ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರಲು ಕ್ರಮ

ಹುಬ್ಬಳ್ಳಿ , ಮಾರ್ಚ್, 7 : ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಇಂದು ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂ ಯರಗುಪ್ಪಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿನಿ ಚೈತ್ರಾ ಗಂಗಾಧರ ಸಂಶಿಯವರನ್ನು ಬರಮಾಡಿಕೊಂಡ ಮುಖ್ಯಮಂತ್ರಿಯವರು ಮಾಧ್ಯಮದವರೊಂದಿಗೆ ಮಾತನಾಡಿದರು. ಉಕ್ರೇನ್ ನ ಕಾರ್ಕೀವ್ ನಲ್ಲಿ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಚೈತ್ರಾ ಗಂಗಾಧರ ಸಂಶಿ ಇಂದು ಕನ್ನಡ ನಾಡಿಗೆ ವಾಪಸ್ಸಾಗಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನ ಯುದ್ಧ ಸ್ಥಳದಲ್ಲಿ ಬಹಳಷ್ಟು ಭಾರತೀಯರು ಸಿಲುಕಿಕೊಂಡಿದ್ದರು. ಚೈತ್ರಾ ಸುಮಾರು 7 ದಿನ ತಾನು ವಾಸಿಸುತ್ತಿದ್ದ ಬಂಕರ್ ನಲ್ಲಿದ್ದು ನಂತರ 9 ಕಿ.ಮೀ. ನಡೆದುಕೊಂಡು ಉಕ್ರೇನ್ ಗಡಿಯನ್ನು ದಾಟಿ ಪೊಲ್ಯಾಂಡ್ ಗೆ ಬಂದ ನಂತರ ಭಾರತೀಯ ರಾಯಭಾರಿ ಕಚೇರಿಯ ಸಹಾಯದಿಂದ ವಿಮಾನದ ಮೂಲಕ ದೆಹಲಿಗೆ ಬಂದು ಇಂದು ಕರ್ನಾಟಕಕ್ಕೆ ಬಂದಿಳಿದಿದ್ದಾರೆ. ಮಗಳ ಸುರಕ್ಷತೆಯ ಬಗ್ಗೆ ಆತಂಕಗೊಂಡಿದ್ದ ಅವರ ತಂದೆತಾಯಿ ಇಂದು ತಮ್ಮ ಮಗಳನ್ನು ಅತ್ಯಂತ ಸಂತೋಷದಿಂದ ಬರಮಾಡಿಕೊಂಡಿದ್ದಾರೆ. ತಮ್ಮ ಮಕ್ಕಳು ವಿದ್ಯಾರ್ಜನೆಗೆ ದೂರದ ದೇಶಗಳಿಗೆ ಹೋದಾಗ ಯುದ್ಧದ ಸಂದರ್ಭಕ್ಕೆ ಸಿಲುಕಿ ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ. ಕೇಂದ್ರ ಸರ್ಕಾರದ ಪ್ರಯತ್ನ ಹಾಗೂ ದೇವರ ಆರ್ಶೀವಾದದಿಂದ ಚೈತ್ರಾ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ ಎಂದು ತಿಳಿಸಿದರು.

ಧಾರವಾಡ ಜಿಲ್ಲೆಯ 4 ಜನ ಉಕ್ರೇನ್ ನಲ್ಲಿದ್ದು, ಇಬ್ಬರು ಬಂದಿದ್ದಾರೆ, ಉಳಿದಿಬ್ಬರು ಉಕ್ರೇನ್ ಗಡಿ ದಾಟಿರುವ ಮಾಹಿತಿ ಬಂದಿದೆ. ಅವರನ್ನೂ ಕೂಡ ಆದಷ್ಟು ಬೇಗನೇ ರಾಜ್ಯಕ್ಕೆ ಕರೆತರುವ ವಿಶ್ವಾಸವಿದೆ. ಸುಮಾರು ಕರ್ನಾಟಕದ 200 ಜನ ಕಾರ್ಕೈವ್ ನಲ್ಲಿ ಸಿಲುಕಿದ್ದು, ಬಂಕರ್ ಗಳಲ್ಲಿ ಇದ್ದಾರೆ. ಅವರನ್ನೂ ಸುರಕ್ಷಿತವಾಗಿ ಕರೆತರುವ ಬಗ್ಗೆ ಭಾರತೀಯ ರಾಯಭಾರಿ ಕಚೇರಿ ಪ್ರಯತ್ನಿಸುತ್ತಿದೆ. ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವರ ಜೊತೆಗೂ ನಿರಂತರ ಸಂಪರ್ಕದಲ್ಲಿರಲಾಗಿದೆ. ಪ್ರಧಾನಿ ಮೋದಿಯವರೇ ಸ್ವತ: ಈ ವಿಷಯದ ಬಗ್ಗೆ ನಿಗಾವಹಿಸಿದ್ದು, ದೊಡ್ಡ ಪ್ರಮಾಣದ ಏರ್ ಲಿಫ್ಟ್ ಮೂಲಕ ಮಕ್ಕಳನ್ನು ಭಾರತಕ್ಕೆ ಕರೆತರುವ ಕೆಲಸವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿವಿಧ ದೇಶಗಳೊಂದಿಗಿರುವ ಸೌಹಾರ್ದಯುತ ಸಂಬಂಧದಿಂದಾಗಿ ಮಕ್ಕಳ ಸುರಕ್ಷಿತ ತೆರವು ಕಾರ್ಯ ಸಾಧ್ಯವಾಗುತ್ತಿದೆ ಎಂದರು.

ನವೀನ್ ಗ್ಯಾನಗೌಡರ್ ಅವರ ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿರುವ ಬಗ್ಗೆ ಮಾಹಿತಿಯಿದ್ದು, ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಮೃತ ನವೀನ್ ರ ದೇಹವನ್ನು ರಾಜ್ಯಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಚೈತ್ರಾ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿರುವುದು ಶುಭ ಸಂಕೇತ. ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದಿರಬೇಕು. ಮುಂದಿನ ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ಕರೆತರಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಉಕ್ರೇನ್ ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Leave a Comment

Your email address will not be published. Required fields are marked *

Translate »
Scroll to Top