ಆಳವಾದ ಅಧ್ಯಯನದಿಂದ ಜ್ಞಾನದ ನಿಧಿ ದೊರೆಯುತ್ತದೆ : ಸಂಗೀತ ಶೃಂಗೇರಿ
ಬೆಂಗಳೂರು: ಯುವ ಸಮೂಹದಲ್ಲಿ ಓದುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳುವ ಸಲುವಾಗಿ ನಗರದ ಗರುಡಾ ಮಾಲ್ 18ನೇ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಬೃಹತ್ ಪುಸ್ತಕ ಮೇಳ ಆಯೋಜಿಸಲಾಗಿತ್ತು.
ಕನ್ನಡ ಮತ್ತು ವಿವಿಧ ಭಾಷೆಗಳ 20 ಸಾವಿರ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಎರಡು ದಿನಗಳ ಕಾಲ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.
![](https://kannadanadunews.in/wp-content/uploads/2024/03/IMG-20240315-WA0493-1024x768.jpg)
ಬಿಗ್ ಬಾಸ್ ಖ್ಯಾತಿಯ ಸಂಗೀತ ಶೃಂಗೇರಿ ಪುಸ್ತಕ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ನೋಡುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಪುಸ್ತಕಗಳನ್ನು ಓದುವುದರಿಂದ ನಿಜವಾದ ಜ್ಞಾನ ದೊರೆಯಲಿದೆ. ಡಿಜಿಟಲ್ ಓದು ಅಷ್ಟೊಂದು ಖುಷಿ ನೀಡುವುದಿಲ್ಲ. ಹೀಗಾಗಿ ಯುವ ಜನಾಂಗ ಪುಸ್ತಕ ಖರೀದಿಸಿ ಓದಿದರೆ ಜ್ಞಾನ ಹೆಚ್ಚಾಗುತ್ತದೆ ಎಂದರು.
ಪುಸ್ತಕಗಳು ನಿಜವಾದ ಸ್ನೇಹಿತನಂತೆ. ಪುಸ್ತಕಗಳು ಸಮುದ್ರವಿದ್ದಂತೆ. ಆಳಕ್ಕೆ ಇಳಿದರೆ ಮುತ್ತು, ರತ್ನ, ವಜ್ರ ವೈಢೂರ್ಯಗಳು ದೊರೆಯುತ್ತವೆ. ಸಮುದ್ರದ ದಡದಲ್ಲಿದ್ದರೆ ಉಪ್ಪು, ಕಪ್ಪೆ ಚಿಪ್ಪುಗಳು ದೊರೆಯುತ್ತವೆ. ಹೀಗಾಗಿ ಆಳವಾದ ಅಧ್ಯಯನದಿಂದ ಜ್ಞಾನದ ನಿಧಿ ದೊರೆಯತ್ತದೆ. ಇದರಿಂದ ಹೆಚ್ಚಿನ ಪ್ರಯೋಜನವೂ ಇದೆ ಎಂದು ಹೇಳಿದರು.
![](https://kannadanadunews.in/wp-content/uploads/2024/03/IMG-20240315-WA0490-1024x768.jpg)
ಪುಸ್ತಕ ಮೇಳದಲ್ಲಿ ಹೆಸರಾಂತ ಸಾಹಿತಿಗಳು, ಪುಸ್ತಕ ಪ್ರೇಮಿಗಳು, ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಓದಿನ ಮಹತ್ವ ಕುರಿತು ಸಂವಾದ ಕಾರ್ಯಕ್ರಮಗಳು ಕೂಡ ನಡೆಯಿತು.