ವಿಜಯನಗರ ಯುನೈಟೆಡ್ ಕ್ರೀಡಾ ಮತ್ತು ಸಾಂಸ್ಕತಿಕ ಸಂಸ್ಥೆಯಿಂದ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಮೂರು ದಿನಗಳ ಫುಟ್ಬಾಲ್ ಪಂದ್ಯಾವಳಿ – ಹಿರಿಯ, ಕಿರಿಯ ಮತ್ತು ಬಾಲಕಿಯರ ವಿಭಾಗದಲ್ಲಿ ರಾಜ್ಯಮಟ್ಟದ ಸ್ಪರ್ಧೆ
ಬೆಂಗಳೂರು : ವಿಜಯನಗರ ಯುನೈಟೆಡ್ ಕ್ರೀಡಾ ಮತ್ತು ಸಾಂಸ್ಕತಿಕ ಸಂಸ್ಥೆಯಿಂದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಹೊನಲು ಬೆಳಕಿನ ಮೂರು ದಿನಗಳ ರಾಜ್ಯಮಟ್ಟದ ಫುಟ್ಬಾಲ್ ಕಪ್ 2024 ಪಂದ್ಯಾವಳಿಗೆ ವಿಜಯನಗರದ ಹಂಪಿನಗರ ಚಂದ್ರಶೇಖರ್ ಆಜಾದ್ ಕೀಡ್ರಾಂಗಣದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿಜಯನಗರ ಬಿಜೆಪಿ ಮುಖಂಡ ರವೀಂದ್ರ, ವಾಸವಿ ಗ್ರೂಪ್ ಕಾರ್ಯದರ್ಶಿ ಡಿ.ಆರ್. ವಿಜಯ ಸಾರಥಿ ಮತ್ತು ವಿಜಯನಗರ ಯುನೈಟೆಡ್ ಕ್ರೀಡಾ ಮತ್ತು ಸಾಂಸ್ಕತಿಕ ಸಂಸ್ಥೆಯ ತಂಡದ ಸುನೀಲ್ ಮತ್ತು ಧ್ರುವ ಮತ್ತಿತರರು ಇದ್ದರು.
ಬಾಲಕಿಯರ ವಿಭಾಗದಲ್ಲಿ 8 ತಂಡಗಳು, 45 ವರ್ಷಕ್ಕಿಂತ ಮೇಲ್ಪಟ್ಟ ವೆಟರನ್ಸ್ ವಿಭಾಗದಲ್ಲಿ 8 ತಂಡಳಿದ್ದು, 18 ವರ್ಷದ ವಯೋಮಿತಿ ನಂತರದ ಓಪನ್ ಟೂರ್ನಿ ವಿಭಾಗದಲ್ಲಿ 26 ತಂಡಗಳು ಪಾಲ್ಗೊಂಡಿವೆ. ಓಪನ್ ಟೂರ್ನಿಯಲ್ಲಿ ವಿಜೇತ ತಂಡಕ್ಕೆ 1,11,111 ರೂ ಮತ್ತು ರನ್ನರ್ ಅಪ್ ತಂಡಕ್ಕೆ 55,555 ರೂಪಾಯಿ ಬಹುಮಾನ ನೀಡಲಾಗುತ್ತಿದೆ. ಬಾಲಕಿಯರು, ಶಾಲೆಗಳು ಮತ್ತು ವೆಟರನ್ಸ್ ವಿಭಾಗದಲ್ಲಿ ಗೆದ್ದ ತಂಡಗಳಿಗೂ ಸೂಕ್ತ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಗುತ್ತಿದೆ.
ವಾಸವಿ ಗ್ರೂಪ್ ಕಾರ್ಯದರ್ಶಿ ಡಿ.ಆರ್. ವಿಜಯ ಸಾರಥಿ ಮಾತನಾಡಿ, ವಿದ್ಯಾರ್ಥಿ ಸಮುದಾಯದಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದು ಅತ್ಯಂತ ಅಗತ್ಯವಾಗಿದ್ದು, ಕ್ರೀಡೆ ಮನೋವಿಕಾಸಕ್ಕೆ ಪೂರಕವಾಗಿದೆ. ಸದೃಢ ದೇಹವಿದ್ದರೆ ಸದೃಢ ಮನಸ್ಸಿರುತ್ತದೆ ಎಂದು ಹೇಳಿದರು.