ನೈಸರ್ಗಿಕ ಹೂಗಳನ್ನ ಬಳಸಿ ಹೂವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವಂತೆ ಕರೆ

2 ಲಕ್ಷ ಹೂವುಗಳನ್ನ ವಿತರಿಸಿ ಕೃತಕ ಹೂವುಗಳನ್ನ ಬಳಸದಂತೆ ರಾಜ್ಯದ ಹೂವು ಬೆಳೆಗಾರರಿಂದ ವಿನೂತನ ಜನಜಾಗೃತಿ

ಅಪರ ಮಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ದಿ ಆಯುಕ್ತರಾದ ಶಾಲಿನಿ ರಜನೀಶ್‌ ಭಾಗಿ

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೃತಕ ಹೂಗಳ ಬಳಕೆ ರಾಜ್ಯದ ಹೂವು ಬೆಳೆಗಾರರ ಜೀವನವನ್ನ ತೊಂದರೆಗೀಡಾಗುವುಂತೆ ಮಾಡಿದೆ. ಹೂವು ಬೆಳೆಗಾರರನ್ನ ಬೀದಿಗೆ ತಳ್ಳಿರುವ ಕೃತಕ ಹೂವುಗಳ ಬಳಕೆಗೆ ಕಡಿವಾಣ ಹಾಕುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ರಾಜ್ಯದ ಹೂವು ಬೆಳೆಗಾರರಿಂದ ಲಾಲ್‌ಬಾಗ್‌ ಉದ್ಯಾನವನದಲ್ಲಿ ವಿನೂತನ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 

ಸುಮಾರು 2 ಲಕ್ಷ ಹೂವುಗಳನ್ನ ಜನರಿಗೆ ಉಚಿತವಾಗಿ ವಿತರಿಸುವ ಮೂಲಕ ಜನರಲ್ಲಿ ಪ್ಲಾಸ್ಟಿಕ್‌ ಹಾಗೂ ಸಿಂಥಟಿಕ್‌ ಹೂವುಗಳ ಬಳಕೆಯಿಂದ ಪರಿಸರದ ಮೇಲೆ ಆಗುವ ದಷ್ಪರಿಣಾಮಗಳು ಹಾಗೂ ರೈತರಿಗೆ ಆಗುವ ಅನ್ಯಾಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. 

ತೋಟಗಾರಿಕೆ ಇಲಾಖೆ-ಕರ್ನಾಟಕ ಸರ್ಕಾರ, ಅಂತರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು ನಿ., ಹೆಬ್ಬಾಳ, ಜಿ.ಎಫ್‌.ಸಿ.ಐ., ಅಗ್ರಿ ಪ್ಲಾಸ್ಟ್, ರಾಜ್ಯದ ಹೂ ಬೆಳೆಗಾರರು/ ಖರೀದಾರರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ದಿ ಆಯುಕ್ತರಾದ ಶಾಲಿನಿ ರಜನೀಶ್‌ ಅವರು ಮಾತನಾಡಿ, ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಣಿಜ್ಯ ಬೆಳೆಯಾಗಿ ಹೂವುಗಳನ್ನು ಬೆಳೆಯಲಾಗುತ್ತಿದೆ. ವಿಶ್ವದ ಹಲವಾರು ರಾಷ್ಟ್ರಗಳಿಗೆ ಇಲ್ಲಿನಿಂದಲೇ ಹೂವುಗಳನ್ನು ರಫ್ತು ಮಾಡಲಾಗುತ್ತಿದೆ. ಕೃತಕ ಹೂಗಳನ್ನ ಬಿಟ್ಟು ಜನರು ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕ ಹೂವುಗಳನ್ನ ಬಳಸಬೇಕು ಎಂದು ಕರೆ ನೀಡಿದ ಅವರು, ಕೃತಕ ಹೂವುಗಳ ಬಳಕೆಯಿಂದ ಪರಿಸರದ ಮೇಲೆ ಅಷ್ಟೇ ಅಲ್ಲದೇ ರಾಜ್ಯದ ಹೂವು ಬೆಳೆಗಾರರಿಗೂ ತೊಂದರೆ ಆಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮದ ಕೈಗೊಳ್ಳುವಂತೆ ಬೆಳೆಗಾರರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. 

ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷರಾದ ಟಿ ಎಂ ಅರವಿಂದ್‌ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಪುಷ್ಪ ಬೆಳೆಗಳನ್ನು ಸುಮಾರು 38000ಹೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಹಾಗೂ ವಾಣಿಜ್ಯ ಬೆಳೆಗಳನ್ನು ಸುಮಾರು 1500 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಗುಲಾಭಿ, ಸೇವಂತಿಗೆ, ಚೆಂಡು ಹೂ, ಸುಗಂಧರಾಜ, ಕನಕಾಂಬರ ಇತ್ಯಾದಿ ಬಿಡಿ ಹೂಗಳನ್ನು ಹಾಗೂ ಕಟ್‌ ಗುಲಾಬಿ, ಕಟ್‌ ಸೇವಂತಿಗೆ, ಜೆರ್ಬೆರ, ಆಂತುರಿಯಮ್ಸ, ಆರ್ಕಿಡ್ಸ್‌ ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಹಸಿರು ಮನೆ/ ಪಾಲಿಮನೆಯಲ್ಲಿ ಬೆಳೆಲಾಗುತ್ತಿದೆ.  ಇದರಿಂದ ನೇರ ಹಾಗೂ ಪರೋಕ್ಷವಾಗಿ 11 ಲಕ್ಷ ಜನರ ಜೀವನ ಇದರ ಮೇಲೆ ಅವಲಂಬಿತವಾಗಿದೆ. ಅಲ್ಲದೆ, ರಾಜ್ಯದಲ್ಲಿ 2.8 ಲಕ್ಷ ಏಕರೆ ಪ್ರದೇಶದಲ್ಲಿ ಕಾಕಡ, ಮಲ್ಲಿಗೆ, ಮ್ಯಾರಿಗೋಲ್ಡ್‌, ಸಂಪಂಗಿ, ಕನಕಾಂಬರ ಸೇರಿದಂತೆ 40 ಬಗೆಯ ಹೂಗಳನ್ನು ಬೆಳೆಯಲಾಗುತ್ತದೆ. ಇದರ ಮೇಲೆ ಅವಲಂಬಿತರಾಗಿರುವ ಜನರ ಸಂಖ್ಯೆ 52 ಲಕ್ಷಕ್ಕೂ ಹೆಚ್ಚು. ಕೃತಕ ಹೂವುಗಳ ಬಳಕೆಯಿಂದ ರೈತರುಗಳು ಉತ್ತಮ ದರ ದೊರಕದೆ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಜನರು ಕೃತಕ ಹೂವುಗಳನ್ನ ಬಿಟ್ಟು ನೈಸರ್ಗಿಕ ಹೂವುಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು. 

ಕೃತಕ ಹೂಗಳಿಂದಾಗುತ್ತಿರುವ ದುಷ್ಪರಿಣಾಮಗಳು:

ರೈತರ ಆದಾಯದಲ್ಲಿ ಕುಸಿತ: ಪ್ರತಿ ಏಕರೆಗೆ 50 ಲಕ್ಷ ರೂಪಾಯಿಗಳ ಬಂಡವಾಳವನ್ನು ಹೂಡುವ ಮೂಲಕ ಪಾಲಿ ಹೌಸ್‌ ಸೇರಿದಂತೆ ಹಲವಾರು ಉಪಕರಣಗಳ ಖರೀದಿಗೆ ರೈತರು ಮುಂದಾಗಿದ್ದಾರೆ. ಸರಿಯಾದ ಪ್ರಮಾಣದ ಬೆಲೆ ದೊರೆಕದೆ ಇದ್ದಲ್ಲಿ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಅಲ್ಲದೆ ರೈತರ ಆದಾಯ ಕುಸಿತದಿಂದಾಗಿ ಮಾಡಿರುವ ಸಾಲ ತೀರಿಸಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ.

 

ಪ್ರತಿವರ್ಷ ಹಬ್ಬಗಳಲ್ಲಿ, ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಕೃತಕ ಹೂಗಳ ಬಳಕೆ ಹೆಚ್ಚಾಗುತ್ತಿದ್ದು, ನೈಸರ್ಗಿಕ ಹೂಗಳನ್ನು ಕೊಳ್ಳುವರಿಲ್ಲದಂತಾಗಿದೆ. ಇದೇ ರೀತಿಯ ಬಳಕೆ ಹೆಚ್ಚಾದಲ್ಲಿ ನೈಸರ್ಗಿಕ ಹೂಗಳ ಬಳಕೆ ಸಂಪೂರ್ಣ ಕಡಿಮೆಯಾಗಲಿದ್ದು ಹೂ ಬೆಳೆಗಾರರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಲಿದೆ. ಹೊಸ ವರ್ಷದ ಈ ಶುಭ ಸಂಧರ್ಭದಲ್ಲಿ ಜನರು ನೈಸರ್ಗಿಕ ಹೂವುಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಮುಂದಾಗಬೇಕು ಎಂದರು. 

ರಾಜ್ಯದ ರೈತರು ಬೆಳೆದಿರುವಂತ ವಿವಿಧ ತಳಿಯ ಕಟ್‌ ಗುಲಾಬಿ ಮಾರಾಟವನ್ನು ಲಾಲ್ ಬಾಗ್ನ 4ಕ್ಕೂ ದ್ವಾರಗಳಲ್ಲಿ ಆಯೋಜಿಸಲಾಗಿತ್ತು.  ನೈಸರ್ಗಿಕ ಹೂಗಳನ್ನು ಬಳಸುವ ಬಗ್ಗೆ  ಅಳವಡಿಸಲಾಗಿದ್ದ “ Selfie Point ” ಜನರು ಚಿತ್ರಗಳನ್ನು ತಗೆದುಕೊಂಡರು.

 

ಕಾರ್ಯಕ್ರಮದಲ್ಲಿ ತೋಟಗಾರಿಕೆ ಮತ್ತು ರೇಷ್ಮೇ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಶಾಮ್ಲಾ ಇಕ್ಬಾಲ್‌, ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ  ನಿರ್ದೇಶಕರಾದ ಶ್ರೀಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top