯದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರವು ಸಿಎಂ ಎಂದರೆ ಕಾಮನ್‍ಮ್ಯಾನ್ ಎಂಬ ಪರಿಕಲ್ಪನೆಯನ್ನು ಜಾರಿಗೊಳಿಸಿದ್ದು, ಆಡಳಿತ ಯಂತ್ರಕ್ಕೆ ಚುರುಕು ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಗಮನ ಕೊಡುತ್ತಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆಯನ್ನು ಜಾರಿಗೊಳಿಸಿದ್ದು, ಕಂದಾಯ ಇಲಾಖೆಯಲ್ಲಿ ಬಹಳಷ್ಟು ಪರಿವರ್ತನೆಗಳು ಆಗುತ್ತಿವೆ. 9.5 ಕೋಟಿ ಕೋವಿಡ್ ಲಸಿಕೆಗಳನ್ನು ಈಗಾಗಲೇ ಕೊಡಲಾಗಿದೆ. ಅದ್ಭುತವಾದ ಕಾರ್ಯಗಳನ್ನು ನಮ್ಮ ರಾಜ್ಯ ಸರಕಾರ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ಪದಾಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top