ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
![](https://kannadanadunews.in/wp-content/uploads/2024/02/CM-1024x662.jpg)
ಈಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ನೀಡುವ ಕಾಲಕ್ಕೆ ಚಾಮರಾಜನಗರ ಜಿಲ್ಲೆಯ ಹಾಲಿ ಉಸ್ತುವಾರಿ ಸಚಿವರಾಗಿರುವ ಕೆ.ವೆಂಕಟೇಶ್ ಅವರಿಗೆ ಮೈಸೂರು ಜಿಲ್ಲೆಯ ಉಸ್ತುವಾರಿ ನೀಡಲು ತೀರ್ಮಾನಿಸಲಾಗಿದೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಪರಿಷ್ಕರಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದು,ಹಲವು ಮಂದಿ ಉಸ್ತುವಾರಿ ಸಚಿವರ ಜಾಗ ಬದಲಾಗಲಿದೆ.
ಆಡಳಿತಾತ್ಮಕ ಅನುಕೂಲದ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಪುನರ್ರಚಿಸಲು ತೀರ್ಮಾನಿಸಿರುವ ಮುಖ್ಯಮಂತ್ರಿಗಳು,ಹಾಸನ,ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ಉಸ್ತುವಾರಿಯನ್ನು ಬದಲಿಸಲು ಸಜ್ಜಾಗಿದ್ದಾರೆ.
ಭೋಸರಾಜು ಅವರು ಕೊಡಗು ಜಿಲ್ಲೆಯ ಹಾಲಿ ಉಸ್ತುವಾರಿ ಸಚಿವರಾಗಿದ್ದು,ಮೂಲತ: ರಾಯಚೂರು ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವ ಹೊಂದಿರುವ ಅವರು ತಮ್ಮ ಜಿಲ್ಲೆ ಅಥವಾ ಅಕ್ಕ ಪಕ್ಕದ ಯಾವುದಾದರೂ ಜಿಲ್ಲೆಯ ಉಸ್ತುವಾರಿ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.
ಹೀಗಾಗಿ ಕೊಡಗು ಜಿಲ್ಲೆಗೆ ಭೋಸರಾಜು ಅವರ ಬದಲು ಬೇರೆಯವರು ಬರಲಿದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರ ಹೆಸರುಗಳು ಕೊಡಗು ಜಿಲ್ಲೆಯ ಉಸ್ತುವಾರಿಗೆ ಕೇಳಿ ಬರುತ್ತಿದೆ.
ಕೋಲಾರ ಜಿಲ್ಲೆಯವರಾದ ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಸಧ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು,ಆಡಳಿತಾತ್ಮಕ ಅನುಕೂಲದ ದೃಷ್ಟಿಯಿಂದ ತಮ್ಮನ್ನು ಕೋಲಾರ ಇಲ್ಲವೇ ಅಕ್ಕಪಕ್ಕದ ಯಾವುದಾದರೂ ಜಿಲ್ಲೆಗೆ ನೇಮಕ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದಾರೆನ್ನಲಾಗಿದೆ.
ಹೀಗೆ ಹಲವು ಸಚಿವರು ತಮಗೆ ನೀಡಲಾಗಿರುವ ಉಸ್ತುವಾರಿ ಜಿಲ್ಲೆಗಳ ಬದಲು ಬೇರೆ ಜಿಲ್ಲೆಗಳ ಉಸ್ತುವಾರಿಗೆ ನೇಮಕ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಿಕೊಂಡಿದ್ದು,ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪುನರ್ರಚನೆಯಾಗಲಿದೆಯೆಂದು ಮೂಲಗಳು ಹೇಳಿವೆ.